ಯೋಗೀಶ್ವರ್ ಬಗ್ಗೆ ಮಾತನಾಡಲ್ಲ; ಎಚ್. ಡಿ. ಕುಮಾರಸ್ವಾಮಿ
ರಾಮನಗರ, ಜುಲೈ 23; "ಪರಿಜ್ಞಾನವಿಲ್ಲದ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ್ ವಿರುದ್ಧ ವಾಗ್ಧಾಳಿ ನಡೆಸಿದರು.
ಕನ್ನಡ ಕೂಟ ನ್ಯೂಯಾರ್ಕ್ ಮತ್ತು ಅಮ್ಮಾ ಫೌಂಡೇಶನ್ ಸಹಯೋಗದೊಂದಿಗೆ ರಾಮನಗರ ಜಿಲ್ಲೆಗೆ 42 ಲಕ್ಷ ರೂ.ವೆಚ್ಚದ ಅಗತ್ಯ ವೈದ್ಯಕೀಯ ಉಪಕರಣ ವಿತರಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
"ಆ ವ್ಯಕ್ತಿಗೆ ಏನು ಮಾತನಾಡಬೇಕು ಎನ್ನುವ ಪರಿಜ್ಞಾನ ಇಲ್ಲ. ಅಂತಹವರ ಬಗ್ಗೆ ನಾನೇನು ಮಾತನಾಡಲಿ. ನಾನು ಮಂಡ್ಯ ಮೈಶುಗರ್ ವಿಚಾರವಾಗಿ ಸಿಎಂ ಭೇಟಿ ಮಾಡಿದ್ದೆ. ಖಾಸಗಿಯವರಿಗೆ ಕೊಡಬೇಡಿ ಎಂದು ಮನವಿ ಮಾಡಲು ಹೋಗಿದ್ದೆ. ನಾನೇನು ನನ್ನ ಸ್ವಂತ ಕೆಲಸಕ್ಕೆ ಹೋಗಿದ್ದೆನಾ?" ಎಂದು ಯೋಗೀಶ್ವರ್ ಆರೋಕ್ಕೆ ತಿರುಗೇಟು ನೀಡಿದರು.

"ಸರ್ಕಾರದ ಮುಖ್ಯಮಂತ್ರಿ, ಮಂತ್ರಿಗಳು ಧರ್ಮಕ್ಕೆ ಕೆಲಸ ಮಾಡುತ್ತಾರಾ?. ಸರ್ಕಾರದ ಕೆಲಸಕ್ಕಾಗಿ ಸಿಎಂ ಭೇಟಿ ಮಾಡಿದ್ದೇನೆ. ಸಾರ್ವಜನಿಕರ ಕೆಲಸ ಸರ್ಕಾರದಿಂದ ಆಗಬೇಕಲ್ಲವೇ?" ಎಂದು ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
"ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಮನಗರದ ರೇಷ್ಮೆ ಮಾರ್ಕೆಟ್ ವಿಚಾರವಾಗಿ ವಿಧಾನಸೌಧದಲ್ಲಿ ಸಭೆಗೂ ಹೋಗಿದ್ದೆ. ಆದರೆ ನಾನು ವೈಯಕ್ತಿಕ ಕೆಲಸಕ್ಕಾಗಿ ಯಾವ ಸಿಎಂ ಹತ್ತಿರ ಹೋಗಿಲ್ಲ. ನಾನು ಯಾರ ಬಳಿಯೂ ರಾಜೀ ಆಗಿಲ್ಲ. ಇಂತಹ ವ್ಯಕ್ತಿಗಳಿಂದ ರಾಜಕೀಯದಲ್ಲಿ ಪಾಠ ಕಲಿಯಬೇಕಿಲ್ಲ" ಎಂದು ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
"ನಾನು ಚನ್ನಪಟ್ಟಣದಲ್ಲಿ ಅವರಿಗೆ ಮುಳುವಾದೆ. ಹಾಗಾಗಿ ಸದಾ ನನ್ನ ಬಗ್ಗೆ ಮಾತನಾಡುತ್ತಾರೆ. ಅಲ್ಲದೇ, ನನ್ನ ಬಗ್ಗೆ, ಯಡಿಯೂರಪ್ಪ ಬಗ್ಗೆ ಮಾತನಾಡೋದೆ ಅವರಿಗೆ ಪ್ರಿಯ" ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿ. ಪಿ. ಯೋಗೀಶ್ವರ್, "ಯಡಿಯೂರಪ್ಪನವರಿಗೆ ಕುಮಾರಸ್ವಾಮಿಯನ್ನು ದೂರವಿಡಿ ಎಂದಿದ್ದೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಎಚ್. ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.











Click it and Unblock the Notifications