'ಬಿಜೆಪಿ ಸಂವಿಧಾನ ಬದಲಾಯಿಸಲು ಮುಂದಾದರೆ ದೇಶ ಇಬ್ಭಾಗವಾಗುತ್ತದೆ'
ರಾಮನಗರ, ಡಿಸೆಂಬರ್ 26 : ಬಿಜೆಪಿಯವರಿಗೆ ಸಂವಿಧಾನ ಬದಲು ಮಾಡವ ಶಕ್ತಿ ಇದ್ದರೆ ಬದಲು ಮಾಡಲಿ ಅಥವಾ ಪ್ರಧಾನಮಂತ್ರಿಗಳು ಬಿಜೆಪಿ ಪ್ರಣಾಳಿಕೆಯಲ್ಲಿ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದು ಘೋಷಿಸಲಿ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸಬೇಕೆಂಬ ಹೇಳಿಕೆ ವಿಚಾರವಾಗಿ ಸುದ್ದಿಗಾರರ ಜತೆ ಮಾತನಾಡಿದ ಅವರು ದೇಶದ 126 ಕೋಟಿ ಜನರು ಅಂಬೇಡ್ಕರ್ ಬರೆದ ಸಂವಿಧಾನವನ್ನ ಒಪ್ಪಿದ್ದಾರೆ ಮತ್ತು ಅದರಂತೆ ಬಾಳುತ್ತಿದ್ದಾರೆ.
ಒಂದು ವೇಳೆ ಬಿಜೆಪಿಯು ಸಂವಿಧಾನವನ್ನು ಬದಲು ಮಾಡುವ ಅಜೆಂಡಾದ ಸುಳಿವು ದೇಶದ ಜನರಿಗೆ ಗೊತ್ತಾದ್ರೆ ದೇಶ ಇಬ್ಭಾಗ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನವರಿ 3 ರಂದು ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಗದಿಯಾಗಿದೆ. ಕಾರ್ಯಕ್ರಮದಲ್ಲಿ ಹಲವಾರು ಮಂತ್ರಿಗಳು ಭಾಗವಹಿಸಲಿದ್ದಾರೆ, ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ
ಸಿಎಂ ಸಿದ್ದರಾಮಯ್ಯನವರು ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ಸಿಎಂ ಕಾರ್ಯಕ್ರಮ ರಾಹುಲ್ ಗಾಂದಿಯವರ ಪಧಗ್ರಹಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರದ್ದಾಗಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ 15 ಮಂದಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್ ನೀಡಿರುವ ಹೇಳಿಕೆ ವಿಚಾರವಾಗಿ ಮಾತನಾಡಿದ ಸುರೇಶ್ ಕಾಂಗ್ರೆಸ್ ಪಕ್ಷ ಬಿಟ್ಟು ಯಾರು ಎಲ್ಲಿಯೂ ಹೋಗುವುದಿಲ್ಲ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠವಾಗುತ್ತಿದೆ.
ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಿದ್ದರಾಮಯ್ಯ ಅವ್ರ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯೋಗೀಶ್ವರ್ ಬಣ್ಣ ಹಚ್ಚುವುದು, ಬಿಚ್ಚುವುದು, ಗಿಮಿಕ್ ಭರವಸೆಗಳನ್ನ ಮೊದಲು ಬಿಡಬೇಕು ಎಂದು ಸಿಪಿವೈಗೆ ಕಿವಿಮಾತು ಹೇಳಿದರು.