ಬೆಸ್ಕಾಂ ಸಿಬ್ಬಂದಿ ಎಡವಟ್ಟು; ರಾಮನಗರದಲ್ಲಿ ಹೀಗಾಯ್ತು...
ರಾಮನಗರ, ಮಾರ್ಚ್ 11: ಬೆಸ್ಕಾಂ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ತಾಲ್ಲೂಕಿನ ಬುರಗಮರದದೊಡ್ಡಿ ಗ್ರಾಮದಲ್ಲಿನ ಸುಮಾರು 20 ಮನೆಗಳ ವಿದ್ಯುತ್ ಉಪಕರಣಗಳು ಹಾನಿಯಾಗಿರುವ ಘಟನೆ ನಡೆದಿದೆ.
ಗ್ರಾಮದಲ್ಲಿನ ಟ್ರಾನ್ಸ್ ಫಾರ್ಮರ್ ಬದಲಾಯಿಸುವ ವೇಳೆ ಬೆಸ್ಕಾಂ ಸಿಬ್ಬಂದಿ ಎಡವಟ್ಟಿನಿಂದಾಗಿ, ಓವರ್ ಲೋಡ್ ಆದ ಟ್ರಾನ್ಸ್ ಫಾರ್ಮರ್ ನಿಂದ ಹೈವೋಲ್ಟೇಜ್ ಪ್ರವಹಿಸಿ ಸುಮಾರು 40ಕ್ಕೂ ಹೆಚ್ಚು ಟಿ.ವಿ, 10 ಫ್ರಿಡ್ಜ್, 20ಕ್ಕೂ ಹೆಚ್ಚು ಫ್ಯಾನ್ ಗಳು ಹಾನಿಯಾಗಿವೆ. ಬೆಸ್ಕಾಂ ಸಿಬ್ಬಂದಿ ಜಾಗ್ರತೆ ವಹಿಸದೆ ಹೈವೋಲ್ಟೇಜ್ ವಿದ್ಯುತ್ ಇಡೀ ