ಲಕ್ಷಾಂತರ ರೂಪಾಯಿ ಮೆಟಲ್ ಕ್ರಾಸ್ ಬ್ಯಾರಿಯರ್ ಕಳ್ಳತನ: ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯ
ರಾಮನಗರ ಜನವರಿ 24: ರಾಜ್ಯದಲ್ಲಿ ತಡೆ ಗೋಡೆಯಿಲ್ಲದ ಕೆರೆಗಳಿಗೆ ವಾಹನಗಳು ಬಿದ್ದ ಹಲವು ಪ್ರಕರಣಗಳಲ್ಲಿ ಜೀವ ಹಾನಿಯಾದ ಹಿನ್ನಲೆಯಲ್ಲಿ ಅಪಾಯಕಾರಿ ಕೆರೆಗಳಿಗೆ ವಾಹನ ಸವಾರರ ಜೀವ ರಕ್ಚಣೆ ಮಾಡುವ ನಿಟ್ಟಿನಲ್ಲಿ ಕಬ್ಬಣದ ತಡೆ ಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಜೀವ ರಕ್ಷಕವಾದ ಮೆಟಲ್ ಕ್ರಾಸ್ ಬ್ಯಾರಿಯರ್ಗೆ ಕಳ್ಳರಿಂದ ರಕ್ಷಣೆ ಇಲ್ಲಾದಂತಾಗಿದೆ.
ಜಿಲ್ಲೆಯ ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣ ತಾಲೂಕಿನ ಹಲವು ಕೆರೆ ಏರಿಗಳ ಬಳಿ ವಾಹನ ಸವಾರರ ಸುರಕ್ಷತೆಗೆ ಅಳವಡಿಸಲಾಗಿರುವ ಕಬ್ಬಿಣದ ತಡೆಗೋಡೆ ( ಮೆಟಲ್ ಕ್ರಾಸ್ ಬ್ಯಾರಿಯರ್ ) ಗಳಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬ್ಯಾರಿಯರ್ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡುವ ಜಾಲ ತಾಲೂಕಿನಲ್ಲಿ ಸಕ್ರಿಯವಾಗಿದೆ.
ಜನರ ಜೀವರಕ್ಷಣೆಯ ಉದ್ದೇಶದಿಂದ ಕೆರೆಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಮೆಟಲ್ ಕ್ರಾಸ್ ಬ್ಯಾರಿಯರ್ಗಳು ಕತ್ತಲು ಕಳೆದು ಬೆಳಕಾಗುವಷ್ಟರಲ್ಲಿ ಕಣ್ಮರೆಯಾಗುತ್ತಿದ್ದು, ನಿನ್ನೆ ಇದ್ದ ಬ್ಯಾರಿಯರ್ ಇಂದು ಹೇಗೆ ಮಾಯವಾಯಿತು ಎಂದು ಜನರು ತಲೆಕೆಡಿಸಿಕೊಳ್ಳುವಂತಾಗಿದೆ.
ಜನರ ಸುರಕ್ಷತೆ ದೃಷ್ಟಿಯಿಂದ ತಾಲೂಕಿ ವಿವಿಧ ಗ್ರಾಮಗಳಲ್ಲಿರುವ ಬಹುತೇಕ ಕೆರೆಗಳಿಗೆ ಮೆಟಲ್ ಕ್ರಾಸ್ ಬ್ಯಾರಿಯರ್ ಅಳವಡಿಸಲಾಗಿದೆ. ರಸ್ತೆಯಲ್ಲಿ ತಿರುಗಾಡುವ ವಾಹನಗಳು ಆಯತಪ್ಪಿ ಕೆರೆಗೆ ಬೀಳದಿರಲಿ ಎಂಬ ಉದ್ದೇಶದಿಂದ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬ್ಯಾರಿಯರ್ ಗಳನ್ನು ಅಳವಡಿಸಿದೆ. ಆದರೆ, ಇಂತಹ ಬ್ಯಾರಿಯರ್ಗಳ ಮೇಲೆ ಕಣ್ಣು ಹಾಕಿರುವ ಖದೀಮರ ತಂಡ ರಾತ್ರಿ ವೇಳೆ ಬ್ಯಾರಿಯರ್ಗಳನ್ನೇ ಬಿಚ್ಚಿ ಕದ್ದೋಯ್ಯುತ್ತಿದ್ದಾರೆ.
ನೂರಾರು ಮೀಟರ್ ಬ್ಯಾರಿಯರ್ ಕದಿಯಲು ವಿಫಲ ಯತ್ನ
ಚನ್ನಪಟ್ಟಣ ತಾಲೂಕಿನ ಹೊಂಗನೂರು, ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ, ಮುಳ್ಳಿ ಕೆರೆ, ಕೋಡಂಬಳ್ಳಿ ಹಾಗೂ ಸುಳ್ಳೇರಿ ಕೆರೆಗಳಿಗೆ ಅಳವಡಿಸಲಾಗಿದ್ದ ಬ್ಯಾರಿಯರ್ಗಳು ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ತಾಲೂಕಿನ ತಿಟ್ಟಮಾರನಹಳ್ಳಿ ಬಳಿಯ ರಾಮಮ್ಮನ ಕೆರೆಗೆ ಅಳವಡಿಸಲಾಗಿದ್ದು ಸುಮಾರು ಅರ್ಧ ಕಿ.ಮಿ. ಉದ್ದದ ಮೆಟಲ್ ಕ್ರಾಸ್ ಬ್ಯಾರಿಯರ್ಗಳನ್ನು ಕಳ್ಳತನ ಮಾಡಿದ್ದರು. ಎರಡು ದಿನಗಳ ಅಂತರದಲ್ಲೇ ಮತ್ತೆ ಅರ್ಧ ಕಿಲೋಮೀಟರ್ ಉದ್ದದ್ದ ಬ್ಯಾರಿಯರ್ಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ.
ಇದಲ್ಲದೇ ನಾಲ್ಕು ದಿನಗಳ ಅಂತರದಲ್ಲಿ ತಾಲೂಕಿನ ಹೊಂಗನೂರು ಗ್ರಾಮದ ಕೆರೆ ಏರಿಗೆ ಅಡ್ಡಲಾಗಿ ಅಳವಡಿಸಿರುವ ಬ್ಯಾರಿಯರ್ಗಳನ್ನು ಕದ್ದಿರುವ ಕಳ್ಳರು ಇದೇ ವೇಳೆ ಸುಳ್ಳೇರಿ ಗ್ರಾಮದ ಕೆರೆ ಏರಿಗೆ ಅಳವಡಿಸಿದ್ದ ಬ್ಯಾರಿಯರ್ಗಳನ್ನು ನೂರಾರು ಮೀಟರ್ ಬ್ಯಾರಿಯರ್ ಗಳನ್ನು ಕಳವು ಮಾಡಲು ವಿಫಲ ಯತ್ನ ಮಾಡಿದ್ದಾರೆ.
