ಎಂಎಲ್ಸಿ ಯೋಗೇಶ್ವರ್ಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ
ರಾಮನಗರ, ಜನವರಿ 6: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಏನೋ ಮಾಡುತ್ತೇನೆ ಅಂತ ಹೋದರು, ಆದರೆ ಏನೂ ಮಾಡಲಿಕ್ಕೆ ಆಗಲಿಲ್ಲ ಎಂದು ಹೆಸರು ಹೇಳದೇ ಬಿಜೆಪಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ಅವರಿಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.
ರಾಮನಗರದಲ್ಲಿ ಹೇಳಿಕೆ ನೀಡಿದ ಮಾಜಿ ಸಿಎಂ ಎಚ್ಡಿಕೆ, ""ನಾನು ಇವತ್ತು ಮಂತ್ರಿ ಆಗುತ್ತೇನೆ, ನಾಳೆ ಮಂತ್ರಿ ಆಗುತ್ತೇನೆ ಅಂತಾ ಹೇಳಿ ಜನರನ್ನು ಸೆಳೆಯುತ್ತಿದ್ದಾರೆ. ತಾಲ್ಲೂಕಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕೆ ಲೆಟರ್ ಹೆಡ್ ಆ್ಯಕ್ಷನ್ ಹಾಕಿಕೊಂಡು ಕೂತಿದ್ದಾರೆ'' ಎಂದು ಲೇವಡಿ ಮಾಡಿದರು.
ಈ ರೀತಿ ಹಣ ಸಂಪಾದನೆ ಮಾಡಲು ಅವಶ್ಯಕತೆ ಇದೆಯಾ?, ಇಲ್ಲಿನ ಪಿಎಸ್ಐ ವರ್ಗಾವಣೆಗೆ 30 ಲಕ್ಷ ರುಪಾಯಿ ಹಣ ಬೇಡಿಕೆ ಇಟ್ಟಿದ್ದಾರೆ. 30 ಲಕ್ಷ ಹಣ ಕೊಟ್ಟು ಬಂದರೆ ಪಿಎಸ್ಐ ಜನರ ಜೀಬಿಗೆ ಕೈ ಹಾಕಬೇಕು, ಇದನ್ನು ಬಿಟ್ಟು ಯೋಗೇಶ್ವರ್ ಜೇಬಿಗೆ ಕೈ ಹಾಕ್ತಾನಾ ಎಂದು ಕಿಡಿಕಾರಿದರು.

ಜೀವನದಲ್ಲಿ ಮನುಷ್ಯನಿಗೆ ಹಣ ಬೇಕು, ಹಾಗಂತ ಹಗಲು ದರೋಡೆ ಮಾಡಬಾರದು. ಈ ತರ ಮಾಡಿಕೊಂಡು ಇರುವುದಕ್ಕಿಂತ ಗೌರವಯುತವಾಗಿ ರಾಜಕೀಯ ಬಿಟ್ಟು ಮನೆಯಲ್ಲಿ ಇರುವುದು ಒಳ್ಳೆಯದು ಎಂದು ರಾಮನಗರದಲ್ಲಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಚನ್ನಪಟ್ಟಣ ಶಾಸಕರಾಗಿರುವ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜೆಡಿಎಸ್ ಶಾಸಕರನ್ನ ಸೆಳೆಯುವ ಕೆಲಸ ಕಳೆದ ಎರಡು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಈ ಹಿಂದೆ ದೇವೇಗೌಡರ ಕಾಲದಲ್ಲಿ ಕೂಡ ಶಾಸಕರ ರಾಜೀನಾಮೆ ಕೊಡಿಸುವ ಕೆಲಸ ನಡೆದಿತ್ತು. ಆದರೆ ಮತ್ತೆ ನಾವು ಗೆದ್ದು ಅಧಿಕಾರಕ್ಕೆ ಬಂದಿದ್ದೇವು ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ನಮ್ಮ ಶಾಸಕರನ್ನು ಯಾಕೆ ಸೆಳೆಯುತ್ತಾರೆ? ಅವರಿಗೆ ಆ ಶಕ್ತಿ ಇಲ್ಲ, ಹಾಗಾಗಿ ತಮ್ಮ ಶಕ್ತಿ ವೃದ್ಧಿ ಮಾಡಿಕೊಳ್ಳಲು ಈ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು.
ನಾನು ಯಾವತ್ತೂ ಯಾರ ಮನೆ ಬಾಗಿಲಿಗೂ ಹೋಗಿ ನಮ್ಮ ಪಕ್ಷಕ್ಕೆ ಬನ್ರಪ್ಪ ಅಂತಾ ಯಾರನ್ನು ಕರೆದಿಲ್ಲ. ರಾಜ್ಯದ ಜನತೆಯ ಕಷ್ಟ-ಸುಖ ಗಳಿಗೆ ಸ್ಪಂದನೆ ಮಾಡುವ ಯಾರಾದರೂ ನಮ್ಮ ಪಕ್ಷಕ್ಕೆ ಬಂದರೆ ನಾನು ಆಹ್ವಾನ ನೀಡುತ್ತೇನೆ ಎಂದರು.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಬೆಳೆಸುವ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಸಂಕ್ರಾಂತಿ ಹಬ್ಬದ ದಿನದಂದು ಹೊಸ ರಾಜಕೀಯಕ್ಕೆ ಚಾಲನೆ ಕೊಡುತ್ತಿದ್ದೇನೆ ಎಂದು ರಾಮನಗರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.












Click it and Unblock the Notifications