ನಾಯಕರಾದ ಮೇಲೆ ಪಕ್ಷ ಬಿಟ್ಟು ಹೋಗುವುದು ಹೊಸದೇನಲ್ಲ: ಎಚ್ಡಿಕೆ ಕಿಡಿ
ರಾಮನಗರ, ಅಕ್ಟೋಬರ್ 2: "ನಾಯಕರಾಗಿ ಬೆಳೆದ ಮೇಲೆ ಜೆಡಿಎಸ್ ಪಕ್ಷ ಬಿಟ್ಟು ಹೋಗುವುದು ಹೊಸದೇನಲ್ಲ, ಇದರಿಂದ ಜೆಡಿಎಸ್ಗೆ ಯಾವುದೇ ಶಾಕ್ ಆಗಿಲ್ಲ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಕೆ, "ಸಿದ್ದರಾಮಯ್ಯ, ರಮೇಶ್ ಕುಮಾರ್ ಯಾವ ಪಕ್ಷದಲ್ಲಿದ್ದರು, ಜೆಡಿಎಸ್ ಪಕ್ಷ ನಿಂತಿರುವುದು ನಾಯಕರಿಂದ ಅಲ್ಲ. ನಮ್ಮ ಲಕ್ಷಾಂತರ ಕಾರ್ಯಕರ್ತರಿಂದ," ಎಂದು ತಿಳಿಸಿದರು.
"ಜೆಡಿಎಸ್ ಕಾರ್ಯಕರ್ತರಿಗೆ ನಾಲ್ಕು ದಿನಗಳ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ಭಾನುವಾರ ಮತ್ತು ಸೋಮವಾರ ಅಲ್ಪಸಂಖ್ಯಾತರ ಕಾರ್ಯಾಗಾರ ಏರ್ಪಡಿಸಿದ್ದೇವೆ. ಇದೇ ವೇಳೆ ಎಸ್ಸಿ, ಎಸ್ಟಿ ಹಾಗೂ ಓಬಿಸಿ ಕಾರ್ಯಾಗಾರ ನಡೆಸಲಿದ್ದೇವೆ," ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

"ಜೆಡಿಎಸ್ ಕಾರ್ಯಾಗಾರ 1.0ಯಿಂದ 10.0 ತನಕ ನಿರಂತರ ಪಕ್ಷ ಸಂಘಟನೆಗೆ ಚಾಲನೆ ಕೊಟ್ಟಿದ್ದೇವೆ. ಇದು ಜೆಡಿಎಸ್ನ ಆರಂಭಿಕ ಶೂರತ್ವ ಅಂತ ಹಲವರು ಭಾವನೆ ಇಟ್ಟುಕೊಂಡಿದ್ದಾರೆ. ಒಂದು ಕಡೆ ಸಂಘಟನೆ, ಇನ್ನೊಂದು ಕಡೆ ಜೆಡಿಎಸ್ ಮನೆ ಖಾಲಿ ಆಗುತ್ತಿದೆ ಎನ್ನುವ ದೊಡ್ಡ ಸುದ್ದಿಗಳು ಬರುತ್ತಿವೆ. ನಮಗೆ ಇದರಲ್ಲಿ ಯಾವುದೇ ಶಾಕ್ ಇಲ್ಲ," ಅಂತ ಅಭಿಪ್ರಾಯಪಟ್ಟಿದ್ದಾರೆ.
"ಪಕ್ಷ ಬಿಡುತ್ತಿರುವವರು ಯಾರೂ ಪಕ್ಷ ಬಲವರ್ಧನೆಗೆ ಶಕ್ತಿ ತುಂಬಿದವರಲ್ಲ. ನಿನ್ನೆ ಒಬ್ಬರು ಬಿಜೆಪಿಗೆ ಅಪ್ಲಿಕೇಶನ್ ಹಾಕಿಕೊಂಡಿದ್ದಾರೆ. ಆ ವ್ಯಕ್ತಿ ಹಿಂದೆ ರಾಮಕೃಷ್ಣ ಹೆಗಡೆ ಕಾಲದಿಂದ ಹಲವು ಬಾರಿ ಪರಿಷತ್ ಚುನಾವಣೆಯಲ್ಲಿ ಎಂದೂ ಯಶಸ್ಸು ಕಂಡಿರಲಿಲ್ಲ. ಅವರು ಗೆದ್ದಿದ್ದು ನನ್ನ ಬಲದಿಂದ. ಇಂಥ ಪ್ರಸಂಗಗಳು ನಡೆಯುತ್ತಿರುವ ಹಿನ್ನೆಲೆ ನಾಡಿನ ಜನತೆಯ ಗಮನಕ್ಕೂ ತರುತ್ತಿದ್ದೇನೆ," ಎಂದು ಎಚ್ಡಿಕೆ ತಿಳಿಸಿದರು.

