ರಾಮನಗರದಲ್ಲಿ ಕಾರ್ಖಾನೆಗಳನ್ನು ಆರಂಭಿಸುವಂತೆ ಎಚ್ಡಿಕೆ ಒತ್ತಾಯ
ರಾಮನಗರ, ಏಪ್ರಿಲ್ 30: ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ, ಗ್ರೀನ್ ಜೋನ್ಗಳಲ್ಲಿ ಲಾಕ್ಡೌನ್ ವಿನಾಯಿತಿ ನೀಡಲು ಆದೇಶಿಸಲಾಗಿದೆ. ಈ ಅನ್ವಯ ರಾಜ್ಯದಲ್ಲಿರುವ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು, ಕೈಗಾರಿಕೆ ಕಾರ್ಖಾನೆಗಳಿಗೆ ಅನುಮತಿ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಿದೆ.
Recommended Video
ಕಂಟೈನ್ಮೆಂಟ್ ಇಲ್ಲದ ಹಾಗೂ ಕೊರೊನಾ ಕೇಸ್ ಇಲ್ಲದ ಪ್ರದೇಶಗಳಲ್ಲಿ ಕಾರ್ಖಾನೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕೇಸ್ ಪತ್ತೆಯಾಗಿಲ್ಲ ಅಂದರೂ ಕೊರೊನಾ ಭೀತಿ ಇರುವುದರಿಂದ ರಾಮನಗರಕ್ಕೆ ಅನುಮತಿ ನೀಡಿಲ್ಲ.
ಸರ್ಕಾರದ ಈ ತೀರ್ಮಾನ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು, ರಾಮನಗರ ಜಿಲ್ಲಾದ್ಯಂತ ಕೈಗಾರಿಕೆ ಕಾರ್ಖಾನೆ ಆರಂಭಿಸಲು ಅನುಮತಿ ನೀಡಿ ಎಂದು ಆಗ್ರಹಿಸಿದ್ದಾರೆ. ಮುಂದೆ ಓದಿ....

ರಾಮನಗರ ಜಿಲ್ಲೆಗೆ ಅನುಮತಿ ನೀಡಬೇಕು
'ರಾಮನಗರ ಜಿಲ್ಲೆಯಾದ್ಯಂತ ಕಾರ್ಖಾನೆಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಹಸಿರು ನಿಶಾನೆ ತೋರಬೇಕು. ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶಗಳು ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಉದ್ದಿಮೆದಾರರು ಮತ್ತು ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.

ಬೇರೆ ಜಿಲ್ಲೆಗಳಂತೆ ವಿನಾಯಿತಿ ಘೋಷಿಸಿ
''ಹೊರಗಿನಿಂದ ಬರುವ ಕಾರ್ಮಿಕರಿಗೆ ತಾತ್ಕಾಲಿಕ ನಿರ್ಬಂಧ ಮುಂದುವರಿಸಿದರೂ, 9 ಜಿಲ್ಲೆ ಗಳಿಗೆ ನೀಡಿರುವಂತೆ ರಾಮನಗರ ಜಿಲ್ಲೆಯ ಕಾರ್ಮಿಕರು ದುಡಿದು ತಿನ್ನಲು ತಕ್ಷಣವೇ ವಿನಾಯಿತಿ ಘೋಷಿಸಬೇಕು'' ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿಗೆ ಒತ್ತಾಯಿಸುವೆ
''ಕರೋನಾ ವೈರಸ್ ಮುಕ್ತವಾಗಿರುವ ಜಿಲ್ಲೆಗಳಲ್ಲಿ ನೀಡಿರುವ ವಿನಾಯ್ತಿಯನ್ನು ತಕ್ಷಣವೇ ರಾಮನಗರ ಜಿಲ್ಲೆಗೂ ಅನ್ವಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿಯವರಿಗೆ ಒತ್ತಾಯಿಸುತ್ತೇನೆ'' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಜಿಲ್ಲಾಧಿಕಾರಿ ಅನುಮತಿಸಿಲ್ಲ
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯಾದ್ಯಂತ ಯಾವುದೇ ಕೈಗಾರಿಕೆಗಳನ್ನು ಪ್ರಾರಂಭಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಸ್ಪಷ್ಟಪಡಿಸಿದ್ದಾರೆ. ರಾಮನಗರ ನಗರ ವ್ಯಾಪ್ತಿ ಹೊರತುಪಡಿಸಿ ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಲ್ ಗಳು ಮತ್ತು ಬೃಹತ್ ಅಂಗಡಿ ಮಳಿಗೆಗಳನ್ನು ಹೊರತುಪಡಿಸಿ, ಸ್ಥಳೀಯ ಅಂಗಡಿಗಳು, ಒಂಟಿ ಅಂಗಡಿಗಳನ್ನು ಮತ್ತು ವಸತಿ ಸಮುಚ್ಛಯದಲ್ಲಿರುವ ಅಂಗಡಿಗಳನ್ನು ತೆರೆಯಬಹುದಾಗಿದೆ.











Click it and Unblock the Notifications