ಉಪಚುನಾವಣೆ ಫಲಿತಾಂಶ ನಂತರದ ಬಿಜೆಪಿ ಭವಿಷ್ಯ ನುಡಿದ ಡಿ.ಕೆ ಸುರೇಶ್
ರಾಮನಗರ, ನವೆಂಬರ್ 4: ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಬಿಜೆಪಿಯಲ್ಲಿ ಒಳ ಜಗಳ ಹೆಚ್ಚಾಗಿ ಭಿನ್ನಮತ ಸ್ಫೋಟವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಭವಿಷ್ಯ ನುಡಿದಿದ್ದಾರೆ.
ಬುಧವಾರ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಐಕಾನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಭೆಯ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಉಪ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಪರಿಣಾಮವಿಲ್ಲ. ಆದರೆ ಬಿಜೆಪಿ ಗೆಲ್ಲಲಿ, ಸೋಲಲಿ, ಬಿಜೆಪಿಯಲ್ಲಿ ಆಂತರಿಕ ಜಗಳ ಹೆಚ್ಚಾಗುವುದು ಖಂಡಿತ ಎಂದರು.

ಮುನಿರತ್ನ ವಿರುದ್ಧ ಡಿಕೆ ಸುರೇಶ್ ವ್ಯಂಗ್ಯ
ಚುನಾವಣೆಯಲ್ಲಿ ಗೆದ್ದು ಪವರ್ ಹುದ್ದೆ ಪಡೆಯುತ್ತೇನೆ ಎಂಬ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್, ಮುನಿರತ್ನ ಪವರ್ ಮಿನಿಸ್ಟರ್ ಆಗಲಿ, ಹೋಂ ಆಗಲಿ, ಇಲ್ಲ ಸಿಎಂ ಆಗಲಿ, ನನಗೇನು? ಅವರು ಗೆದ್ಮೇಲೆ ಅದು. ನನ್ನ ಕ್ಷೇತ್ರದವರು ಸಿಎಂ ಆದರೆ ನನಗೆ ಸಂತೋಷ. ನಾನೊಬ್ಬ ಆಶಾವಾದಿ. ಜನರ ತೀರ್ಪು ನಮ್ಮ ಪರವಾಗಿ ಬರಲಿದೆ ಅನ್ನೋ ವಿಶ್ವಾಸವಿದೆ ಎಂದು ಡಿ.ಕೆ.ಸುರೇಶ್ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ವ್ಯಂಗ್ಯವಾಡಿದರು.

"ಯಡಿಯೂರಪ್ಪನವರೇ ಸಿಎಂ ಆಗಿರಲಿ"
ಸಿಎಂ ಬದಲಾವಣೆ ಆಗ್ತಾರೆ ಎಂದು ಬಿಜೆಪಿಯವರೇ ಹೇಳ್ತಿದ್ದಾರೆ. ಆದರೆ ನಮಗೆ ಯಡಿಯೂರಪ್ಪನವರೇ ಸಿಎಂ ಆಗಿರಬೇಕು ಎಂದು ಆಸೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಮಂತ್ರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನಕಪುರ ಕ್ಷೇತ್ರಕ್ಕೆ ಈ ಸರ್ಕಾರದಿಂದ ಒಂದು ಬಿಡಿಗಾಸೂ ಸಿಕ್ಕಿಲ್ಲ. ಈ ಸರ್ಕಾರ ಅಭಿವೃದ್ಧಿ ಪರವಾಗಿಲ್ಲ ಎಂದು ಕಿಡಿಕಾರಿದರು.

"ಸರ್ಕಾರ ಲೂಟಿ ಮಾಡೋಕೆ ಮಾತ್ರ ಇದೆ"
ಈ ರಾಜ್ಯ ಸರ್ಕಾರ ಲೂಟಿ ಮಾಡಲು ಮಾತ್ರ ಇದೆ. ಭ್ರಷ್ಟ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು. ಲೂಟಿ ಮಾಡುವ ಸರ್ಕಾರ ಎಷ್ಟು ದಿನ ಇರಲಿದೆ ಎಂದೂ ಹೇಳಿದರು.

"ಫಲಿತಾಂಶದ ನಂತರ ಭಿನ್ನಾಭಿಪ್ರಾಯ ಸ್ಫೋಟ"
ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಪರಿಣಾಮವಿಲ್ಲ. ಆದರೆ ಬಿಜೆಪಿ ಗೆಲ್ಲಲಿ, ಸೋಲಲಿ, ಬಿಜೆಪಿಯಲ್ಲಿ ಆಂತರಿಕ ಜಗಳ ಉಂಟಾಗುವುದು ಖಚಿತ. ಫಲಿತಾಂಶದ ನಂತರ ಜಗಳ ಸ್ಫೋಟಗೊಳ್ಳುತ್ತದೆ ಎಂದು ಹೇಳಿದರು.












Click it and Unblock the Notifications