ಸೂಪರ್ ಸಿಎಂ ಅಲ್ಲ, ನಾನು ಬಿಜೆಪಿ ಕಾರ್ಯಕರ್ತ; ಬಿ. ವೈ. ವಿಜಯೇಂದ್ರ
ರಾಮನಗರ, ಫೆಬ್ರವರಿ 8: "ನನ್ನ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿವೆ. ಸೂಪರ್ ಸಿಎಂ ಎಂಬ ಮಾತುಗಳು ಬರುತ್ತಿವೆ. ನಾನು ಒಬ್ಬ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಅಷ್ಟೇ" ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಭಾನುವಾರ ಮಾಗಡಿಯಲ್ಲಿ ನಡೆದ 3ನೇ ವರ್ಷದ ಸಿದ್ದಲಿಂಗೇಶ್ವರ ಜಯಂತ್ಯೋತ್ಸವ ಹಾಗೂ ಪರಮಪೂಜ್ಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳವರ 2ನೇ ಪುಣ್ಯ ಸಂಸ್ಮರಣೋತ್ಸವದಲ್ಲಿ ಪಾಲ್ಗೊಂಡಿದ್ದರು.
"ಯಡಿಯೂರಪ್ಪ ಅವರು 4ನೇ ಭಾರಿ ಮುಖ್ಯಮಂತ್ರಿಯಾಗಿದ್ದಾರೆ. ಶ್ರೀಗಳ ಆಶೀರ್ವಾದ, ರಾಜ್ಯದ ಜನರ ಆಶಯದಿಂದ ಮುಖ್ಯಮಂತ್ರಿಗಳಾಗಿದ್ದಾರೆ. ರೈತರ, ಬಡವರ ಪರ ಧ್ವನಿಯಾಗಿ ಹೋರಾಟ ಮಾಡಿದ್ದಾರೆ. ಅವರು ಎಂದೂ ವೀರಶೈವ ಜಾತಿಗೆ ಸೀಮಿತವಾಗಿ ಕೆಲಸ ಮಾಡಿಲ್ಲ" ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

"ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಹಲವು ಜನಪರ ಯೋಜನೆಗಳನ್ನ ಜಾರಿ ಮಾಡಿದ್ದಾರೆ. ನನ್ನ ತಂದೆ ವಿರುದ್ಧ 25-30 ಕ್ರಿಮಿನಲ್ ಕೇಸ್ ಗಳು ಇದ್ದವು. ಹಂತ ಹಂತವಾಗಿ ಹೋರಾಟ ಮಾಡಿ ಕೇಸುಗಳನ್ನ ಕಡಿಮೆ ಮಾಡಿದ್ದೇನೆ. ನನ್ನ ತಂದೆ ವಿರುದ್ಧ ಹಲವರು ಷಡ್ಯಂತ್ರ ಮಾಡಿದರು. ಹಾಗಾಗಿ ನಾನು ತಂದೆ ಪರ ನಿಂತು ಕೆಲಸ ಮಾಡಿದ್ದೇನೆ ಅಷ್ಟೆ" ಎಂದರು.
"ನನ್ನ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿವೆ. ಸೂಪರ್ ಸಿಎಂ ಎಂಬ ಮಾತುಗಳು ಬರುತ್ತಿವೆ. ನಾನು ಒಬ್ಬ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಜವಬ್ದಾರಿ ಏನು ಎಂಬ ಅರಿವು ನನಗೆ ಇದೆ" ಎಂದು ವಿಜಯೇಂದ್ರ ಹೇಳಿದರು.
"ಮಾಗಡಿ ಕ್ಷೇತ್ರ ಹಲವು ಮಹಾನ್ ನಾಯಕರಿಗೆ ಜನ್ಮ ನೀಡಿದೆ. 90 ಕೋಟಿ ವೆಚ್ಚದಲ್ಲಿ ವೀರಪುರ ಗ್ರಾಮದಲ್ಲಿ 112 ಎತ್ತರದ ಶಿವಕುಮಾರಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ" ಎಂದರು.












Click it and Unblock the Notifications