ಚನ್ನಪಟ್ಟಣದಲ್ಲಿ 40-50 ವರ್ಷಗಳಲ್ಲೇ ಇದೇ ಮೊದಲ ಭೀಕರ ಪ್ರವಾಹ: ಎಚ್ಡಿ ಕುಮಾರಸ್ವಾಮಿ
ಚನ್ನಪಟ್ಟಣ, ಸೆಪ್ಟೆಂಬರ್ 1: ಮಳೆ ಹಾನಿ ವಿಚಾರದಲ್ಲಿ ನನ್ನ ಊಹೆಗೂ ಮೀರಿ ಅನಾಹುತವಾಗಿದೆ. ನಾನು ಸ್ಥಳ ಪರಿಶೀಲನೆ ಮಾಡಿದ ವೇಳೆ ಈ ಎಲ್ಲಾ ಅಂಶಗಳು ಗೊತ್ತಾಗಿದ್ದು, 40-50 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ಅನಾಹುತಗಳು ಉಂಟಾಗಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಳೆ ದುರಂತದ ಬಗ್ಗೆ ನಾನು ತುಂಬಾ ಆಳವಾಗಿ ನೋಡ್ತಾ ಇದ್ದೀನಿ. ನೂರಾರು ಸಮಸ್ಯೆಗಳು ಕಂಡುಬಂದಿದೆ. ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಈ ಸಮಸ್ಯೆಗಳು ಶಾಶ್ವತವಾಗಿ ಬಗೆಹರಿಸಲಾಗುವುದು. ಕಳೆದ ಒಂದು ವಾರದ ಮಳೆಯಿಂದಾಗಿ ಎಲ್ಲಿ ತಪ್ಪಾಗಿದೆ ಅದನ್ನು ಮೊದಲು ಹುಡುಕಲಾಗುತ್ತಿದೆ.
ಇನ್ನು ಜಿಲ್ಲೆಯಲ್ಲಿ ಮಳೆ ಹಾನಿಯಿಂದಾಗಿರುವ ಪ್ರದೇಶಗಳಿಗೆ ಪರಿಹಾರ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಲ್ಲಿನ ಪರಿಸ್ಥಿತಿಗಳನ್ನು ನೋಡಿದಾಗ ಎನ್ ಡಿಆರ್ ಎಫ್ ನಿಂದ ಕೊಡುವ ಪರಿಹಾರ ಸಾಕಾಗುವುದಿಲ್ಲ. ವಿಶೇಷವಾಗಿ ಜಿಲ್ಲೆಗೆ ಪ್ಯಾಕೇಜ್ ಘೋಷಣೆ ಮಾಡಬೇಕಾಗುತ್ತದೆ. ನಾನು ಸರಕಾರದ ಮೇಲೆ ಹೆಚ್ಚಿನ ರೀತಿ ಒತ್ತಡ ಹಾಕುತ್ತೇನೆ. ಕೆಲವು ಕಡೆ ಪರಿಹಾರದಿಂದ ಸಮಸ್ಯೆ ಬಗೆಹರಿಯದಿದ್ದರೆ, ನನ್ನ ವೈಯಕ್ತಿಕವಾಗಿ ಕೂಡ ಸಹಾಯ ಮಾಡಲು ತೀರ್ಮಾನ ಮಾಡಿದ್ದೇನೆ ಎಂದರು.
