Kanakapura Constituency: ಕನಕಪುರ ಬಂಡೆ ಡಿಕೆ ಶಿವಕುಮಾರ್ಗೆ ಕ್ಷೇತ್ರದಲ್ಲಿಲ್ಲ ಯಾವುದೇ ಪೈಪೋಟಿ!, ಸಮೀಕ್ಷೆ ವರದಿ ಹೀಗಿದೆ
ರಾಮನಗರ, ಮಾರ್ಚ್ 20: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ಹಲವು ವೇದಿಕೆಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುತ್ತಿವೆ. ಇಂತಹದ್ದೇ ಒಂದು ಸಮೀಕ್ಷೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಕೆ. ಶಿವಕುಮಾರ್ಗೆ ಭರ್ಜರಿ ಗೆಲುವು ದೊರೆಯಲಿದೆ ಎಂದು ವರದಿ ಮಾಡಿದೆ.
ಕನಕಪುರವು ಅರ್ಕಾವತಿ ನದಿಯ ದಡದಲ್ಲಿರುವ ರಾಮನಗರ ಜಿಲ್ಲೆಯ ಒಂದು ನಗರ ಮತ್ತು ಅದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರವಾಗಿದೆ. ಈ ಕ್ಷೇತ್ರ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ್ದ ಕಾರಣ ದೇಶದ ಅತಿ ದೊಡ್ಡ ಕ್ಷೇತ್ರವಾಗಿತ್ತು. ರಾಜ್ಯದ ಹಚ್ಚ ಹಸಿರಿನ ಕಾಡುಗಳ ನಡುವೆ ಇದೆ. ಟ್ರಕ್ಕಿಂಗ್ ಸೇರಿ ಹಲವು ಕಾರಣಕ್ಕೆ ಕನಕಪುರ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ನಮ್ಮ ಕನಕಪುರ ಪ್ರದೇಶದಲ್ಲಿದೆ. ಕೋಡಿಹಳ್ಳಿ ವನ್ಯಜೀವಿ ಶ್ರೇಣಿ ಮತ್ತು ಹಾರೋಹಳ್ಳಿ ವನ್ಯಜೀವಿ ಶ್ರೇಣಿ ಕೂಡ ಅದರ ಭಾಗವೆ. ಕಾವೇರಿ ವನ್ಯಜೀವಿ ಅಭಯಾರಣ್ಯವು ಸಂಗಮ ವನ್ಯಜೀವಿ ಶ್ರೇಣಿ, ಮುಗೂರು ವನ್ಯಜೀವಿ ಶ್ರೇಣಿ ಎಂಬ ಎರಡು ಪ್ರಮುಖ ವಲಯಗಳನ್ನು ಒಳಗೊಂಡಿದೆ.

ಕನಕಪುರ ವಿಧಾನಸಭಾ ಕ್ಷೇತ್ರ ಈ ಹಿಂದೆ ಸಾತನೂರು ಕ್ಷೇತ್ರವಾಗಿತ್ತು. ಕ್ಷೇತ್ರ ವಿಂಗಡಣೆಯಾದ ನಂತರದಿಂದಲೂ ಇಲ್ಲಿ ಡಿ.ಕೆ. ಶಿವಕುಮಾರ್ ಸೋಲಿಲ್ಲದ ಸರದಾರ. ಇಷ್ಟೇಯಲ್ಲ ಸಾತನೂರು ಕ್ಷೇತ್ರ ಅಸ್ತಿತ್ವದಲ್ಲಿದ್ದ ಕಾಲದಿಂದಲೂ ಈವರೆಗೆ ಡಿ.ಕೆ. ಶಿವಕುಮಾರ್ ಆಯ್ಕೆಯಾಗುತ್ತ ಬಂದಿದ್ದು, ಸತತವಾಗಿ ಗೆಲುವು ಪಡೆಯುತ್ತಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಮತ್ತೆಂದೂ ಸೋಲು ಕಂಡಿಲ್ಲ. ಸದ್ಯಕ್ಕೆ ರಾಜಕೀಯವಾಗಿ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ಗೆ ಯಾವ ಎದುರಾಳಿಯೂ ಇಲ್ಲ.
ಈ ಹಿಂದೆ ನಾಲ್ಕು ಬಾರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಗೆಲ್ಲಿಸಿದ್ದ ಸಾತನೂರು ವಿಧಾನಸಭಾ ಕ್ಷೇತ್ರ, 2008 ರಲ್ಲಿ ಕ್ಷೇತ್ರ ವಿಂಗಡಣೆಯಾದ ನಂತರ ಕನಕಪುರಕ್ಕೂ ಚನ್ನಪಟ್ಟಣಕ್ಕೂ ಸೇರಿತು. ರಾಜ್ಯ ರಾಜಕಾರಣದಲ್ಲಿ ದೊಡ್ಡ ಹೆಸರಿರುವ ಡಿ.ಕೆ.ಶಿವಕುಮಾರ್ ಸದ್ಯ ಕೆಪಿಸಿಸಿ ಅಧ್ಯಕ್ಷ ಕೂಡ ಆಗಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದಾರೆ.

