"ರಿಟೈರ್ಡ್ ಕುದುರೆ" ಎಂದ ಯೋಗೇಶ್ವರ್ ವಿರುದ್ಧ ಜೆಡಿಎಸ್ ಮುಖಂಡರ ಆಕ್ರೋಶ
ರಾಮನಗರ, ಜುಲೈ 25: ಸಿ.ಪಿ.ಯೋಗೇಶ್ವರ್ ಸತ್ತ ಕುದುರೆ. ಅವರಿಗೆ ಎಚ್ಡಿಕೆ ಮತ್ತು ಡಿಕೆಶಿಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜೆಡಿಎಸ್ ಮುಖಂಡರು ನೂತನ ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಚನ್ನಪಟ್ಟಣದ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ತಾಲ್ಲೂಕಿನ ಜೆಡಿಎಸ್ ಮುಖಂಡರು ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದರು. ಎಚ್ಡಿಕೆ ಮತ್ತು ಡಿಕೆಶಿ ರಿಟೈರ್ಡ್ ಕುದುರೆಗಳು ಎಂದು ಹೇಳಿಕೆ ನೀಡಿದ್ದ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸತ್ತ ಕುದುರೆ, ನಮ್ಮ ನಾಯಕರು ರನ್ನಿಂಗ್ ಕುದುರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್ಡಿಕೆ ಮತ್ತು ಡಿಕೆಶಿ ಇಬ್ಬರೂ ರಿಟೈರ್ಡ್ ಕುದುರೆಗಳು; ಸಿ.ಪಿ.ಯೋಗೇಶ್ವರ್
ಯೋಗೇಶ್ವರ್ ಗೆ ಅಧಿಕಾರ ಇದ್ದರೆ ಮಾತ್ರ ಕ್ಷೇತ್ರದ ಜನರು ಕಣ್ಣಿಗೆ ಕಾಣುತ್ತಾರೆ. ಅಧಿಕಾರ ಇಲ್ಲವೆಂದರೆ ಈ ಕಡೆ ತಿರುಗಿಯೂ ನೋಡಲ್ಲ. ಕೊರೊನಾ ಸಂದರ್ಭದಲ್ಲಿ ಇಲ್ಲದ ಯೋಗೇಶ್ವರ್ ಈಗ ಯಾಕೆ ಬಂದಿದ್ದಾರೆ? ಕಳೆದ 2 ವರ್ಷದಿಂದ ಚನ್ನಪಟ್ಟಣವನ್ನೇ ಮರೆತಿದ್ದ ಅವರು ಈಗ ಎಂಎಲ್ಸಿ ಆದ ಬಳಿಕ ಚನ್ನಪಟ್ಟಣದ ಕಡೆಗೆ ಮುಖ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಚ್.ಡಿ.ಕುಮಾರಸ್ವಾಮಿಯವರ ಜನಪ್ರಿಯತೆ ಕಂಡು ಸಿಪಿವೈ ಹತಾಶೆಯಲ್ಲಿದ್ದಾರೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಜಯಮುತ್ತು, ನಗರ ಘಟಕದ ಅಧ್ಯಕ್ಷರಾದ ರಾಜಣ್ಣ, ಮುಖಂಡರಾದ ಹಾಪ್ ಕಾಮ್ಸ್ ದೇವಾರಾಜಣ್ಣ ಹಾಗೂ ನಾಗರಾಜು ಉಪಸ್ಥಿತರಿದ್ದರು.