ಈದ್ಗಾ ಮೈದಾನದ ವಿಚಾರ : ಚನ್ನಪಟ್ಟಣದಲ್ಲಿ ಲಾಠಿ ಚಾರ್ಜ್
ರಾಮನಗರ, ಜನವರಿ 31 : ಚನ್ನಪಟ್ಟಣದಲ್ಲಿ ಈದ್ಗಾ ಮೈದಾನದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಚನ್ನಪಟ್ಟಣ ನ್ಯಾಯಾಲಯವನ್ನು ಫೆ.2ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ. ಆದ್ದರಿಂದ, ಈದ್ಗಾ ಮೈದಾನ ಮತ್ತು ಕೋರ್ಟ್ ನಡುವೆ ಒಂದು ಕೋವಿನವರು ಶೀಟ್ಗಳಿಂದ ತಡೆಗೋಡೆ ನಿರ್ಮಿಸಿದ್ದರು.
ತಡೆಗೋಡೆ ನಿರ್ಮಿಸಿದ್ದನ್ನು ಪ್ರಶ್ನಿಸಿ ಒಂದು ಕೋವಿನವರು ಗುರುವಾರ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಕೋಮಿನವರ ನಡುವೆ ಘರ್ಷಣೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ಪಡಿಸಲು ಪ್ರಯತ್ನ ನಡೆಸಿದರು.

ಆದರೆ, ಗುಂಪನ್ನು ಚದುರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಲಘು ಲಾಠಿ ಪ್ರಹಾರವನ್ನು ನಡೆಸಲಾಯಿತು. ಘರ್ಷಣೆಯ ಕಾರಣದಿಂದಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ವಿವಾದವೇನು? : ಈದ್ಗಾ ಮೈದಾನದ 6 ಎಕರೆ ಜಮೀನಿನಲ್ಲಿ 4 ಎಕರೆಯನ್ನು ಪಡೆದು ನ್ಯಾಯಾಲಯ ನಿರ್ಮಾಣ ಮಾಡಲಾಗಿದೆ. ಜಾಗವನ್ನು ಪಡೆಯುವಾಗ ಅಂದಿನ ಶಾಸಕ ಸಿ.ಪಿ.ಯೋಗೇಶ್ವರ ಅವರು ಬೇರೆ ಕಡೆಗೆ ಈದ್ಗಾ ಮೈದಾನಕ್ಕೆ ಹಾಗೂ ನಮಾಜ್ಗೆ ಜಾಗ ನೀಡುವುದಾಗಿ ಹೇಳಿದ್ದರು.
ಆದರೆ, ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಿ ಉದ್ಗಾಟನೆ ಹಂತಕ್ಕೆ ಬಂದರೂ ಬೇರೆ ಕಡೆ ಜಾಗ ಮಂಜೂರಾಗಿಲ್ಲ. ಜೊತೆಗೆ ಈದ್ಗಾ ಮೈದಾನದ ಜಾಗದಲ್ಲಿ 10 ಗುಂಟೆ ಜಾಗವನ್ನು ವಾಹನಗಳ ಪಾರ್ಕಿಂಗ್ಗೆ ಬಳಕೆ ಮಾಡಲಾಗುತ್ತಿದೆ.
ಈಗ ಹೊಸ ಜಾಗವನ್ನು ನೀಡುವುದಿಲ್ಲ ಎಂಬ ಸುದ್ದಿ ಹಬ್ಬಿದೆ. ಆದ್ದರಿಂದ, ನ್ಯಾಯಾಲಯ ಕಟ್ಟಡ ಮತ್ತು ಈದ್ಗಾ ಮೈದಾನದ ನಡುವೆ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಇದನ್ನು ತೆರವುಗೊಳಿಸುವ ವಿಚಾರದಲ್ಲಿ ಘರ್ಷಣೆ ನಡೆದಿದೆ.












Click it and Unblock the Notifications