ಸಿಪಿ ಯೋಗೇಶ್ವರ್ ಮತ್ತು ಬೆಂಬಲಿಗರ ವಿರುದ್ಧ ಜೆಡಿಎಸ್ ಕಾರ್ಯಕರ್ತರಿಂದ ದೂರು ದಾಖಲು
ರಾಮನಗರ, ಅಕ್ಟೋಬರ್ 3: ಎರಡು ದಿನಗಳ ಹಿಂದೆ ಚನ್ನಪಟ್ಟಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಚಾಲನೆಗೆ ಮುಂದಾದನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ನೆಡಸಿದ್ದರು. ಇದೇ ಸಂದರ್ಭದಲ್ಲಿ ಸಿಪಿವೈ ಕಾರಿಗೆ ಮೊಟ್ಟೆ, ಕಲ್ಲು ತೋರಿದ್ದ ಹಾಗೂ ಪೋಲಿಸ್ ಲಾಠಿ ಚಾರ್ಜ್ ಮಾಡಿದ ಘಟನೆ ಬೂದಿಮುಚ್ಚಿದ ಕೆಂಡದಂತಾಗಿದೆ.
ಘಟನೆ ಸಂಬಂಧ ಈಗಾಗಲೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಘಟನೆ ದಿನದಂದೇ 14 ಮಂದಿ ಜೆಡಿಎಸ್ ಕಾರ್ಯಕರ್ತರ ವಿರುದ್ದ ಸಿಪಿವೈ ಕಾರು ಚಾಲಕ ದೂರು ದಾಖಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸೋಮವಾರ ಜೆಡಿಎಸ್ ವಿಧ್ಯಾರ್ಥಿ ಘಟಕದ ಅಧ್ಯಕ್ಷ ಅಶಿಶ್ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೇರಿದಂತೆ 13 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಶಿಷ್ಟಾಚಾರ ಪಾಲನೆ ಮಾಡದೆ, ಜಿಲ್ಲಾಡಳಿತ ಅಭಿವೃದ್ಧಿ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರೂ ಹಠಕ್ಕೆ ಬಿದ್ದು ಪೊಲೀಸರ ಭದ್ರತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಂದಾಗಿದನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ನಡೆಸಿದ್ದೆವು. ಪ್ರತಿಭಟನೆಯ ಸಮಯದಲ್ಲಿ ಬೈರಾಪಟ್ಟಣದಲ್ಲಿ ತಮಗೆ ಎದುರಾದ ಸಿಪಿವೈ ತಮ್ಮ ಬೆಂಬಲಿಗರ ಮೂಲಕ ಹೊಡೆಸಿ ಕೊಲೆ ಮಾಡಿಸುವುದಾಗಿ ಸಿಪಿವೈ ಬೆದರಿಕೆ ಹಾಕಿದ್ದಾರೆಂದು ಜೆಡಿಎಸ್ ಯುವ ಮುಖಂಡ ಆಶಿಷ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಸಿಪಿವೈ ಬೆಂಬಲಿಗರ ವಿರುದ್ಧ ದೂರು
ಅಲ್ಲದೇ ಯೋಗೇಶ್ವರ್ ಪ್ರಚೋದನೆ ಮೇರೆಗೆ ಎಲೆಕೇರಿ ರವೀಶ್, ಮುದಗೆರೆ ಜಯಕುಮಾರ್, ಕೋಟೆ ಸ್ವಾಮಿ, ದೊಡ್ಡಮಳೂರು ಗ್ರಾಮದ ಜಯಂತ್, ಸುರೇಂದ್ರ ರಾಜೇಶ್, ಬೈರಾಪಟ್ಟಣ ಸುರೇಶ್, ಎಪಿಎಂಸಿ ರಾಜು, ಮಳೂರು ಪಟ್ಟಣದ ನಂಜೇಶ್, ಶಿವಕುಮಾರ್, ಜಯಸ್ವಾಮಿ, ಬ್ರಹ್ಮಣಿಪುರ ಗ್ರಾಮದ ಪ್ರಸನ್ನ ಸೇರಿದಂತೆ ಇತರರು ತಮ್ಮ ಹಲ್ಲೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಾಣ ಬೆದರಿಕೆಯಿದೆ
ಎಂಎಲ್ಸಿ ಸಹಚರರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಆತನ ಸಹಚರರಿಂದ ಪ್ರಾಣ ಬೆದರಿಕೆಯಿದೆ. ಜೊತೆಗೆ ಲಾಠಿ ಏಟಿನಿಂದ ನೋವಾಗಿದ್ದಕ್ಕೆ ನನ್ನನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ನನ್ನ ಸ್ನೇಹಿತರಾದ ವಿನೋದ್, ಲೋಕೇಶ್ ಕರೆದುಕೊಂಡು ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ. ನಂತರ ನಾನು ತಡವಾಗಿ ಬಂದು ಈ ದಿನ ದೂರು ನೀಡುತ್ತಿದ್ದೇನೆ. ದಯಮಾಡಿ ನನ್ನ ಹಾಗೂ ಸ್ನೇಹಿತರ ಮೇಲೆ ಗೂಂಡಾಗಿರಿ ತೋರಿಸಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಎಂ.ಎಲ್.ಸಿ ಯೋಗೇಶ್ವರ್ ಮತ್ತು ಮೇಲಿನವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಟ್ಟು ರಕ್ಷಣೆ ನಿಡುವಂತೆ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.

