ಬಿಡದಿಯ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಯಾವಾಗ?

ರಾಮನಗರ, ಸೆಪ್ಟೆಂಬರ್.27: ರಾಜಧಾನಿ ಬೆಂಗಳೂರಿನ ಕಸದ ವಿಲೇವಾರಿ ಸಮಸ್ಯೆ ಸಮೀಪದ ಬಿಡದಿಗೂ ವಿಸ್ತರಿಸಿದ್ದು, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಾಗುವ ಎಲ್ಲಾ ಬಸ್ ಮತ್ತು ರೈಲು ಪ್ರಯಾಣಿಕರ ಗಮನಕ್ಕೆ ಬಂದಿರುವುದಂತು ಸತ್ಯ.

ಬಿಡದಿಯ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಬದಿಯಲ್ಲಿ, ಬಿಡದಿ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿ ಕಸವನ್ನು ರಾಶಿ ಹಾಕಲಾಗುತ್ತಿದ್ದು, ಅದರ ಗಬ್ಬುವಾಸನೆ ಇದೀಗ ಎಲ್ಲರ ಮೂಗಿಗೆ ಬಡಿಯತೊಡಗಿದೆ. ಹಾಗೆ ನೋಡಿದರೆ ಬಿಡದಿ ಈ ಹಿಂದೆ ಗ್ರಾಮಪಂಚಾಯಿತಿಯಾಗಿತ್ತು.

ಬಳಿಕ ಪುರಸಭೆಯಾಗಿ ಮೇಲ್ದರ್ಜೆಗೇರಲ್ಪಟ್ಟಿತ್ತಲ್ಲದೆ, ಅಷ್ಟೇ ವೇಗವಾಗಿ ಪಟ್ಟಣವಾಗಿ ಬೆಳೆದ ಕಾರಣ ಎಲ್ಲ ಕಡೆಗಳಲ್ಲಿ ಕಂಡು ಬರುವ ಕಸದ ಸಮಸ್ಯೆ ಇಲ್ಲಿಯೂ ತಾಂಡವವಾಡತೊಡಗಿತು. ಅವತ್ತೇ ಪುರಸಭೆ ಇದಕ್ಕೊಂದು ಸೂಕ್ತ ವ್ಯವಸ್ಥೆ ಮಾಡದ ಕಾರಣದಿಂದಾಗಿ ಸಮಸ್ಯೆ ಸಮಸ್ಯೆಯಾಗಿಯೇ ಮುಂದುವರೆಯುತ್ತಿದ್ದು ಅದರ ಪರಿಣಾಮವನ್ನು ಅಮಾಯಕ ಜನ ಅನುಭವಿಸುವಂತಾಗಿದೆ.

ಹಾಗೆ ನೋಡಿದರೆ ಗ್ರಾಮಪಂಚಾಯಿತಿಯಿಂದ ಪುರಸಭೆಯಾದ ಬಳಿಕವಂತೂ ಪಟ್ಟಣ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಜತೆಗೆ ಇಲ್ಲಿನ ಕೈಗಾರಿಕಾ ಪ್ರದೇಶವು ದೇಶ ವಿದೇಶಗಳ ಗಮನಸೆಳೆದಿದೆ. ಕೈಗಾರಿಕಾ ಪ್ರದೇಶವಾಗಿರುವುದರಿಂದ ಜನಸಂಖ್ಯೆ ಹೆಚ್ಚಾಗುತ್ತಿದೆ.

ಸದ್ಯ ಪಟ್ಟಣದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ ಎಂದು ಹೇಳಲಾಗುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಉದ್ಭವಿಸುವ ಸಮಸ್ಯೆಗಳಲ್ಲಿ ಕಸದ ಸಮಸ್ಯೆಯೂ ಒಂದಾಗಿ ಬಿಡದಿ ಪಟ್ಟಣವನ್ನು ಕಾಡುತ್ತಿದೆ. ಸಮಸ್ಯೆ ಇಷ್ಟೇ ಅಲ್ಲ, ಇನ್ನೂ ಇದೆ. ಮುಂದೆ ಓದಿ..

 ಪುರಸಭೆಗೆ ದೊಡ್ಡ ಸವಾಲ್

ಪುರಸಭೆಗೆ ದೊಡ್ಡ ಸವಾಲ್

ಮನೆಮನೆಗಳಿಂದ, ಹೋಟೆಲ್, ಇನ್ನಿತರ ಸ್ಥಳಗಳಿಂದ ಸಂಗ್ರಹವಾಗುವ ಕಸಗಳನ್ನು ಎಲ್ಲಿ ವಿಲೇವಾರಿ ಮಾಡುವುದು ಎಂಬುದೇ ಈಗ ಪುರಸಭೆಗೆ ತಲೆನೋವಾಗಿ ಪರಿಣಮಿಸಿದ್ದು ಅದು ಮುಂದಿರುವ ದೊಡ್ಡ ಸವಾಲ್ ಕೂಡ ಹೌದು.

ಬಿಡದಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದಲೂ ಈ ಸಮಸ್ಯೆಯಿದೆ. ಇದಕ್ಕೊಂದು ಪರಿಹಾರ ಕಂಡು ಹಿಡಿಯುವ ಪ್ರಯತ್ನಗಳು ಇನ್ನೂ ಕೂಡ ಆಗಿಲ್ಲ ಎಂದರೆ ತಪ್ಪಾಗಲಾರದು.

 ರಾಮನಗರ ಜಿಲ್ಲಾಡಳಿತ ವಿಫಲ

ರಾಮನಗರ ಜಿಲ್ಲಾಡಳಿತ ವಿಫಲ

ಸದ್ಯದ ಸ್ಥಿತಿಯಲ್ಲಿ ಬಿಡದಿ ಪುರಸಭೆಗೆ ಕಸ ವಿಲೇವಾರಿಗೆ ಅಗತ್ಯವಿರುವ ಜಾಗವನ್ನು ಮಂಜೂರು ಮಾಡುವಲ್ಲಿ ರಾಮನಗರ ಜಿಲ್ಲಾಡಳಿತ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.

ಪಟ್ಟಣದಲ್ಲಿ ಉತ್ಪತ್ತಿಯಾದ ಕಸವನ್ನು ಸಂಸ್ಕರಣೆ ಮಾಡಲು ಸೂಕ್ತ ಜಾಗವಿಲ್ಲದ ಕಾರಣದಿಂದ ಅನಿವಾರ್ಯವಾಗಿ ಪುರಸಭೆಯು ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಹಾಗೂ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿ ಸುರಿದು ಕೈತೊಳೆದುಕೊಳ್ಳುತ್ತಿದೆ.

 ಸಾಂಕ್ರಾಮಿಕ ರೋಗಗಳ ಭಯ

ಸಾಂಕ್ರಾಮಿಕ ರೋಗಗಳ ಭಯ

ಇದೆಲ್ಲದರಿಂದ ತೊಂದರೆ ಅನುಭವಿಸುತ್ತಿರುವುದು ಮಾತ್ರ ಶ್ರೀಸಾಮಾನ್ಯ. ಕಸ ರಾಶಿ ರಾಶಿಯಾಗಿ ಬಿದ್ದಿರುವ ಕಾರಣ ಅದು ಕೊಳೆತು ಗಬ್ಬುವಾಸನೆ ಬೀರುತ್ತಿದೆ. ಈ ದುರ್ವಾಸನೆ ನಡುವೆಯೇ ಸುತ್ತಮುತ್ತ ವಾಸ ಇರುವವರು ಬದುಕ ಬೇಕಾಗಿದೆ.

ಜತೆಗೆ ಕಸ ಕೊಳೆತು ಕೆರೆಯ ನೀರನ್ನು ಸೇರುತ್ತಿದ್ದು ಜಾನುವಾರುಗಳು ಅದನ್ನೇ ಕುಡಿಯುತ್ತಿವೆ. ಸುತ್ತಮುತ್ತ ಸೊಳ್ಳೆಕಾಟಗಳು ಹೆಚ್ಚಾಗುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗಗಳ ಭಯವೂ ಪಟ್ಟಣದ ಜನರನ್ನು ಕಾಡುತ್ತಿದೆ.

 ಖಾಯಂ ಸ್ಥಳ ನಿಗದಿ ಮಾಡಬೇಕು

ಖಾಯಂ ಸ್ಥಳ ನಿಗದಿ ಮಾಡಬೇಕು

ಇನ್ನಾದರೂ ಪುರಸಭೆ ಅಧ್ಯಕ್ಷೆ ವೆಂಕಟೇಶಮ್ಮ ರಾಮಕೃಷ್ಣಯ್ಯ ಮತ್ತು ಉಪಾಧ್ಯಕ್ಷರಾದ ಲಕ್ಷ್ಮಿದೇವಿ ರವಿಕುಮಾರ್ ಇದರತ್ತ ಗಮನಹರಿಸಿ ಮೈತ್ರಿ ಸರ್ಕಾರದ ಮೇಲೆ ಒತ್ತಡ ತಂದು ಕಸವಿಲೇವಾರಿಗೆ ಖಾಯಂ ಸ್ಥಳವನ್ನು ನಿಗದಿ ಮಾಡಬೇಕಾಗಿದೆ.

ಇಲ್ಲದೆ ಹೋದರೆ ಈಗ ಕಸ ಎಸೆಯುತ್ತಿರುವ ಜಾಗವೇ ಖಾಯಂ ಆಗಿ ಇದರಿಂದ ಜನ ಸಾಮಾನ್ಯರು ರೋಗ ರುಜಿನಗಳಿಂದ ತೊಂದರೆ ಅನುಭವಿಸುವುದಂತು ಖಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+