ಹೊಂಗನೂರು ಗ್ರಾಮದಲ್ಲಿ 900 ಮೀಟರ್ ಬ್ಯಾರಿಯರ್ ಕಳವು
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೆರೆ ಏರಿ ಮೇಲೆ ಅಳವಡಿಸಿರುವ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಟಲ್ ಕ್ರಾಸ್ ಬ್ಯಾರಿಯರ್ಗಳು ಖದೀಮರ ಪಾಲಾಗಿದೆ. ತಾಲೂಕಿನ ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ ಬಳಿ ಅಳವಡಿಸಲಾಗಿದ್ದ ಬ್ಯಾರಿಯರ್ ಪೈಕಿ ಒಂದು ಪಾಶ್ರ್ವದಲ್ಲಿ 32 ಮೀಟರ್ ಉದ್ದದ್ದ ಬ್ಯಾರಿಯರ್ಗಳನ್ನು ಕಳ್ಳತನವಾಗಿದೆ. ಇನ್ನೊಂದು ಭಾಗದಲ್ಲಿ 172 ಮೀಟರ್ ಬ್ಯಾರಿಯರ್ ಕಳವು ಮಾಡಲಾಗಿದೆ. ಹೊಂಗನೂರು ಗ್ರಾಮದ ಕೆರೆ ಏರಿ ಮೇಲೆ ನಿರ್ಮಿಸಿದ್ದ ಸುಮಾರು 900 ಮೀಟರ್ ಬ್ಯಾರಿಯರ್ ಅನ್ನು ಕಳವು ಮಾಡಲಾಗಿದ್ದು, ಇದರ ಮೌಲ್ಯ ಸುಮಾರು 2.30 ಲಕ್ಷ ಎಂದು ಅಂದಾಜಿಸಲಾಗಿದೆ. ಇದಲ್ಲದೇ ಮುಳ್ಳಿ ಕೆರೆಯ ಬಳಿಯಿಂದ 100 ಮೀಟರ್, ಕೋಡಂಬಳ್ಳಿಯಲ್ಲಿ 150 ಮೀಟರ್ ಬ್ಯಾರಿಯರ್ ಕಳವು ಮಾಡಲಾಗಿದೆ.
ಕೆರೆ ಏರಿಯ ಜನರ ಕಬ್ಬಿಣದ ತಡೆಗೋಡೆ ಜಿಐ ಸ್ಟೀಲ್ ಮೆಟೀರಿಯಲ್ ಬಳಸಿ ಮೆಟಲ್ ಕ್ರಾಸ್ ಬ್ಯಾರಿಯರ್ಗಳನ್ನು ತಯಾರು ಮಾಡಲಾಗುತ್ತದೆ. ಕೆರೆ ಏರಿಗೆ ಒಂದು ಮೀಟರ್ ಕ್ರಾಸ್ ಬ್ಯಾರಿಯರ್ ಅಳವಡಿಸಲು ಸರ್ಕಾರಕ್ಕೆ ನಾಲ್ಕು ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಈ ಲೆಕ್ಕದಲ್ಲಿ ಒಂದೊಂದು ಕೆರೆ ಏರಿ ಮೇಲೆ ಕ್ರಾಸ್ ಬ್ಯಾರಿಯರ್ ಅಳವಡಿಸಲು ಲಕ್ಷಾಂತರ ರೂಪಾಯಿ ವ್ಯಯವಾಗುತ್ತಿದ್ದು, ರಾತ್ರಿ ಕಳೆದು ಬೆಳಗಾಗುಷ್ಟರಲ್ಲಿ ಇದು ಕಳ್ಳರ ಪಾಲಾಗುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ದಿವ್ಯ ನಿರ್ಲಕ್ಷ್ಯ
ರಸ್ತೆ ಬದಿಯಲ್ಲಿ ಅಳವಡಿಸಿರುವ ಬ್ಯಾರಿಯರ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಬಿಚ್ಚಿ ಕದ್ದೋಯ್ಯುವುದು ಅಷ್ಟು ಸುಲಭವಲ್ಲ. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಇದು ಯಾರೋ ಒಂದಿಬ್ಬರು ಕಳ್ಳರ ಕೆಲಸವಲ್ಲ, ಪಳಗಿದ ತಂಡವೇ ಈ ಕೃತ್ಯದಲ್ಲಿ ಭಾಗಿಯಾಗಿದೆ ಎನ್ನಲಾಗಿದ್ದು, ರಾತ್ರಿ 10 ಗಂಟೆಯ ನಂತರ ಜನ ಸಂಚಾರ ಇಲ್ಲದ ಸಮಯದಲ್ಲಿ ತಮ್ಮ ಕೈಚಳಕ ತೋರುತ್ತಿದ್ದಾರೆ. ಮೆಟಲ್ ಕ್ರಾಸ್ ಬ್ಯಾರಿಯರ್ ಕದಿಯುತ್ತಿರುವ ಕಳ್ಳರನ್ನು ಹಿಡಿದು ಹೆಡೆಮುರಿ ಕಟ್ಟುವ ಜವಾಬ್ದಾರಿ ಪೊಲೀಸರ ಮೇಲಿದೆ.