ಕ್ರಮಕ್ಕೆ ಮುಂದಾಗದಿದ್ದರೆ ಪ್ರತಿಭಟನೆ
ನಮ್ಮ ಮೇಲೆ ಹಲ್ಲೆಗೆ ಮುಂದಾದವರನ್ನು ತಡೆಯುವ ಬದಲು ಸಿ.ಪಿ.ಯೋಗೇಶ್ವರ್ ಕುಮ್ಮಕ್ಕಿನಿಂದ ಪೊಲೀಸರು ಏಕಾಏಕಿ ನನ್ನ ಹಾಗೂ ಸ್ನೇಹಿತರ ಮೇಲೆ ಲಾಠಿ ಬೀಸಿದ್ದಾರೆ. ಪೋಲಿಸರ ಲಾಠಿ ಏಟಿನಿಂದ ಗಾಯಗೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದು, ತಮ್ಮ ದೂರಿನ ಮೇಲೆ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ. ಈ ಕೂಡಲೇ ಸಿಪಿವೈ ಸೇರಿದಂತೆ 13 ಬೆಂಬಲಿಗರ ವಿರುದ್ಧ ಕ್ರಮಕ್ಕೆ ಮುಂದಾಗದಿದ್ದಲ್ಲಿ ಗ್ರಾಮಾಂತರ ಠಾಣೆಯ ಮುಂಭಾಗವೇ ಧರಣಿ ಕುಳಿತು ಹೋರಾಟ ನಡೆಸುವುದಾಗಿ ಆಶಿಷ್ ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕರ್ತರ ಅನ್ಯಾಯ ಆಗಲು ಬಿಡಲ್ಲ ಎಂದ ನಿಖಿಲ್
ಕಾರ್ಯಕ್ರಮ ರದ್ದು ಮಾಡಿದ್ದರೂ ಕೂಡ ಯಾಕೆ ಶಂಕುಸ್ಥಾಪನೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಲು ಬಂದ ಅಮಾಯಕ ಜೆಡಿಎಸ್ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ಯಾವ ಅಧಾರದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ? ಲಾಠಿಯಲ್ಲಿ ಏಟು ತಿಂದು ಆಸ್ಪತ್ರೆಯಲ್ಲಿ ದಾಖಲಾಗಿರವ ಕಾರ್ಯಕರ್ತರ ಮೇಲೆ ಎಫ್ಐಆರ್ ಹೇಗೆ ಮಾಡಿದ್ದೀರಿ? ಎಂದು ಡಿವೈಎಸ್ಪಿ ಅವರ ಬಳಿ ಪ್ರಶ್ನೆ ಮಾಡಿದರೆ ಉತ್ತರ ಇಲ್ಲ. ಗಾಳಿಯಲ್ಲಿ ಕಲ್ಲು ತೋರಿ ಬರುವ ವಿಡಿಯೋ ಇದೆ ಎನ್ನುತ್ತಾರೆ ಪೊಲೀಸರು. ಇದರ ಅರ್ಥ ಏನು? ಗಾಳಿಯಲ್ಲಿ ಕಲ್ಲು ತೂರಿ ಬರುವ ವಿಡಿಯೋ ಇದ್ದರೆ ಯಾರನ್ನಾದರೂ ಬಂಧಿಸಬಹುದಾ? ಇದರ ಹಿಂದಿನ ಉದ್ದೇಶ ಏನು? ಯಾರ್ಯಾರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಮತ್ತು ಸರಕಾರ ಉತ್ತರ ನೀಡಬೇಕಾಗುತ್ತದೆ. ನಮ್ಮ ಕಾರ್ಯಕರ್ತರರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದರು.












Click it and Unblock the Notifications