ಮಳೆ ಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಭೇಟಿ ನೀಡದ ವಿಚಾರವಾಗಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಮಳೆ ಹಾನಿಯಾಗಿದೆ. ಎಲ್ಲಾ ಉಸ್ತುವಾರಿ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅದೇನೋ ರಾಮನಗರದಲ್ಲಿ ಅಭಿವೃದ್ಧಿ ಆಗಿಲ್ಲ, ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡಿದ್ದೀನಿ ಅಂದಿದ್ರಲ್ಲಾ, ಈಗ ಮಾಡಿ ತೋರಿಸಲಿ ಎಂದ ಅವರು, ರಾಜ್ಯದ 14-15 ಜಿಲ್ಲೆಗಳಲ್ಲಿ ಮಳೆಹಾನಿಯಿಂದ ಸಮಸ್ಯೆಯಾಗಿದೆ. ಮಳೆ ಹಾನಿಯಿಂದ ಆಗಿರುವ ರಾಮನಗರ-ಚನ್ನಪಟ್ಟಣ ತಾಲೂಕಿಗೆ ವಿಶೇಷ ಪ್ಯಾಕೇಜ್ ನೀಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಸಿಎಂ ವಿಶೇಷ ಪ್ಯಾಕೇಜ್ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಪ್ರತಾಪ್ ಸಿಂಹ ಅವರ ನೇತೃತ್ವದಲ್ಲೇ ಸಮಿತಿ ಮಾಡಲಿ
ಇನ್ನು ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿಯಿಂದಕೆರೆ ಕಟ್ಟೆಗಳು, ಒತ್ತುವರಿಯಾಗಿದೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, "ಇದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕೆರೆ ಒತ್ತುವರಿ ಬಗ್ಗೆ ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಿ ಅನ್ನುವುದರಲ್ಲಿ ನಾನೇ ಮೊದಲು. 2016 ರಲ್ಲಿ ವಿಧಾನಸಭಾ ಕಲಾಪದಲ್ಲೇ ನಾನು ಹೇಳಿದ್ದೇನೆ. ಕೆರೆ ಒತ್ತುವರಿ ಬಗ್ಗೆ ಸಮಗ್ರ ತನಿಖೆ ಮಾಡಿ ಎಂದಿದ್ದೆ. ಕೆರೆ ಒತ್ತುವರಿ ತೆರವು ಸದನ ಸಮಿತಿ ಮಾಡಿ, ಅಂದಿನ ಸಭಾಧ್ಯಕ್ಷರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅಂದಿನ ವರದಿ ಏನಾಗಿದೆ ಎಂಬುದು ನಿಮ್ಮ ಮುಂದೇಯೆ ಇದೆ. ರಾಜ್ಯದಲ್ಲಿ ಹಲವಾರು, ಕೆರೆಗಳು, ಕಾಲುವೆಗೆಳು ಒತ್ತುವರಿಯಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ಮಾಡಲಿ. ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲೇ ಸಮಿತಿ ಮಾಡಿ ತನಿಖೆ ಮಾಡಲಿ," ಎಂದು ಇದೇ ವೇಳೆ ತಿಳಿಸಿದರು.

ಮನೆಕಟ್ಟಿಕೊಡುವ ಭರವಸೆ
ಚನ್ನಪಟ್ಟಣದಲ್ಲಿ ಹೆಚ್ಚಾಗಿ ಮಳೆಹಾನಿಯಿಂದ ಸಮಸ್ಯೆಯಾಗಿದೆ. ನಾನು ಕಳೆದ 4 ವರ್ಷಗಳಿಂದ ಶಾಸಕನಾಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ. 25 ವರ್ಷಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಹಲವು ಗ್ರಾಮಗಳಿಗೆ ಭೇಟಿ ಕೊಟ್ಟ ವೇಳೆ, ಅಲ್ಲಿನ ನಿವಾಸಿಗಳು 50 ವರ್ಷಗಳಿಂದ ವಾಸ ಮಾಡ್ತಿದ್ದೇನೆ ಎಂದಿದ್ದಾರೆ. ನಾನು ಅವರಿಗೆ ಈಗ ಹಕ್ಕು ಪತ್ರ ಕೊಟ್ಟಿದ್ದೇನೆ. ನಾನು ಬಂದ ಮೇಲೆ ಸಾಕಷ್ಟು ಕಡೆ ಹಕ್ಕು ಪತ್ರ ನೀಡಿದ್ದೇನೆ. ಮನೆ ನಾನೇ ಕಟ್ಟಿಸಿಕೊಡುತ್ತೇನೆ , ನಿವೇಶನಗಳನ್ನು ಮಾರಾಟ ಮಾಡಿಕೊಳ್ಳಬೇಡಿ ಎಂದು ಹೇಳಿದ್ದೇನೆ. ಶೆಡ್ನಲ್ಲಿ ವಾಸ ಮಾಡುವವರ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಾನು ಸಿಎಂ ಆಗಿದ್ರೆ ಈ ಚಿತ್ರಣವಿರುತ್ತಿರಲಿಲ್ಲ
ನನಗೆ ಇನ್ನೂ ಒಂದು ವರ್ಷ ಅಧಿಕಾರ ಸಿಕ್ಕಿದ್ರೆ ಈ ರೀತಿ ಚಿತ್ರಣ ಇರುತ್ತಿರಲಿಲ್ಲ. ನಾನು ಒಂದು ಕಡೆ ರಾಜ್ಯ ನೋಡಬೇಕು, ಮತ್ತೊಂದು ಕಡೆ ಒತ್ತಡ. ನಾನು ಜನರನ್ನು ರೀಚ್ ಆಗೋಕೆ ಸಾಧ್ಯವಾಗಿಲ್ಲ. ಈ ಕ್ಷೇತ್ರಕ್ಕೆ ನನ್ನಿಂದಲೂ ಕೂಡ ತಪ್ಪಾಗಿದೆ. ಜನರನ್ನು ಕ್ಷಮೆ ಕೇಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಯಾರು ಏನೇ ಹೇಳಿದರೂ ನಾವು 150 ಸೀಟು ಗೆಲ್ತೀವಿ, ಮುಂದಿನ ಬಾರಿ ಜನತಾದಳ ಸರಕಾರವೇ ಅಧಿಕಾರಕ್ಕೆ ಬರುತ್ತದೆ ಎಂದರು.

