ನಗರಸಭಾ ಸದಸ್ಯನ ಹುಟ್ಟುಹಬ್ಬದಲ್ಲಿ ನಂಗಾನಾಚ್: ಕಾನೂನು ಕ್ರಮಕ್ಕೆ ಜೆಡಿಎಸ್ ಆಗ್ರಹ
ರಾಮನಗರ, ನವೆಂಬರ್ 28: ರಾಮನಗರ ನಗರಸಭಾ ಕಾಂಗ್ರೆಸ್ ಸದಸ್ಯನ ಹುಟ್ಟುಹಬ್ಬದಲ್ಲಿ ನಡೆದ ಅತಿರೇಕದ ವರ್ತನೆಯನ್ನು ರಾಮನಗರ ಜೆಡಿಎಸ್ ಮುಖಂಡರು ಖಂಡಿಸಿದ್ದಾರೆ.
ರಾಮನಗರ ನಗರಸಭಾ ಕಾಂಗ್ರೆಸ್ ಸದಸ್ಯನ ಹುಟ್ಟುಹಬ್ಬದ ಸಂಭ್ರಮದಲ್ಲಿ ಅತಿರೇಕದ ವರ್ತನೆ ಮಾಡಿ, ನೃತ್ಯ ಮಾಡುವ ಹುಡುಗಿಯರ ಮೇಲೆ ನೋಟುಗಳನ್ನು ಸುರಿದು ಅನಾಗರೀಕ ರೀತಿಯಲ್ಲಿ ವರ್ತಿಸಿದ್ದಾರೆ. ಇಂತಹ ವರ್ತನೆಯನ್ನು ತೋರಿದ ಕಾಂಗ್ರೆಸ್ ನಗರಸಭಾ ಸದಸ್ಯ ಹಾಗೂ ಆತನಿಗೆ ಸಾಥ್ ನೀಡಿದ ಕಾಂಗ್ರೆಸ್ ಮುಖಂಡರ ವರ್ತನೆಯ ವಿರುದ್ಧ ಜೆಡಿಎಸ್ ಮುಖಂಡರು ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಡ್ಯಾನ್ಸರ್ ಹುಡುಗಿ ಮೇಲೆ ಹಣ ತೂರಾಡಿ ಕುಣಿದು ಕುಪ್ಪಳಿಸಿದ ಕಾಂಗ್ರೆಸ್ ನಾಯಕರು
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡರು," ನಗರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ದೌಲತ್ ಷರೀಪ್ ತನ್ನ ಹುಟ್ಟುಹಬ್ಬವನ್ನು ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಜನರೊಂದಿಗೆ ಮಾದಕ ವಸ್ತುಗಳನ್ನು ಸೇವಿಸಿ ಹುಡುಗಿಯರಿಂದ ಅಶ್ಲೀಲ ನೃತ್ಯ ಮಾಡಿಸಿ ಅವರ ಮೇಲೆ ನೋಟುಗಳನ್ನು ಎಸೆದು ಸ೦ಭ್ರಮಿಸಿರುವುದನ್ನು ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ" ಎಂದಿದ್ದಾರೆ.
ಮಾದಕ ವಸ್ತುಗಳನ್ನು ಸೇವಿಸಿ ಅಶ್ಲೀಲ ನೃತ್ಯ ಆರೋಪ
ನವೆ೦ಬರ್ 24ರ೦ದು ರಾಮನಗರದ ಯಾರಬ್ ನಗರದ ಕಲ್ಯಾಣ ಮ೦ಟಪದಲ್ಲಿ ನಗರಸಭೆ 19ನೇ ವಾರ್ಡ್ ಸದಸ್ಯ ಕಾಂಗ್ರೆಸ್ ಮುಖಂಡ ದೌಲತ್ ಷರೀಪ್ ತನ್ನ ಜನ್ಮದಿನದ ಪ್ರಯುಕ್ತ ಪಾರ್ಟಿ ಆಯೋಜಿಸಿದ್ದಾರೆ. ಪಾರ್ಟಿಯಲ್ಲಿ ಮಹಿಳಾ ಡ್ಯಾನ್ಸರ್ಗಳನ್ನು ಕರೆದು, ಅವರಿಗೆ ಅರೆಬರೆ ಬಟ್ಟೆ ಹಾಕಿಸಿ ಕಾಂಗ್ರೆಸ್ ನಗರಸಭೆ ಸದಸ್ಯರುಗಳ ಸಮ್ಮುಖದಲ್ಲಿ ಎಲ್ಲರೂ ಮಾದಕ ವಸ್ತುಗಳನ್ನು ಸೇವಿಸಿ ಅಶ್ಲೀಲ ನೃತ್ಯ ಮಾಡಿ ಹುಡುಗಿಯರ ಮೇಲೆ ನೋಟುಗಳನ್ನು ಎಸೆದು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸರು ಮೌನವಾಗಿದ್ದಾರೆ ಎಂದು ಜೆಡಿಎಸ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೋಭಾರಾಜು ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ನಂಗಾನಾಚ್
