ಡಿಕೆಶಿ ಜೊತೆ ವಿಶ್ವಾಸವಿದೆ, ಕಾಂಗ್ರೆಸ್ ಸೇರೊಲ್ಲ; ಎಸ್ಟಿಎಸ್
ರಾಮನಗರ, ಡಿಸೆಂಬರ್ 26; "ನಾನು ಸದ್ಯ ಬಿಜೆಪಿ ಪಕ್ಷದಲ್ಲಿ ಇದ್ದೇನೆ, ಮುಂದೆಯೂ ಇರುತ್ತೇನೆ. ಬಿಜೆಪಿ ಬಿಡುವ ಪ್ರಶ್ನೆಯಿಲ್ಲ, ಬಿಜೆಪಿ ಪಕ್ಷ ನನ್ನನು ಶಾಸಕನನ್ನಾಗಿ ಮಾಡಿದೆ. ಮಂತ್ರಿ ಮಾಡಿದೆ ಹಾಗಾಗಿ ನಾನು ಮತ್ತೆ ಕಾಂಗ್ರೆಸ್ಗೆ ಹೋಗುವ ಪ್ರಮೇಯ ಇಲ್ಲ" ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.
ರಾಮನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜಕಾರಣವೇ ಬೇರೆ ವಿಶ್ವಾಸ ಬೇರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನನಗೆ ಆತ್ಮೀಯ ಸ್ನೇಹಿತರು. ನಮ್ಮ ವೈಯಕ್ತಿಕ ವಿಶ್ವಾಸ ಚೆನ್ನಾಗಿದೆ. ಆದರೆ ರಾಜಕೀಯ ವಿಶ್ವಾಸ ನಮಗಿಲ್ಲ" ಎಂದರು.
"ನನ್ನ ರಾಜಕೀಯ ಬೆಳವಣಿಗೆಗೆ ಅವರೂ ಸಹಾಯ ಮಾಡಿದ್ದಾರೆ. ನಾವು ಭೇಟಿಯಾದಾಗ ರಾಜಕೀಯ ಚರ್ಚೆ ಮಾಡುವುದಿಲ್ಲ. ಕಾರಣಾಂತರದಿಂದ ಕಾಂಗ್ರೆಸ್ ಬಿಡಬೇಕಾಯ್ತು. ಕಾಂಗ್ರೆಸ್ ಬಿಟ್ಟ ನಂತರವು ನನ್ನ ಮತ್ತು ಅವರ ವಿಶ್ವಾಸ ಕಳೆದುಕೊಂಡಿಲ್ಲ, ಮೊದಲಿನಂತೆಯೇ ವಿಶ್ವಸ ಇದೆ" ಎಂದು ಸಚಿವರು ಹೇಳಿದರು.

"ನಾವು ಭೇಟಿಯಾದ ಸಮಯದಲ್ಲಿ ಡಿ. ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಸೇರಲು ಆಹ್ವಾನಿಸಿಲ್ಲ. ನಾನು ಕೂಡ ಕಾಂಗ್ರೆಸ್ಗೆ ಬರುತ್ತೇನೆ ಎಂದು ಕೇಳಿಕೊಂಡಿಲ್ಲ. ಮುಂದೆಯೂ ಕಾಂಗ್ರಸ್ ಸೇರಲ್ಲ" ಎಂದು ಸಚಿವರು ತಿಳಿಸಿದರು.
ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ; "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಪ್ರಶ್ನೆಯೇ ಇಲ್ಲ. 2023ರ ವಿಧಾನ ಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ" ಎಂದು ಸಚಿವ ಎಸ್. ಟಿ. ಸೋಮಶೇಖರ್ ಸಿಎಂ ಬದಲಾವಣೆ ವದಂತಿ ಅಲ್ಲಗೆಳೆದರು.
ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ವದಂತಿ, ಬಸವರಾಜ ಬೊಮ್ಮಾಯಿ ಅಮೆರಿಕ ಪ್ರವಾಸ ಕೈಗೊಂಡಿರುವ ಕುರಿತು ಪ್ರತಿಕ್ರಿಯಿಸಿದರು.
"ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ. ಕಟೀಲ್ ಅವರು ನಮ್ಮ ಸುಪ್ರೀಂ ಅವರೇ ಹೇಳಿದ ಮೇಲೆ ನಾನು ಹೇಳುವ ಅಗತ್ಯ ಇಲ್ಲ, ಈ ಬಗ್ಗೆ ಗೊಂದಲ ಅನಗತ್ಯ" ಎಂದರು.
ಸಚಿವ ಈಶ್ವರಪ್ಪ ಅವರು ನಿರಾಣಿ ಮುಖ್ಯಮಂತ್ರಿ ಯಾಗುತ್ತಾರೆ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, "ಈಶ್ವರಪ್ಪನವರು ಎಲ್ಲೂ ಈವಾಗ ಮುಖ್ಯಮಂತ್ರಿ ಯಾಗುತ್ತಾರೆ ಎಂದು ಹೇಳಿಲ್ಲ. ಮುಂದೆ ಸಿಎಂ ಆಗುತ್ತಾರೆ ಎಂದಿದ್ದಾರೆ. ಅವರ ಕ್ಷೇತ್ರಕ್ಕೆ ಭೇಟಿ ನೀಡಿದ ಸಮಯದಲ್ಲಿ ಅವರ ಪರವಾಗಿ ನಾಲ್ಕು ಮಾತಗಳನ್ನು ಹೇಳಿದ್ದಾರೆ. 2023ರ ಒಳಗೆ ನಿರಾಣಿ ಮುಖ್ಯಮಂತ್ರಿಯಾಗುತ್ತಾರೆ" ಎಂದು ಈಶ್ವರಪ್ಪ ಹೇಳಿಲ್ಲ ಎಂದು ತಿಳಿಸಿದರು.
ಕರ್ನಾಟಕ ಬಂದ್ ಅಗತ್ಯವಿಲ್ಲ; "ಕನ್ನಡ ಪರ ಸಂಘಟನೆಗಳು ಹೊಸ ವರ್ಷದ ಮುನ್ನಾ ದಿನ ಡಿಸೆಂಬರ್ 31 ರಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಅಗತ್ಯ ಇಲ್ಲ" ಎಂದು ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದೆರು.
"ಈಗಾಗಲೇ ಮುಖ್ಯಮಂತ್ರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಸರ್ಕಾರ ಎಂಇಎಸ್ ವಿರುದ್ಧದ ಕ್ರಮಕ್ಕೆ ಮುಂದಾಗಿದೆ. ಬೆಳಗಾವಿ ಶಾಂತವಾಗಿದೆ ಈ ಸಮಯದಲ್ಲಿ ಬಂದ್ ಮಾಡಿ ಶಾಂತಿ ಕದಡುವುದು ಬೇಡ. ಹಾಗಾಗಿ ಬಂದ್ ಬೇಡ" ಎಂದು ಸಲಹೆ ನೀಡಿದರು.












Click it and Unblock the Notifications