ಸಿಪಿವೈ ವಿರುದ್ಧ ಕಿಡಿ
ಅವತ್ತು ಯಾರೋ ಹೇಳಿದ್ರಲ್ಲ. ಚನ್ನಪಟ್ಟಣ ತಾಲೂಕನ್ನು ಚಿನ್ನದ ನಾಡು ಮಾಡ್ತೀನಿ ಎಂದಿದ್ದರು. ಮುಂದಿನ ಬಾರಿ ಸರಕಾರ ಬಂದ ನಂತರ ಅವರ(ಯೋಗೀಶ್ವರ್) ಬಯಕೆಯನ್ನು ತೀರುಸುತ್ತೇನೆ. ಕಳೆದ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಕೂಡ ಬಂದಿರಲಿಲ್ಲ. ನಾನೇನು ಜನರಿಗೆ ಆಶ್ವಾಸನೆ ಕೊಟ್ಟಿರಲಿಲ್ಲ. ಕೇವಲ ನಾಮಿನೇಶನ್ ಹಾಕಿ ಹೋಗಿದ್ದೆ, ಇಲ್ಲಿನ ಜನರೇ ನನ್ನನ್ನು ಗೆಲ್ಲಿಸಿ ಕಳುಹಿಸಿದ್ದರು ತಿಳಿಸಿದರು.
ಇಲ್ಲಿನ ಮಾಜಿ ಶಾಸಕರು ಸರಕಾರ ಬೀಳಿಸುವುದಕ್ಕೆ ಏನು ಮಾಡಿದರು. ಸರಕಾರ ತೆಗೆದು ಏನು ಸಾಧನೆ ಮಾಡಿದ್ರು. ಇಲ್ಲಿನ ಜನರು ಕಷ್ಟ ಅನುಭವಿಸುವುದಕೆ ಮೂಲ ಕಾರಣವೇ ಅವರು. ನಾನು ಕೊಟ್ಟಂತಹ ಕೆಲಸಗಳು ಜನರ ಕಣ್ಣಿಗೆ ಕಾಣುತ್ತದೆ. ನಾನು ಪ್ರಚಾರದ ಹಿಂದೆ ಬಿದ್ದಿಲ್ಲ. ನಾನು ಅಭಿವೃದ್ಧಿ ಕೆಲಸವೇ ಮುಖ್ಯ ಎಂದು ಕೊಂಡಿರುವವನು, ಕ್ಷೇತ್ರಕ್ಕೆ ನಾನು ಯಾವುದಾದರೂ ಅನುದಾನ ಕೊಟ್ಟರೆ ಪೂಜೆ ಮಾಡೋಕೂ ಸಹ ಬರುತ್ತಿರಲಿಲ್ಲ. ಅದರೆ ಅವರು ಕಂಟ್ರಾಕ್ಟರ್ ಹತ್ತಿರ ಕಮೀಶನ್ ತಗೊಂಡು ಕೆಲಸ ಮಾಡೋಕೆ ಹೇಳುತ್ತಿದ್ದರು ಎಂದು ಸಿಪಿವೈ ವಿರುದ್ದ ಮಾಜಿ ಎಚ್ಡಿಕೆ ವಾಗ್ದಾಳಿ ನಡೆಸಿದರು.












Click it and Unblock the Notifications