ಕರ್ನಾಟಕ ಬಂದ್ ಕರೆ ಕೆಲವರಿಗೆ ಹವ್ಯಾಸ, ನನ್ನ ಬೆಂಬಲವಿಲ್ಲ: ಎಚ್ ಡಿಕೆ
ರಾಮನಗರ, ಜನವರಿ 24: ಬಂದ್ ಮಾಡಿಸುವುದರಿಂದ ಅಗುವ ಪರಿಣಾಮದ ಬಗ್ಗೆ ಅರಿವಿಲ್ಲ. ಕೆಲವರಿಗೆ ಬಂದ್ ಮಾಡಿಸುವುದು ಹವ್ಯಾಸವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಗಡಿ ಹೆಲಿಪ್ಯಾಡ್ ನಲ್ಲಿ ಹೇಳಿದರು.
ಮಹಾದಾಯಿ ಹೋರಾಟಗಾರರೇ ಗುರುವಾರ ಬಂದ್ ಬೇಡ ಎಂದು ಹೇಳುತ್ತಿದ್ದಾರೆ. ಅದರೆ ವಾಟಾಳ್ ನಾಗರಾಜ್ ಯಾವ ಕಾರಣಕ್ಕೆ ಬಂದ್ ಗೆ ಕರೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಬಂದ್ ಮಾಡುವುದರಿಂದ ಮಹಾದಾಯಿ ಸಮಸ್ಯೆ ಪರಿಹಾರ ಆಗುವುದಿಲ್ಲ. ಬದಲಾಗಿ ನಮ್ಮ ಜನರೇ ತೊಂದರೆ ಅನುಭವಿಸುತ್ತಾರೆ ಎಂದರು.
ರಾಜ್ಯ ಬಂದ್ ನಿಂದ ಮಹಾದಾಯಿ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಬಂದ್ ಬೆಂಬಲಿಸಬಹುದಿತ್ತು. ಬಂದ್ ನಿಂದ ಜನರ ಮೇಲೆ ದುಷ್ಪರಿಣಾಮ ಆಗುತ್ತದೆ. ಹಾಗಾಗಿ ಬಂದ್ ಬೇಕಿಲ್ಲ ಎಂಬುದು ನನ್ನ ಅನಿಸಿಕೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸರಕಾರದ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸರಕಾರ ಚುನಾವಣೆ ಎದುರಿಸಲು ಮುಂದಾಗಿದೆ. ಪ್ರತಿ ಕ್ಷೇತ್ರದಲ್ಲೂ ಆಢಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಜಗಜ್ಜಾಹೀರಾಗಿದೆ ಎಂದು ಹೇಳಿದರು.
ಇನ್ನು ಎರಡು- ಮೂರು ತಿಂಗಳಲ್ಲಿ ಇವೆಲ್ಲಕ್ಕೂ ಕಡಿವಾಣ ಬೀಳಲಿದೆ. ಅಧಿಕಾರಿಗಳು ಕೂಡ ಸಚಿವರ, ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳ ವರ್ಗಾವಣೆ ಪ್ರಕರಣ ಸರಕಾರ ಮತ್ತು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದೆ ಎಂಬುದನ್ನು ತೋರಿಸುತ್ತದೆ ಎಂದರು.
ಇದರಿಂದ ರಾಜ್ಯದ ಅಭಿವೃದ್ಧಿ ಕುಠಿತವಾಗುತ್ತದೆ ಮತ್ತು ಜನರಿಂದ ಸರಕಾರ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.












Click it and Unblock the Notifications