HDK ಪರ ಪ್ರಚಾರಕ್ಕಾಗಿ ಚನ್ನಪಟ್ಟಣಕ್ಕೆ ಆಗಮಿಸಿದ ಮಾಜಿ ಪ್ರಧಾನಿ HDD, ಮೋದಿಗೆ ಠಕ್ಕರ್ ಕೊಡಲು ಜಿಡಿಎಸ್ ಪ್ಲಾನ್
ರಾಮನಗರ, ಏಪ್ರಿಲ್, 30: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಚನ್ನಪಟ್ಟಣಕ್ಕೆ ಆಗಮಿಸಲಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಗೆ ಠಕ್ಕರ್ ಕೊಡಲು ಇದೀಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಚನ್ನಪಟ್ಟಣದ ಇಗ್ಗಲೂರು ಗ್ರಾಮದಲ್ಲಿ ನಡೆಯುವ ಜೆಡಿಎಸ್ ಸಮಾವೇಶಕ್ಕೆ ಆಗಮಿಸಿದ್ದಾರೆ.
ಇಂದು ಚನ್ನಪಟ್ಟಣದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಹಿನ್ನೆಲೆ, ಇಗ್ಗಲೂರು ಗ್ರಾಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ಸಮಾವೇಶ ಪ್ರಾರಂಭ ಆಗಲಿದ್ದು, ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ದೇವೇಗೌಡರು ಮತಬೇಟೆ ನಡೆಸಲಿದ್ದಾರೆ.

ಅಲ್ಲದೆ ಇದೇ ವೇಳೆ ದೇವೇಗೌಡರು ಚನ್ನಪಟ್ಟಣ ತಾಲೂಕಿಗೆ ನೀರಾವರಿ ಸೌಕರ್ಯ ಒದಗಿಸುವ ಇಗ್ಗಲೂರು ಜಲಾಶಯವನ್ನು ವೀಕ್ಷಣೆ ಮಾಡಿದರು. ದೇವೇಗೌಡರು ನೀರಾವರಿ ಸಚಿವರಾಗಿದ್ದ ವೇಳೆ ಈ ಬ್ಯಾರೇಜ್ ಅನ್ನು ನಿರ್ಮಾಣ ಮಾಡಲಾಗಿತ್ತು.
ಇನ್ನು ಪ್ರಧಾನಿ ಮೋದಿ ಆಗಮನದ ಕುರಿತು ಪ್ರತಿಕ್ರಿಯಿಸಿದ ದೇವೆಗೌಡರು, ನಾನು ಮೊದಲ ಬಾರಿಗೆ ಕುಮಾರಸ್ವಾಮಿ ಅವರ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಬಂದಿದ್ದೇನೆ. ಇದನ್ನು ಮುಗಿಸಿ ಬೇರೆ ಕ್ಷೇತ್ರಗಳಿಗೆ ಹೋಗುತ್ತೇನೆ. ಪ್ರಧಾನಿಗಳು ಬರುತ್ತಿದ್ದಾರೆ, ಗೊತ್ತಿದೆ ನನಗೆ. ಅವರು ಬರುವುದರೊಳಗೆ ನನ್ನ ಕಾರ್ಯಕ್ರಮ ಮುಗಿಯಲಿದೆ. ಅವರು ಬರೋದನ್ನು ಬೇಡ ಎನ್ನಲು ಆಗುತ್ತದೆಯಾ? ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಕುಮಾರಣ್ಣರ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ವಿಶೇಷ ಕಾರ್ಯಕ್ರಮ ಆಗಿದೆ. ಅಲ್ಲದೆ ಇದು ಜನಪರ ಯೋಜನೆಯೂ ಆಗಿದೆ. ಆದ್ದರಿಂದ ಈ ಕಾರ್ಯಕ್ರಮ ಮುಗಿಸಿ ಬೇರೆ ಕ್ಷೇತ್ರಗಳಿಗೆ ಹೋಗುತ್ತೇನೆ ಎಂದು ಎಚ್.ಡಿ.ದೇವೇಗೌಡರು ಹೇಳಿದರು.












Click it and Unblock the Notifications