ರಾಮನಗರ; ಮಾವಿನ ತೋಪಿನಲ್ಲಿ ರೇವ್ ಪಾರ್ಟಿ, 10 ಜನರ ಬಂಧನ
ರಾಮನಗರ, ಡಿಸೆಂಬರ್ 8 : 32 ಎಕರೆಯ ವಿಶಾಲ ಮಾವಿನ ತೋಪು, ದೊಡ್ಡ ಧ್ವನಿ ವರ್ಧಕ, ಹೊರ ರಾಜ್ಯಗಳ ಯುವಕ ಯುವತಿಯರ ಕುಣಿತ, ಸಾಲು ಸಾಲು ಮದ್ಯದ ಬಾಟಲಿಗಳು. ಇದು ರಾಮನಗರದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ದೃಶ್ಯಗಳು.
ರಾಮನಗರ ಎಸ್ಪಿ ಅನೂಪ್ ಶೆಟ್ಟಿ ನೇತೃತ್ವದ ಪೊಲೀಸರ ತಂಡ ಅನುಮತಿ ಇಲ್ಲದೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದೆ. ಈ ವೇಳೆ 10 ಜನರನ್ನು ಬಂಧಿಸಲಾಗಿದ್ದು, ಮದ್ಯ, ಕ್ಯಾಮರಾ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ನಗರದ ವೆಂಕಟೇಶ್ ಎಂಬುವವರಿಗೆ ಸೇರಿದ 32 ಎಕರೆ ವಿಶಾಲ ಮಾವಿನ ತೋಪಿನಲ್ಲಿ ಅನುಮತಿ ಪಡೆಯದೇ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮೊಬೈಲ್ ಅಪ್ಲಿಕೇಶನ್ ಮೂಲಕ ರೇವ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಯುವಕ/ಯುವತಿಯರಿಂದ ಹಣ ಸಂಗ್ರಹ ಮಾಡಲಾಗಿತ್ತು.

ಭಾನುವಾರ ತಡರಾತ್ರಿ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮಾವಿನ ತೋಪಿನ ಮಧ್ಯೆ ಶಾಮಿಯಾನ ಹಾಕಿ, ದೊಡ್ಡ ಧ್ವನಿ ವರ್ಧಕಗಳನ್ನು ಹಾಕಿಕೊಂಡು ರೇವ್ ಪಾರ್ಟಿ ಮಾಡಲಾಗುತ್ತಿತ್ತು. ಬೆಂಗಳೂರು ಮಾತ್ರವಲ್ಲದೇ ಕೇರಳ ರಾಜ್ಯದ ಯುವಕ/ಯುವತಿಯರು ಇದರಲ್ಲಿ ಪಾಲ್ಗೊಂಡಿದ್ದರು.
ರೇವ್ ಪಾರ್ಟಿಯಲ್ಲಿ 500 ಯುವಕ/ಯುವತಿಯರು ಪಾಲ್ಗೊಂಡಿದ್ದರು. ಕರ್ನಾಟಕ, ಕೇರಳ, ತಮಿಳುನಾಡಿನವರು ಇದ್ದರು. ಬೆಂಗಳೂರಿನ ಮಧುಮಿತ ರೇವ್ ಪಾರ್ಟಿ ಆಯೋಜನೆ ಮಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಪೊಲೀಸರು ದಾಳಿ ನಡೆಸಿ ಪೌರಾಣಿಕ್ ಪುರೋಹಿತ್, ನಬಿರಾ, ರಿಚು ಸೇರಿದಂತೆ 10 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮದ್ಯ, ಡಿಜೆ ಬಾಕ್ಸ್, ಶಾಮಿಯಾನ, ಕ್ಯಾಮೆರಾ,ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.












Click it and Unblock the Notifications