ಕರ್ನಾಟಕ ಚುನಾವಣೆ ಹಿನ್ನೆಲೆ ಇತ್ತ, ಲೋಕ್ ಪೋಲ್ (Lok Poll) ಮಾರ್ಚ್ 10ರಂದು ಸಮೀಕ್ಷೆ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದೆ. ಈ ಸಮೀಕ್ಷೆಯ ಪ್ರಕಾರ 116 ರಿಂದ 122 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಆಡಳಿತಾರೂಢ ಬಿಜೆಪಿಯು 77 ರಿಂದ 83 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಜೆಡಿಎಸ್ 21 ರಿಂದ 27 ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ತಿಳಿಸಿದೆ. ಈಗ ರಾಜ್ಯದ 10 ಪ್ರಮುಖ ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು ಎಂದು ಸಮೀಕ್ಷೆ ನಡೆಸಿ, ಅದರ ಫಲಿತಾಂಶ ಬಿಡುಗಡೆ ಮಾಡಿದೆ. ಅದರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಭರ್ಜರಿ ಗೆಲುವು ಸಾಧಿಸುತ್ತಾರೆ ಎಂದಿದೆ.
Constituency name: Kanakapura (AC No. 184)
— Lok Poll (@LokPoll) March 19, 2023
Candidate Name: DK Shivakumar (@DKShivakumar)
No visible cracks in DK Shivakumar's fortress, its intact.#KarnatakaElections2023 #AssemblyElections2023 #KarnatakaElection #LokPoll #LokpollKarnatakaSurvey pic.twitter.com/2EimAxcibM
ಈ ಸಮೀಕ್ಷೆ ಪ್ರಕಾರ ಡಿಕೆ ಶಿವಕುಮಾರ್ ಅವರಿಗೆ ಈ ಕನಕಪುರ ಕೋಟೆಯಲ್ಲಿ ಯಾವುದೇ ಬಿರುಕುಗಳು ಇಲ್ಲ, ಎಲ್ಲವೂ ಭದ್ರವಾಗಿದ್ದು, ಅವರು ಶೇಕಡಾ 70 ರಷ್ಟು ಮತ ಪಡೆದು ಜಯಶಾಲಿಯಾಗಲಿದ್ದಾರೆ ಎಂದಿದೆ. ಈ ಭಾಗದಲ್ಲಿ ಕಾಂಗ್ರೆಸ್ಗೆ ಎದುರಾಳಿಯಾಗಿರುವ ಜೆಡಿಎಸ್ ಶೇಕಡಾ 25, ಬಿಜೆಪಿ ಶೇಕಡಾ 04, ಇತರರು ಶೇಕಡಾ 01 ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಇನ್ನು ಡಿಕೆ ಶಿವಕುಮಾರ್ ಅವರ ಗೆಲುವಿಗೆ ಕಾರಣವಾಗಬಲ್ಲ ಅಂಶಗಳಲ್ಲಿ ಮೊದಲನೆಯದು ಅವರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದು. ತಮ್ಮ ಭಾಗದ ಶಾಸಕ ಮುಖ್ಯಮಂತ್ರಿಯಾದರೇ ಕ್ಷೇತ್ರದ ಅಭಿವೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ ಇಲ್ಲಿನ ಜನ.
ಇನ್ನೋಂದು ಅಂಶವೆಂದರೇ ಕನಕಪುರದಲ್ಲಿ ಡಿ.ಕೆ ಶಿವಕುಮಾರ್ಗೆ ಪ್ರಬಲ ವಿರೋಧ ಪಕ್ಷದ ಅಭ್ಯರ್ಥಿ ಇಲ್ಲದೇ ಇರುವುದು . ಇದು ಡಿಕೆ ಶಿವಕುಮಾರ್ ಅವರ ಕೋಟೆ ಎಂದೇ ಹೆಸರುವಾಸಿಯಾಗಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸುವುದು ಅಸಾಧ್ಯವಾಗಿದೆ. ಡಿ.ಕೆ ಶಿವಕುಮಾರ್ ಅವರು ರಾಜ್ಯ ರಾಜಕಾರಣವನ್ನೇ ಕೇಂದ್ರೀಕರಿಸಿರುವುದು ಅವರ ನೆಗೆಟಿವ್ ಅಂಶವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.












Click it and Unblock the Notifications