ಯಡಿಯೂರಪ್ಪ, ಈಶ್ವರಪ್ಪ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುತ್ತಾರಾ?; ಎಚ್ ಡಿಕೆ
ರಾಮನಗರ, ಜನವರಿ 19: ತಮ್ಮ ವಿರುದ್ಧ ಟ್ವೀಟ್ ಮಾಡಿದ ಈಶ್ವರಪ್ಪ ವಿಚಾರವಾಗಿ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, "ಈಶ್ವರಪ್ಪ ತಮ್ಮ ನಾಲಿಗೆಗೆ ಬ್ರೇಕ್ ಹಾಕಿಕೊಳ್ಳಬೇಕು. ನಾನು ಈ ಹಿಂದೆ, ಬಡವರ ಮಕ್ಕಳು ಸೇನೆ ಸೇರುತ್ತಾರೆ ಎಂದು ಹೇಳಿದ್ದೆ. ಆ ಮಾತಿಗೆ ಈಗಲೂ ನಾನು ಬದ್ಧ. ಸೇನೆಗೆ ಬಡವರ ಮಕ್ಕಳಲ್ಲದೇ ಯಡಿಯೂರಪ್ಪ, ಈಶ್ವರಪ್ಪ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುತ್ತಾರಾ" ಎಂದು ಪ್ರಶ್ನೆ ಮಾಡಿದರು.
ರಾಮನಗರ ತಾಲ್ಲೂಕಿನ ಬಿಡದಿ ಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ 10 ಕೋಟಿ ರೂ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, "ನಾನು ಈಶ್ವರಪ್ಪ ಬಳಿ ಸಲಹೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈಶ್ವರಪ್ಪ ತಮ್ಮ ಬಾಯಿ ಚಪಲಕ್ಕಾಗಿ ಮಾತನಾಡುತ್ತಾರೆ" ಎಂದರು.
ಎಸ್ ಡಿಪಿಐ ಸಂಘಟನೆ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ನಾನು ವಿಷಯಗಳನ್ನು ಸಂಪೂರ್ಣವಾಗಿ ತಿಳಿದ ಮೇಲೆ ಮಾತನಾಡುವುದು. ಯಾವುದನ್ನೂ ಗಡಿಬಿಡಿಯಾಗಿ ಮಾತನಾಡೋದಿಲ್ಲ. ಬಿಜೆಪಿಯವರು ಕಲ್ಲು ಹೊಡೆದ ವಿಷಯ ಈವಾಗ ಹೇಳ್ತಾರೆ. ಆಗ ಯಾಕೆ ಹೇಳಲಿಲ್ಲ, ಅಲ್ಲಿ ಸಭೆ ನಡೆದಾಗ ಕಲ್ಲು ಬಿತ್ತು ಅಂತ ಯಾಕೆ ಹೇಳಿಲ್ಲ. ವಿಷಯವನ್ನು ತಿರುಚಲು ಮುಂದಾಗಿದ್ದಾರೆ" ಎಂದು ಆರೋಪಿಸಿದರು.

"ನಿಮ್ಮ ತಪ್ಪುಗಳು ಏನಿದೆ ಅನ್ನೋದನ್ನು ಯೋಚಿಸಿ. ಸರ್ಕಾರ ಬಂದು ತಿಂಗಳ ನಂತರ ಹೊಸ ಹೊಸದನ್ನ ಸೃಷ್ಟಿ ಮಾಡ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡಬೇಕಲ್ಲವಾ? ಇವರು ಹೇಳಿದ್ದನ್ನೇ ನಂಬೋಕೆ ಆಗುತ್ತಾ" ಎಂದು, ಸೂಲಿಬೆಲೆ ಚಕ್ರವರ್ತಿ ಮತ್ತು ಸಂಸದ ತೇಜಸ್ವಿ ಹತ್ಯೆಗೆ ಯತ್ನಿಸಿದ್ದರು ಎನ್ನುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ಸಂಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವರದಿಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, 'ತೇಜಸ್ವಿ, ಸೂಲಿಬೆಲೆ ಏನು ಯುಗಪುರುಷರೇ ಅವರನ್ನು ಕೊಲ್ಲಲು' ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಈಶ್ವರಪ್ಪನವರು, ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲೆಬೆಲೆ ದೇಶಾದ್ಯಂತ ಜನ ಜಾಗೃತಿ ಮಾಡುತ್ತಿದ್ದಾರೆ. ಅಂಥವರ ವಿರುದ್ಧವೂ ಹಗುರವಾಗಿ ಮಾತನಾಡುವುದು ಒಳ್ಳೆಯದ್ದಲ್ಲ" ಎಂದಿದ್ದರು.












Click it and Unblock the Notifications