4 ತಿಂಗಳಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಬದಲು ಮಾಡ್ತಾರಂತೆ ಎಚ್ಡಿಕೆ
ರಾಮನಗರ, ಜೂನ್ 17: ಮುಂದಿನ 4 ತಿಂಗಳಲ್ಲಿ ಚನ್ನಪಟ್ಟಣ ಕ್ಷೇತ್ರದ ಚಿತ್ರಣವೇ ಬದಲಾಗಿ ಪ್ರಗತಿಯ ದರ್ಶನವಾಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.
ಚನ್ನಪಟ್ಟಣ ಕ್ಷೇತ್ರದ ಅಕ್ಕೂರು, ಕೋಡಂಬಹಳ್ಳಿ, ಹೊಂಗನೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಸುಮಾರು 200 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೇರವೇರಿಸಿ, ಪೂರ್ಣಗೊಂಡ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ರೈತರ ಸಾಲ ಮನ್ನಾ ಋಣ ಮುಕ್ತ ಪತ್ರ ವಿತರಿಸಿ, ಜನತಾ ದರ್ಶನ ನಡೆಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಎರಡು ದಿನ ಇರುತ್ತೇನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಈ ಜನತಾ ದರ್ಶನ ನಡೆಸಲಾಗುತ್ತಿದೆ. ನಾನು ಪ್ರಚಾರ ನಡೆಸದೆ ಇದ್ದರೂ, ನನಗೆ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಜನತಾ ದರ್ಶನಕ್ಕೆ ಬೆಂಗಳೂರಿನಿಂದಲ್ಲೆ ಅಧಿಕಾರಿಗಳು ಬಂದಿದ್ದಾರೆ ಎಂದರು.
ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು. ಮೂರು ಜಿಲ್ಲಾ ಪಂಚಾಯತ್ ಕ್ಷೆತ್ರಗಳ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ ಅರ್ಜಿಗಳನ್ನು ನನ್ನ ಕೈಗೆ ಮಾತ್ರವಲ್ಲ, ನಮ್ಮ ಅಧಿಕಾರಿಗಳ ಕೈಗೆ ಕೊಡಿ ಸಾಕು. ಎಲ್ಲ ಕೆಲಸಗಳನ್ನು ಮಾಡುತ್ತೇನೆ. ಯಾವುದೇ ಆತಂಕ ಬೇಡ. ಒಂದು ತಿಂಗಳೊಳಗೆ ಎಲ್ಲ ಸಮಸ್ಯೆ ಬಗೆ ಹರಿಯಲಿದೆ ಎಂದರು.

'ಕಂದಾಯ ಇಲಾಖೆ ಮೇಲೆ ಸಾಕಷ್ಟು ದೂರು ಬಂದಿದೆ'
ಕಂದಾಯ ಇಲಾಖೆ ಮೇಲೆ ಸಾಕಷ್ಟು ದೂರು ಬಂದಿದೆ. ಖಾತೆ, ಪೋಡಿ ಮಾಡಲು ಸಹ ಸಾರ್ವಜನಿಕರನ್ನು ಅಲೆಸಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇಂದೇ ಇಬ್ಬರನ್ನು ಅಮಾನತು ಮಾಡಬೇಕು ಎಂದುಕೊಂಡಿದ್ದೆ. ಆದರೂ, ಕಡೆಯ ಎಚ್ಚರಿಕೆ ನೀಡಲಾಗಿದೆ. ಮುಂದಿನ ಬೆಳವಣಿಗೆಗೆ ನಾನು ಜವಬ್ದಾರಿ ಅಲ್ಲ. ತಹಸೀಲ್ದಾರ್ ಗಳು ಕೆಲಸ ಮಾಡಿ. ಇಲ್ಲವೆ ಅಮಾನತಿಗೆ ಸಿದ್ದವಾಗಿರಿ. ಜನ ಸಮಾನ್ಯರಿಗೆ ಅನಾನುಕೂಲವಾಗದಂತೆ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು. ನೀವು ಬೆಂಗಳೂರಿನ ಮುಖ್ಯಮಂತ್ತಿಗಳ ಕೃಷ್ಣ ಗೃಹ ಕಚೇರಿಗೆ ಬಂದು ನಿಮ್ಮ ಅರ್ಜಿ ಬಗ್ಗೆ ವಿಚಾರಿಸಬಹುದು. ಈ ಬಗ್ಗೆ ನಮ್ಮ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು.