ಅಂಗಲಾಚಲ್ಲ ಎಂದ ಹೆಚ್ಡಿಕೆ
"ರಾಜ್ಯದ ತೆರಿಗೆ ಹಣ ಹೇಗೆ ಲೂಟಿಯಾಗುತ್ತಿದೆ ಎಂದು ಗೊತ್ತಿದೆ. ಲೂಟಿ ಮಾಡುತ್ತಿರುವ ಕಮಿಷನ್ ಸರ್ಕಾರ ತೆಗೆಯುವುದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯಾಗಾರ ಮಾಡಿದ್ದೇವೆ. ಹುಡುಗಾಟಕ್ಕೆ, ಕಾಲ ಕಳೆಯುವುದಕ್ಕೆ ಕಾರ್ಯಾಗಾರ ಮಾಡಿಲ್ಲ. ಪಂಚರತ್ನ ಯೋಜನೆ ಜಾರಿಯಾದರೆ ಕೇಂದ್ರ ಸರ್ಕಾರದ ಮುಂದೆ ಅಂಗಲಾಚಬೇಕಾಗಿಲ್ಲ," ಎಂದರು.
ಮಾತು ಮುಂದುವರೆಸಿದ ಎಚ್ಡಿಕೆ, "ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಯ ಗುತ್ತಿಗೆ ಪಡೆದಿಲ್ಲ. ಅವರ ಜೇಬು ತುಂಬಿಸಿಕೊಳ್ಳುವ ಗುತ್ತಿಗೆ ಪಡೆದಿದ್ದಾರೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ನಿಲ್ಲಿಸಲಿ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 4 ಸೀಟ್ ಗೆದ್ದಿದ್ದೇವೆ. ದಿನಕ್ಕೆ ಒಬ್ಬರು ನಮ್ಮ ಮನೆಗೆ ಬರ್ತೀರಾ?," ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿ, ಕಾಂಗ್ರೆಸ್ ದೊಣ್ಣೆ ನಾಯಕರ ಕೇಳಿ ಅಭ್ಯರ್ಥಿ ಹಾಕಬೇಕಾ. ನನ್ನ ಪಕ್ಷದಿಂದ ಯಾರನ್ನು ಬೇಕಾದರೂ ಕಣಕ್ಕಿಳಿಸುತ್ತೇನೆ. ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಅಂತ ಬೊಗಳಿದರು. ಬಳಿಕ ಸರ್ಕಾರ ನಡೆಸೋಣ ಅಂತ ನಮ್ಮ ಮನೆಗೇ ಬಂದರಲ್ಲ. ಅಧಿಕಾರ ಕೊಟ್ಟ ಮೇಲೆ ನೆಟ್ಟಗೆ ನಡೆಸುವುದಕ್ಕಾದರೂ ಬಿಟ್ಟರಾ? ಈಗ ಬಿಜೆಪಿ ಸರ್ಕಾರವನ್ನು ದರಿದ್ರ ಸರ್ಕಾರ ಅಂತಾರೆ," ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಹೆಸರೇಳದೆ ಕಿಡಿಕಾರಿದರು.
"ಅಕ್ಟೋಬರ್ 16ರಿಂದ ಬೆಂಗಳೂರಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ 10 ದಿನಗಳ ಕಾಲ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಸಂಕ್ರಾಂತಿ ವೇಳೆಗೆ ಆ ಅಭ್ಯರ್ಥಿಗಳು ಆಯಾ ಕ್ಷೇತ್ರದ ಮತದಾರರ ಮನೆ ಬಾಗಿಲಿಗೆ ತಲುಪಿ ಪಕ್ಷ ಸಂಘಟನೆ ಮಾಡಬೇಕು. ಯಾರು ನಮ್ಮ ಟಾಸ್ಕ್ ರೀಚ್ ಮಾಡುತ್ತಾರೆಯೋ ಅಂತಹ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತೇವೆ," ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
"ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಯಾವ ದೊಣ್ಣೆ ನಾಯಕರ ಅಪ್ಪಣೆ ಬೇಕಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಅಪ್ಪಣೆ ಪಡೆದು ಅಭ್ಯರ್ಥಿ ಘೋಷಣೆ ಮಾಡಬೇಕಿಲ್ಲ. ಎರಡು ಕ್ಷೇತ್ರದ ಅಭ್ಯರ್ಥಿಗಳು ದೊಡ್ಡ ಮಟ್ಟದ ವಿದ್ಯಾಭ್ಯಾಸ ಪಡೆದಂತವರು. ಪಕ್ಷದ ಪ್ರಮಾಣಿಕ ಕಾರ್ಯಕರ್ತರು ಎಂದು ಟಿಕೆಟ್ ನೀಡಲಾಗಿದೆ," ಎಂದು ಬಿಡದಿಯ ಕೇತುಗಾನಹಳ್ಳಿಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.











Click it and Unblock the Notifications