ಯೋಗೇಶ್ವರ್ ಮಾತು ಉಳಿಸಿಕೊಳ್ಳದ ವಚನಭ್ರಷ್ಟ ಎಂದ ಡಿಕೆಶಿ
ರಾಮನಗರ, ಏಪ್ರಿಲ್ 18 : "ಸಿ.ಪಿ.ಯೋಗೇಶ್ವರ್ ವಚನ ಭ್ರಷ್ಟ. ಆತ ಕೊಟ್ಟ ಮಾತನ್ನು ಉಳಿಕೊಳ್ಳಲಿಲ್ಲ. ಅವರ ಬಣ್ಣವನ್ನು ಈ ಕ್ಷೇತ್ರದ ಮತದಾರರು ತೊಳೆಯಲಿದ್ದಾರೆ" ಎಂದು ಬುಧವಾರ ನಡೆದ ಚನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಯೇಗೇಶ್ವರ್ ಗೆ ಮೂರು ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರೀತಿ ಹೆಚ್ಚಾಗಿದೆ. ಸಿಪಿವೈ ಎಲ್ಲಿ ಮಂತ್ರಿಯಾಗುತ್ತಾರೆ? ಅವರ ಪಕ್ಷ ಅಧಿಕಾರಕ್ಕೆ ಬಂದರೆ ತಾನೆ? ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೆ ನಮ್ಮ ಪಕ್ಷದ ಅಭ್ಯರ್ಥಿಗಳ ಹಿಂದೆ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ರೈತರ ಸಾಲ ಮನ್ನಾ ಮಾಡಬಹುದಿತ್ತು. ಅದರೆ ಯಡಿಯೂರಪ್ಪ, ನಮ್ಮ ಬಳಿ ಪ್ರಿಂಟಿಂಗ್ ಮಿಷನ್ ಇದೆಯಾ ಅಂತಾರೆ. ಹಾಗೇ ಜೆಡಿಎಸ್ ನವರು ಮುಂದೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಈ ಹಿಂದೆ ಇಪ್ಪತ್ತು ತಿಂಗಳು ಅವರೇ ಸಿ.ಎಂ ಆಗಿದ್ದರು. ಅವರ ತಂದೆ ಪ್ರದಾನಿಯಾಗಿದ್ದರು. ಆಗ ರೈತರ ಸಾಲ ಮನ್ನಾ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದರು.

ಎಚ್.ಡಿ.ಕುಮಾರಸ್ವಾಮಿ ಚುನಾವಣೆಗೆ ಎಂದು ಬಂದಿದ್ದಾರೆ. ಚುನಾವಣೆ ಮುಗಿದ ಮೇಲೆ ಹೋಗುತ್ತಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು. ಬಿಜೆಪಿ ಹಾಗೂ ಜೆಡಿಎಸ್ ನ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಬಾಂಬ್ ಸಿಡಿಸಿದರು.
ನನಗೆ ಚನ್ನಪಟ್ಟಣ ಕ್ಷೇತ್ರದಲ್ಲೇ ಅಭ್ಯರ್ಥಿ ಆಗಬೇಕೆಂದು ಆಸೆ ಇತ್ತು. ಅದರೆ ನನಗೆ ಪಕ್ಷ ದೊಡ್ಡ ಜವಾಬ್ದಾರಿ ವಹಿಸಿದೆ. ಎಲ್ಲ ಸಮೀಕ್ಷೆಗಳು ನಮ್ಮ ಕಾಂಗ್ರೆಸ್ ಪಕ್ಷದ ಪರವಾಗಿ ಬರುತ್ತಿವೆ. ಕಾಂಗ್ರೆಸ್ 140 ಸ್ಥಾನ ದಾಟುತ್ತೇವೆ. ಇನ್ನು ರಾಮನಗರ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಶುಕ್ರವಾರ (ಏಪ್ರಿಲ್ 20) ಎಚ್.ಎಂ.ರೇವಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಕಾರ್ಯಕರ್ತರು ಬೈಕ್ ಗಳಲ್ಲಿ ಬನ್ನಿ. ಅದರೆ ಯಾವುದೇ ಪಕ್ಷದ ಬಾವುಟಗಳನ್ನು ಕಟ್ಟಿಕೊಂಡು ಬರಬೇಡಿ ಎಂದು ವೇದಿಕೆಯಲ್ಲೇ ಕಾರ್ಯಕರ್ತರಿಗೆ ನೀತಿ ಸಂಹಿತೆ ಬಗ್ಗೆ ತಿಳಿಹೇಳಿದರು.












Click it and Unblock the Notifications