'ಹಿಂದೆ ಸಿಎಂ ಆಗಿದ್ದ ಪರಿಸ್ಥಿತಿ ಬೇರೆ, ಈಗ ಬೇರೆ'
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಪರಿಸ್ಥಿತಿಯೇ ಬೇರೆ. ಇಂದಿನ ಪರಿಸ್ಥಿತಿಯೇ ಬೇರೆ. ನನ್ನ ನೋವುಗಳು ನನ್ನ ಬಳಯೇ ಇರಲಿ. ಜನರಿಗೆ ಮಾತ್ರವಲ್ಲ ಅಧಿಕಾರಿಗಳಿಗೆ ವಿಶ್ವಾಸ ಮೂಡಿಸಬೇಕಿದೆ. ಹೀಗಾಗಿ ಜನರು ನನ್ನ ಮೇಲೆ ನಂಬಿಕೆ ಕಳೆದಿಕೊಳ್ಳುವ ಕೆಲಸವನ್ನು ನಾನೇ ಮಾಡಿದ್ದೇನೆ ಎಂಬ ಕೊರಗು ಇದೆ. ಹೀಗಾಗಿ ಗ್ರಾಮ ವಾಸ್ತವ್ಯ ಅರಂಭಿಸಲಾಗುತ್ತಿದ್ದು, ರಾಮನಗರ ಜಿಲ್ಲೆಯಲ್ಲಿಯು ಗ್ರಾಮ ವಾಸ್ತವ್ಯ ನಡೆಸಲಾಗುವುದು ಎಂದರು.

ವೃದ್ಧಾಪ್ಯ ವೇತನ ಹೆಚ್ಚಳ ಮಾಡುತ್ತೇನೆ:ಸಿಎಂ
ಯಾರು 60 ವರ್ಷಗಳ ಮೇಲ್ಪಟ್ಟಿದ್ದಾರೆ ಅವರಿಗೆ ಮುಂದಿನ ತಿಂಗಳು 1 ಸಾವಿರ ಬರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಮುಂದಿನ ವರ್ಷಗಳಿಂದ ವೃದ್ಧಾಪ್ಯ ವೇತನವನ್ನು 2 ಸಾವಿರಕ್ಕೆ ಏರಿಕೆ ಮಾಡಲಾಗುವುದು ಎಂದು ಅವರು ಘೋಷಣೆ ಮಾಡಿದರು.

25 ಸಾವಿರ ಕೋಟಿ ಸಾಲ ಮನ್ನಾ ಆಗಿದೆ
ಒಂದೇ ವರ್ಷದಲ್ಲೆ 25 ಸಾವಿರ ಕೋಟಿ ಹಣವನ್ನು ಸಾಲ ಮನ್ನಾಗೆ ನೀಡಿದ್ದೇನೆ. ಈ ಬಗ್ಗೆ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಜತೆ ಮೊನ್ನೆ ಊಟಕ್ಕೆ ಹೋಗಿದ್ದಾಗ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಈ ಹಿಂದೆ ಆಂದ್ರದಲ್ಲಿ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು 5 ಸಾವಿರ ಕೋಟಿ ಸಾಲ ಮನ್ನ ಮಾಡಲು ಸಾಧ್ಯವಾಗಿರಲಿಲ್ಲವಂತೆ ಎಂದರು.












Click it and Unblock the Notifications