ಕೆರೆ ಏರಿ ಮೇಲೆ ಬ್ಯಾರಿಯರ್ಗಳನ್ನು ಅಳವಡಿಸುವುದು ಹಾಗೂ ಅದರ ನಿರ್ವಹಣೆಯ ಜವಾಬ್ದಾರಿ ಲೋಕೋಪಯೋಗಿ ಇಲಾಖೆ ಹೊತ್ತುಕೊಂಡಿದೆ. ಆದರೆ ತಾಲೂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬ್ಯಾರಿಯರ್ಗಳ ಕಳವು ನಡೆಯುತ್ತಿದ್ದರೂ ಸಹ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ತಾಲೂಕಿನ ಪ್ರಥಮ ಭಾರಿಗೆ ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ ಬಳಿ ಕೆಲ ಮೀಟರ್ಗಳಷ್ಟು ಮೆಟಲ್ ಕ್ರಾಸ್ ಬ್ಯಾರಿಯರ್ಗಳನ್ನು ಬಿಚ್ಚಿಕೊಂಡು ಹೋಗಿಲಾಗಿದ್ದು, ಈ ವೇಳೆ ಇದನ್ನು ಲೋಕಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿ ಮಾಡಿದರು. ಅಧಿಕಾರಿಗಳ ನಿರ್ಲಕ್ಷ್ಯವನ್ನೇ ಬಂಡವಾಳ ಮಾಡಿಕೊಂಡ ಖದೀಮರು ಹಲವು ಕಡೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೆಟಲ್ ಕ್ರಾಸ್ ಬ್ಯಾರಿಯರ್ ಕಳುವು ಮಾಡಲಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಸಾರ್ವಜನಿಕರು ಮಾಹಿತಿ ನೀಡುವಂತೆ ಅಧಿಕಾರಿಗಳ ಮನವಿ
ಲಕ್ಷಾಂತರ ಮೌಲ್ಯದ ಸುರಕ್ಷತಾ ತಡೆಗೋಡೆ (ಮೆಟಲ್ ಕ್ರಾಸ್ ಬ್ಯಾರಿಯರ್ ) ಕಳ್ಳತದ ಬಗ್ಗೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆಯ ಕಸಬಾ ಉಪ ವಿಭಾಗದ ಎಇಇ ರಾಜಣ್ಣ , "ಸುರಕ್ಷಿತೆಯ ದೃಷ್ಟಿಯಿಂದ ಕೆರೆ ಏರಿಗಳಿಗೆ ಅಳವಡಿಸಲಾಗಿದ್ದ, ಮೆಟಲ್ ಕ್ರಾಸ್ ಬ್ಯಾರಿಯರ್ಗಳನ್ನು ಯಾರೋ ಕಳವು ಮಾಡಿದ್ದಾರೆ. ಈ ಹಿಂದೆಯೇ ಇದರ ಕುರಿತು ದೂರು ನೀಡಲಾಗಿದ್ದು, ಮತ್ತೊಮ್ಮೆ ದೂರು ನೀಡಲಾಗುವುದು. ಈ ಕುರಿತು ಸಾರ್ವಜನಿಕರಲ್ಲಿ ಯಾರ ಬಗ್ಗೆಯಾದರೂ ಅನುಮಾನ ಅಥವಾ ಮಾಹಿತಿ ಇದ್ದರೆ ತಿಳಿಸಿದರೆ ಖದೀಮರ ಪತ್ತೆಗೆ ಸಹಾಯವಾಗುತ್ತದೆ" ಎಂದು ಜನರಲ್ಲಿ ಮನವಿ ಮಾಡಿದ್ದಾರೆ.