ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ; ಎಚ್ಡಿಕೆ
ರಾಮನಗರ, ಫೆಬ್ರವರಿ 26: "ನೀನು ನನ್ನ ಮುಂದೆ ಇನ್ನು ಬಚ್ಚಾ ಇದೀಯಾ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಬೇಡ. ನಿನಗಿಂತಲೂ ಚೆನ್ನಾಗಿ ಮಾತನಾಡಲು ನನಗೂ ಬರುತ್ತೆ. ಸಚಿವ ಆಗಿದ್ದೀಯಾ ಕೆಲಸ ಮಾಡಿಕೊಂಡು ಹೋಗು. ನನ್ನ ವಿರುದ್ಧ ಮಾತನಾಡಿ ನಾಯಕ ಆಗುವ ಪ್ರಯತ್ನ ಬೇಡ" ಎಂದು ಎಚ್. ಡಿ. ಕುಮಾರಸ್ವಾಮಿ ಸಚಿವ ಸಿ. ಪಿ. ಯೋಗೇಶ್ವರ್ ಗೆ ಸಲಹೆ ಕೊಟ್ಟಿದ್ದಾರೆ.
ಶುಕ್ರವಾರ ಚನ್ನಪಟ್ಟಣದಲ್ಲಿ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಿ. ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. "ಯಾರೋ ಅಡವಿಟ್ಟ ಇಸ್ಪೀಟು ದುಡ್ಡಲ್ಲಿ ಮಂತ್ರಿಯಾಗಿದ್ದಾನೆ. ಇವನು ನನ್ನ ಬಗ್ಗೆ ಏನು ಮಾತನಾಡಲು ಸಾಧ್ಯ" ಎಂದು ಪ್ರಶ್ನಿಸಿದರು.
"ನಾನು ಕಾಣದಿರೋ ಬಿಜೆಪಿ ಪಕ್ಷನಾ?. ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ. 2006ರಲ್ಲಿ ಎಲ್ಲಾ ಮಂಗನ ತರಹ ಹಾರಲು ರೆಡಿಯಾಗಿದ್ದರು. ಅವತ್ತು ಬಿಜೆಪಿಯನ್ನು ಉಳಿಸಿದ್ದು ನಾನು" ಎಂದರು.

"ಇದೇ ಯಡಿಯೂರಪ್ಪ ಅರ್ಜಿ ಹಾಕೊಂಡು ನನ್ನ ಹತ್ತಿರ ಬಂದಿದ್ದರು. ನನಗೆ ಮಂತ್ರಿ ಮಾಡಿ ಬಿಜೆಪಿಗೆ ರಾಜೀನಾಮೆ ಕೊಡ್ತೀನಿ ಅಂತ. ಹಾಗಾಗಿ ಬಿಜೆಪಿಯಿಂದ ನನ್ನನ್ನು ಏನು ಮಾಡಲು ಆಗಲ್ಲ" ಎಂದು ಹೇಳಿದರು.
"ರಾಮನಗರ ಜಿಲ್ಲೆಯಲ್ಲಿ ನನ್ನನ್ನು ಖಾಲಿ ಮಾಡಿಸಲು ಎಲ್ಲಾ ನಿಂತಿದ್ದಾರೆ. ಆದರೆ, ದೇವೇಗೌಡರ ಕುಟುಂಬದ ಕೊಡುಗೆ ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಹೊಡೆದಿಲ್ಲ, ಜನರ ಹಣ ಲೂಟಿ ಮಾಡಿಲ್ಲ. ನನ್ನನ್ನ ಖಾಲಿ ಮಾಡಿಸಲು ಬಂದವರು ಅವರೇ ಖಾಲಿಯಾಗಿದ್ದಾರೆ" ಎಂದು ತಿಳಿಸಿದರು.
"ರಾಮನಗರ - ಚನ್ನಪಟ್ಟಣಕ್ಕೆ ಮಾಡಿರುವ ಅಭಿವೃದ್ಧಿ ಜನರಿಗೆ ಗೊತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಮಾಡಿರುವ ಕೆಲಸ ಜನರಿಗೆ ತಿಳಿದಿದೆ. ಜನರ ತಲೆ ಹೊಡೆದ ಹಣದಲ್ಲಿ ಮಂತ್ರಿಯಾಗಿದ್ದಾನೆ. ಯಡಿಯೂರಪ್ಪ, ಆರ್ಎಸ್ಎಸ್ ನಾಯಕರ ಮೆಚ್ಚಿಸಲು ಮಾತನಾಡುತ್ತಿದ್ದಾನೆ" ಎಂದು ಸಿ. ಪಿ. ಯೋಗೇಶ್ವರ ವಿರುದ್ಧ ಟೀಕಾಪ್ರಹಾರ ನಡೆಸಿದರು.
"ನನ್ನ ಬೈಕೊಂಡು ಹೊಟ್ಟೆಪಾಡು ಮಾಡುತ್ತಿದ್ದಾನೆ. ಚನ್ನಪಟ್ಟಣದಲ್ಲಿ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ. ಗೊತ್ತಿದೆ ನನಗೆ ನಾನು ಈ ಮಣ್ಣಿನ ಮಗ, ನನ್ನ ಅಂತಿಮ ಕಾಲ ರಾಮನಗರದಲ್ಲಿಯೇ. ರಾಮನಗರ ಜಿಲ್ಲೆ ಯಾರ ಸ್ವತ್ತಲ್ಲ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications