ಬಿಡದಿ ಪುರಸಭೆ; ಜೆಡಿಎಸ್ಗೆ ಬಹುಮತ, ಬಿಜೆಪಿ ಸಾಧನೆ ಶೂನ್ಯ!
ರಾಮನಗರ, ಡಿಸೆಂಬರ್ 30; ರಾಮನಗರ ಜಿಲ್ಲೆಯ ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 23 ವಾರ್ಡ್ಗಳಲ್ಲಿ 14 ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಮೂಲಕ ಪುರಸಭೆ ಅಧಿಕಾರದ ಚುಕ್ಕಾಣಿ ಜೆಡಿಎಸ್ ಪಾಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 9 ವಾರ್ಡಗಳಲ್ಲಿ ಗೆಲುವು ಕಂಡಿದ್ದಾರೆ.
ಕಳೆದ ಬಾರಿಯೂ ಕೂಡ ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ನಡೆಸಿತ್ತು. 2ನೇ ಬಾರಿಯೂ ಪುರಸಭೆ ಅಧಿಕಾರ ಜೆಡಿಎಸ್ ಪಾಲಾಗಿದೆ. ಪುರಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಜಯಗಳಿಸಿದ ಅಭ್ಯರ್ಥಿಗಳು, ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು.
ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಡದಿಯ ಈ ಬಾರಿಯ ಚುನಾವಣೆ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಎಚ್. ಸಿ. ಬಾಲಕೃಷ್ಣ ಹಾಗೂ ಜೆಡಿಎಸ್ ಶಾಸಕ ಎ. ಮಂಜುನಾಥ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತು. ಪುರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಾಲಕೃಷ್ಣ ತಮ್ಮ ಪಕ್ಷದ ನಾಯಕರಾದ ಸಂಸದ ಡಿ. ಕೆ. ಸುರೇಶ್ ಜೊತೆಗೂಡಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಅಬ್ಬರದ ಪ್ರಚಾರ ನಡೆಸಿದ್ದರು.

ಮಾಜಿ ಶಾಸಕರು, ಹಾಲಿ ವಿಧಾನ ಪರಿಷತ್ ಸದಸ್ಯರು ಆಗಿರುವ ಬಿಡದಿ ಪುರಸಭೆ ವ್ಯಾಪ್ತಿಗೆ ಸ್ವಕ್ಷೇತ್ರವಾಗಿರುವ ಸಿ. ಎಂ. ಲಿಂಗಪ್ಪನವರ ವರ್ಚಸ್ಸು ಕೂಡ ಈ ಚುನಾವಣೆಯಲ್ಲಿ ಯಾವುದೇ ರೀತಿಯ ಪರಿಣಾಮ ಬೀರದಿರುವುದು ಇಂದಿನ ಫಲಿತಾಂಶಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಬಿಜೆಪಿ ಶೂನ್ಯ ಸಾಧನೆ; ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಬಿಡದಿ ಪುರಸಭೆಯಲ್ಲಿ ಒಂದು ಸ್ಥಾನ ಪಡೆಯದ ಬಿಜೆಪಿಗೆ ನಿರಾಸೆಯಾಗಿದೆ. ರಾಮನಗರ ನಗರಸಭೆಯಲ್ಲಿ ತನ್ನ ಸೋಲಿನ ಓಟವನ್ನು ಬಿಡದಿಯಲ್ಲೂ ಬಿಜೆಪಿ ಈ ಮೂಲಕ ಮುಂದುವರೆಸಿದೆ.
ಹಣದ ರಾಜಕೀಯಕ್ಕೆ ಸೋಲು; ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಹಣದ ರಾಜಕೀಯಕ್ಕೆ ಸೋಲಾಗಿದೆ, ಜನರ ಪ್ರೀತಿಗೆ ಗೆಲುವಾಗಿದೆ" ಎಂದರು.
ಬಿಡದಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ನವರು ದೊಡ್ಡಮಟ್ಟದಲ್ಲಿ ಬಿಡದಿ ಹಿಡಿಯಲು ಹೊರಟ್ಟಿದ್ದರು. ಕುಮಾರಸ್ವಾಮಿ ಇಲ್ಲಿನ ಕೇತಗಾನಹಳ್ಳಿ ಇದ್ದಾರೆ. ಅವರನ್ನು ಅಲ್ಲಿಗೇ ನೂಕುತ್ತೇವೆ ಎಂದಿದ್ದರು. ಈ ಫಲಿತಾಂಶ ಅವರಿಗೆ ಉತ್ತರ ನೀಡಿದೆ" ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷದ ಜತೆ ಸಂಸದರು, ಮಾಜಿ ಶಾಸಕರ ದೊಡ್ಡ ಹಿಂಡಿತ್ತು. ಆದರೆ ಬಿಡದಿಯ ಮತದಾರರು ನಮಗೆ ಆರ್ಶೀವಾದ ಮಾಡಿದ್ದಾರೆ. ಈ ಫಲಿತಾಂಶ ನನಗೆ ದೊಡ್ಡಮಟ್ಟದ ಅಚ್ಚರಿ ಫಲಿತಾಂಶ ಅಲ್ಲ, ನಿರೀಕ್ಷಿತವೇ ಆಗಿತ್ತು" ಎಂದು ತಿಳಿಸಿದರು.
"ನನಗೆ ರಾಜಕೀಯ ಜನ್ಮ ಕೊಟ್ಟ ಸ್ಥಳ ಬಿಡದಿ. ಬಿಡದಿಯ ಮತದಾರರಿಗೆ ಅಭಿನಂದನೆ ತಿಳಿಸುತ್ತೇನೆ. ನಾನು ಎರಡು ದಿನ ನಮ್ಮ ಶಾಸಕರ ಜೊತೆ ಸೇರಿ ಪ್ರಚಾರ ಮಾಡಿದ್ದೆ. ಮುಂದಿನ 2023ರ ಚುನಾವಣೆಗೆ ಈ ಫಲಿತಾಂಶ ನನಗೆ ಮಾನಸಿಕವಾಗಿ ಶಕ್ತಿ ತುಂಬಿದೆ" ಎಂದು ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಉತ್ತರ ನೀಡಿದ್ದಾರೆ: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಬಗ್ಗೆ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. "ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುವ ಮೂಲಕ ಜೆಡಿಎಸ್ ಕಥೆ ಮುಗಿದೇ ಹೋಯಿತು ಎನ್ನುವವರಿಗೆ ಮತದಾರರು ಉತ್ತರ ನೀಡಿದ್ದಾರೆ" ಎಂದರು.
ಗುರುವಾರ ಬಿಡದಿಯ ಕೇತಿಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಬಿಡದಿ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ರಾಜ್ಯದ ಬಿಜಾಪುರ, ರಾಯಚೂರು, ಶಿರಾದಲ್ಲಿಯೂ ನಮ್ಮವರು ಗೆದ್ದಿದ್ದಾರೆ" ಎಂದು ಹೇಳಿದರು.
"ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದರು, ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದವರಿಗೆ ಜನ ಇವತ್ತು ಅಲ್ಲಿಯೂ ಉತ್ತರ ನೀಡಿದ್ದಾರೆ . ಉಪಚುನಾವಣೆಗಳ ಫಲಿತಾಂಶ ಬೇರೆ, ಸಾರ್ವತ್ರಿಕ ಚುನಾವಣೆಗಳ ಫಲಿತಾಂಶ ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತದೆ" ಎಂದರು.












Click it and Unblock the Notifications