ಹುಟ್ಟುಹಬ್ಬದಂದು ಸಾರ್ವಜನಿಕವಾಗಿ ಕೇವಲ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಫೋಟೋ ವೀಡಿಯೋ ವೈರಲ್ ಆದಾಗ ಯಾವುದೋ ವಿಚಾರಕ್ಕೆ ಮುಲಾಜಿಲ್ಲದೇ ಪ್ರಕರಣ ದಾಖಲಿಸಿಕೊಂಡು ಅಮಾಯಕರನ್ನು ಬಂಧಿಸಿಸುವ ಪೊಲೀಸರು, ಕಲ್ಯಾಣ ಮಂಟಪದಲ್ಲಿ ನೂರಾರು ಜನರ ಸಮ್ಮುಖದಲ್ಲಿ ಅರೆಬರೆ ಬಟ್ಟೆ ಉಟ್ಟ ಡ್ಯಾನ್ಸರ್ಗಳಿಂದ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ನಂಗಾನಾಚ್ ನಡೆದಿದೆ. ಅಲ್ಲದೆ ಡ್ಯಾನ್ಸರ್, ಹಾಡುಗಾರ್ತಿಯ ಮೇಲೆ ಹಣ ಎಸೆದು ಮೋಜು ಮಸ್ತಿ ಮಾಡಿರುವ ವಿಡಿಯೋಗಳು ವೈರಲ್ ಆಗಿದ್ದರೂ, ಪೊಲೀಸ್ ಇಲಾಖೆ ಯಾವ ಕ್ರಮವನ್ನುಕೈಗೊಳ್ಳದೆ ಇರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ ಎಂದು ಜೆಡಿಎಸ್ ಮುಖಂಡರು ಕಿಡಿಕಾರಿದ್ದಾರೆ.
ಕಾನೂನು ಕ್ರಮಕೈಗೊಳ್ಳುವಂತೆ ಜೆಡಿಎಸ್ ಆಗ್ರಹ
ಇನ್ನು ಪಾರ್ಟಿಯಲ್ಲಿ ಪಾಲ್ಗೊಂಡವರು ಗಾಂಜಾ, ಅಫೀಮು, ಮದ್ಯ ಸೇರಿದಂತೆ ಮಾದಕ ವಸ್ತುಗಳ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಈ ಪಾರ್ಟಿಯಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಇರಿತವಾಗಿ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎನ್ನುವ ಮಾಹಿತಿ ಇದೆ. ತಕ್ಷಣವೇ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣ ದಾಖಲಿಸಿಕೊ೦ಡು ಅಲ್ಲಿದ್ದ ಎಲ್ಲರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜೆಡಿಎಸ್ ಪದವೀಧರರ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ್ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ಮೋಜು ಮಸ್ತಿಯಲ್ಲಿ ತೊಡಗಿರುವ ನಾಯಕರ ವಿರುದ್ಧ ಜೆಡಿಎಸ್ ಕಿಡಿ
ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಖಾತಾ ಸಮಸ್ಯೆ, ನೀರಿನ ಸಮಸ್ಯೆ, ಕಸ ವಿಲೆವಾರಿ ಸಮಸ್ಯೆ, ಒಳಚರ೦ಡಿ ಸಮಸ್ಯೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳಿವೆ. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕಾಗಿದ್ದ ಕಾಂಗ್ರೆಸ್ ನಗರಸಭಾ ಸದಸ್ಯರುಗಳು ಮಾದಕ ವಸ್ತುಗಳನ್ನು ಸೇವಿಸಿ ಮೋಜು ಮಸ್ತಿಯಲ್ಲಿ ತೊಡಗಿರುವುದು ತುಂಬಾ ಅಸಹ್ಯಕರವಾದ ವಿಚಾರ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್ ಜಯಕುಮಾರ್ ಖಂಡಿಸಿದ್ದಾರೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪದವೀಧರರ ಘಟಕದ ರಾಜ್ಯಾಧ್ಯಕ್ಷರಾದ ರಾಜಶೇಖರ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಎಸ್ ಜಯಕುಮಾರ್, ನಗರ ಜೆಡಿಎಸ್ ಮಹಿಳಾ ಅಧ್ಯಕ್ಷೆ ಶೋಭಾ ರಾಜು ಹಾಗೂ ಮುಖಂಡರಾದ ಕೆ.ಕೆಂಪರಾಜು, ಕೆ.ಜಯರಾಮು ಉಪಸ್ಥಿತರಿದ್ದರು.