ಬಿಜೆಪಿ ಜೊತೆ ಮೈತ್ರಿಯಿಂದ ಜೆಡಿಎಸ್ ಅಭ್ಯರ್ಥಿಗಳ ಟಿಕೆಟ್ ಸಮಸ್ಯೆ ಆಗಲ್ಲ: ಹೆಚ್ಡಿ ಕುಮಾರಸ್ವಾಮಿ
ರಾಮನಗರ, ಅಕ್ಟೋಬರ್ 1: ಬಿಜೆಪಿ ಜೊತೆ ಮೈತ್ರಿ ಬಗ್ಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. ಮುಂದಿನ ಒಂದು ತಿಂಗಳ ಒಳಗೆ ರಾಜ್ಯದ 31 ಜಿಲ್ಲೆಗಳಲ್ಲೂ ಸಭೆ ಮಾಡಲಾಗುವುದು. ಎಲ್ಲಾ ಸಮಸ್ಯೆಗಳನ್ನು, ಗೊಂದಲಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಬಿಡದಿಯಲ್ಲಿರುವ ತೋಟದಲ್ಲಿ ನಡೆದ ಜೆಡಿಎಸ್ ಪಕ್ಷದ ಮುಖಂಡರು, ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದರು.

ಬಿಜೆಪಿ ಜೊತೆ ಮೈತ್ರಿಯಿಂದ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ಸಮಸ್ಯೆ ಉಂಟಾಗಲ್ಲ, ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ಇದರ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಲಾಗುವುದು. ಹೊಂದಾಣಿಕೆಯಿಂದ ಯಾರ ಭವಿಷ್ಯವನ್ನೂ ಹಾಳು ಮಾಡಲ್ಲ, ಜಿಟಿ ದೇವೇಗೌಡ ನೇತೃತ್ವದಲ್ಲಿ ಕೋರ್ ಸಮಿಟಿ ಮಾಡಲಾಗುವುದು, ಈ ಕಮಿಟಿ ಮೂಲಕ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಟೀಕೆಗೆ ಜನ ಉತ್ತರ ಕೊಡ್ತಾರೆ
ಬಿಜೆಪಿ ಜೊತೆ ಮೈತ್ರಿ ಬಳಿಕ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಏನು ಬೇಕಾದರೂ ಅವಹೇಳನ ಮಾಡಲಿ, ಅವರಿಗೆ ನನ್ನ ಕಾರ್ಯಕರ್ತರು, ನಾಡಿನ ಜನ ಉತ್ತರ ಕೊಡುತ್ತಾರೆ, ಇನ್ನು ಮುಂದೆ ನಾನು ಯಾವ ಟೀಕೆಗೂ ಉತ್ತರ ಕೊಡಲ್ಲ, 17 ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಹೆಚ್ಡಿ ದೇವೇಗೌಡರ ಅವರ ತೀರ್ಮಾನಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಮುಸ್ಲಿಮ್ ಕಾರ್ಯಕರ್ತರಿಕೆ ಹೆಚ್ಡಿಕೆ ಮನವಿ
ಇದೇ ಸಂದರ್ಭದಲ್ಲಿ ಮುಸ್ಲಿಮ್ ಕಾರ್ಯಕರ್ತರನ್ನು ಕುರಿತು ಮಾತನಾಡಿದ ಅವರು, "ಮುಸಲ್ಮಾನ ಬಂಧುಗಳು ಎಚ್ಚರಿಕೆ ಇಂದ ಇರಬೇಕು, ಕೆಲ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ, ಮತಕ್ಕಾಗಿ ಒಂದು ಸಮಾಜವನ್ನು ಓಲೈಕೆ ಮಾಡುವ ಅಗತ್ಯವಿಲ್ಲ, ಮುಸ್ಲಿಮರ ಬಗ್ಗೆ ನನ್ನ ಕಮಿಟ್ಮೆಂಟ್ ಏನೆಂದು ಗೊತ್ತಿದೆ. ಅವರಿಗೆ ಸಮಸ್ಯೆಯಾದಾಗ ಧ್ವನಿ ಎತ್ತಿ ಅವರ ಪರ ನಿಂತಿದ್ದೇನೆ, ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದಂತೆ" ಮನವಿ ಮಾಡಿದರು.
ಮೈತ್ರಿಯಿಂದ ಗೊಂದಲವಿಲ್ಲ
ಜೆಡಿಎಸ್ ಎಂಎಲ್ಸಿ ಬಿಎಂ ಫಾರೂಕ್ ಮಾತನಾಡಿ, ಬಿಜೆಪಿ ಜೊತೆ ಮೈತ್ರಿಯಿಂದ ಯಾವ ಸಮಸ್ಯೆಯೂ ಇಲ್ಲ ಎಂದರು. ಶಿವಸೇನೆ, ಶರತ್ ಪವಾರ್, ನಿತೀಶ್ ಕುಮಾರ್ ಕೂಡ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು, ಈ ಮೊದಲು ಕೂಡ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು, ಆಗ ಜಮೀರ್ ಅಹ್ಮದ್ ಅವರಿಗೂ ಮಂತ್ರಿ ಸ್ಥಾನ ಕೊಟ್ಟಿದ್ದರಲ್ಲಾ, ಮೈತ್ರಿಯ ಪ್ರತಿ ಹಂತದಲ್ಲಿ ಸಿಎಂ ಇಬ್ರಾಹಿಂ ಜೊತೆ ಚರ್ಚೆ ಮಾಡಲಾಗಿದೆ, ಅವರನ್ನು ವಿಶ್ವಾಸಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಮೈತ್ರಿಯಾದ ತಕ್ಷಣ ಅಲ್ಪ ಸಂಖ್ಯಾತರು ಜೆಡಿಎಸ್ನಿಂದ ದೂರ ಆಗಲ್ಲ, ನಾನು ಇಲ್ಲೇ ಇದಿನಲ್ಲಾ. ಹಿಂದುತ್ವದ ಅಜೆಂಡಾಕ್ಕೆ ನಾವು ಹೋಗಲ್ಲ, ಅಲ್ಪ ಸಂಖ್ಯಾತರ ರಕ್ಷಣೆಗೆ ಬದ್ದ ಎಂದು ಹೇಳಿದರು.












Click it and Unblock the Notifications