ಪತ್ರಕರ್ತ ಹನುಮಂತು ಕುಟುಂಬಕ್ಕೆ ಎಚ್ಡಿಕೆ ಸಾಂತ್ವನ: ಚೆಕ್ ವಿತರಣೆ
ರಾಮನಗರ, ಏಪ್ರಿಲ್ 22: ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಹನುಮಂತು ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ. ಇಂದು ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ ಹೋಬಳಿಯ ಹನುಮಂತು ಸ್ವಗ್ರಾಮ ಪಡುವಣಗೆರೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದರು.
Recommended Video
ಕುಮಾರಸ್ವಾಮಿ ಮೃತ ಪತ್ರಕರ್ತ ಹನುಮಂತು ಅವರ ಪತ್ನಿ ಶಶಿಕಲಾ ಅವರಿಗೆ ಐದು ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು. ಅವರ ಕುಟುಂಬದ ಸದಸ್ಯರು ಹಾಗು ಹನುಮಂತು ಪತ್ನಿಗೆ ಧೈರ್ಯ ತುಂಬಿದರು. ಪರಿಹಾರ ನೀಡಿದ ಕುಮಾರಸ್ವಾಮಿ ಅವರಿಗೆ ಹನುಮಂತು ಪತ್ನಿ ಶಶಿಕಲಾ ಕೈಮುಗಿದು ನಮಸ್ಕರಿಸಿದರು.
''ನನಗೆ ಆತ್ಮೀಯರಾಗಿದ್ದ ಹನುಮಂತು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದ ದಿಟ್ಟ ಪತ್ರಕರ್ತರಾಗಿದ್ದರು.ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು.ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ.ಕರ್ತವ್ಯ ನಿರ್ವಹಣೆ ವೇಳೆ ಪ್ರಾಣತೆತ್ತ ಹನುಮಂತು ಅವರ ಆತ್ಮಕ್ಕೆ ಶಾಂತಿ ದಕ್ಕಲಿ.'' ಎಂದು ನಿನ್ನೆ ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಸಹ ಟ್ವಿಟ್ಟರ್ ಖಾತೆಯ ಮೂಲಕ ಹನುಮಂತು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಪ ಮುಖ್ಯಮಂತ್ರಿ ಡಾ ಅಶ್ವತ್ ನಾರಾಯಣ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 5 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಪತ್ರಕರ್ತ ಹನುಮಂತು ಪತ್ನಿಗೆ ಎಚ್ಡಿಕೆ ಸಾಂತ್ವನ
— oneindiakannada (@OneindiaKannada) April 22, 2020
@hd_kumaraswamy #Hanumanthu pic.twitter.com/4Nai838WU7
ಹನುಮಂತು ಕನ್ನಡದ ಖಾಸಗಿ ಸುದ್ದಿ ವಾಹಿನಿಯಲ್ಲಿ ರಾಮನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾಮನಗರದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಟಿಎಂ ಹಣ ಸಾಗಿಸುತ್ತಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ ಹನುಮಂತು ಸ್ಥಳದಲ್ಲೇ ಮೃತಪಟ್ಟಿದ್ದಾರೆ.












Click it and Unblock the Notifications