ಮಳೆ ನೀರಿನ ಸೆಳೆತಕ್ಕೆ ಕೊಚ್ಚಿಹೋದ ಸೇತುವೆ, ಕಣ್ವ ಜಲಾಶಯದ ಸಂಪರ್ಕ ಕಡಿತ
ಚನ್ನಪಟ್ಟಣ, ಸೆಪ್ಟೆಂಬರ್, 02: ಚನ್ನಪಟ್ಟಣದಲ್ಲಿ ಭಾರಿ ಮಳೆ ಸುರಿದಿದ್ದು, ಮಳೆ ನೀರು ಕಾಲುವೆಗಳಲ್ಲಿ ನದಿಯಂತೆ ಹರಿದಿದೆ. ಪರಿಣಾಮ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದ್ದು, ಪ್ರಸಿದ್ಧ ಕಣ್ವ ಜಲಾಶಯದ ಸಂಪರ್ಕ ರಸ್ತೆ ಸ್ಥಗಿತಗೊಂಡಿದೆ.
ಚನ್ನಪಟ್ಟಣ ತಾಲೂಕಿನಲ್ಲಿ ವಾಡಿಕೆಗಿಂತ ನೂರು ಪಟ್ಟು ಹೆಚ್ಚು ಮಳೆಯಾಗಿ ಎಲ್ಲಾ ಕೆರೆಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಹಳ್ಳ ಕೊಳ್ಳಗಳಲ್ಲಿ ರಭಸವಾಗಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಕಣ್ವ ಜಲಾಶಯ ಸಂಪರ್ಕಿಸುವ ಕನ್ನಮಂಗಲ ರಸ್ತೆಯಲ್ಲಿ ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಹತ್ತಾರು ಹಳ್ಳಿಗಳ ಜನರಿಗೆ ತಿರುಗಾಡಲು ರಸ್ತೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಕನ್ನಮಂಗಲ ಗ್ರಾಮದ ಸಮೀಪದ ಕಡಿದಾದ ಇಳಿಜಾರಿನ ಬಳಿ ಹಳ್ಳದ ನೀರು ರಭಸವಾಗಿ ಹರಿಯುತ್ತಿದ್ದ ಪರಿಣಾಮ ರಸ್ತೆ ಕೊಚ್ಚಿ ಹೋಗಿದೆ. ಸೇತುವೆ ಕೊಚ್ಚಿ ಹೋದ ಸ್ಥಳದಲ್ಲಿ ಸುಮಾರು 30 ಅಡಿಗಳಷ್ಟು ಆಳದ ಗುಂಡಿಗಳು ಬಿದ್ದಿವೆ. ಈ ಮಾರ್ಗದಲ್ಲಿ ಯಾವುದೇ ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಉಂಟಾಗಿದೆ.

ಕಣ್ವ ಜಲಾಶಯದ ರಸ್ತೆಯ ಸಾಧನ ಸಂಗಮ ಶಾಲೆಯಿಂದ ಕಡಿದಾದ ಇಳಿಜಾರಿನ ಬಳಿ ಇರುವ ಹಳ್ಳ ಕೂಡ ಕೆಲ ದಿನಗಳಿಂದ ತುಂಬಿ ಹರಿಯುತಿದೆ. ನೀರಿನ ರಭಸಕ್ಕೆ ಕೆಳಭಾಗದ ಸೇತುವೆ ಜಖಂಗೊಂಡು, ರಸ್ತೆ ಕುಸಿತವಾಗಿ ಅಪಾರ ಪ್ರಮಾಣದ ಮಣ್ಣು ನೀರಿನ ಸೆಳತಕ್ಕೆ ಕೊಚ್ಚಿ ಹೋಗಿದೆ. ಇದನ್ನು ದುರಸ್ತಿ ಮಾಡಿಸಲು ಅಧಿಕಾರಿಗಳು ಯಾರು ಮುಂದಾಗದ ಕಾರಣ ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.

ಕಣ್ವ ಜಲಾಶಯದ ಪರ್ಯಾಯ ಮಾರ್ಗ ಬಂದ್
ಮಳೆ ರಾಯನ ಆರ್ಭಟದಿಂದಾಗಿ ಕನ್ನಮಮಂಗಲ ರಸ್ತೆ ಕೊಚ್ಚಿ ಹೋಗಿದ್ದು, ಕಣ್ವ ಜಲಾಶಯಕ್ಕೆ ಸಂಪರ್ಕ ಕಡಿತ ಗೊಂಡಿದೆ. ಚನ್ನಪಟ್ಟಣದಿಂದ ಕಣ್ವಗೆ ಹೋಗಲು ಇದ್ದ ಪ್ರಮುಖ ರಸ್ತೆ ಇದಾಗಿದ್ದು, ಈ ರಸ್ತೆ ಕುಸಿತ ಗೊಂಡಿರುವ ಹಿನ್ನೆಲೆಯಲ್ಲಿ ಕಣ್ವ ಜಲಾಶಯಕ್ಕೆ ತೆರಳಲು ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆ ಎದುರಾಗಿದೆ. ಚನ್ನಪಟ್ಟಣದಿಂದ ದಶವಾರ ಗ್ರಾಮದ ಮೂಲಕ ಸಾಗುವ ರಸ್ತೆಗೆ ಅಡ್ಡಲಾಗಿ ಕಣ್ವ ನದಿ ಹರಿಯುತ್ತಿದೆ. ಕ್ರಸ್ಟ್ ಗೇಟ್ಗಳ ಮೂಲಕ ಅಪಾರ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲೂ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಜಲಾಶಯಕ್ಕೆ ರಾಮನಗರದ ಮೂಲಕ ಬರುವ ಮಾರ್ಗ ಮಾತ್ರ ಉಳಿದಿದೆ. ಡ್ಯಾಂ ಏರಿಯ ರಸ್ತೆ ಕಿರಿದಾಗಿರುವ ಹಿನ್ನೆಲೆಯಲ್ಲಿ ಕಾರು, ಬಸ್ಗಳು ಸೇರಿದಂತೆ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಕಾಲುನಡಿಗೆ ಅಥವಾ ಬೈಕ್ ಮುಖಾಂತರ ಮಾತ್ರ ಸಂಚರಿಸಬಹುದಾಗಿದ್ದು, ಸದ್ಯಕ್ಕೆ ಕಣ್ವ ಜಲಾಶಯ ತಲುಪಲು ಜನತೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ












Click it and Unblock the Notifications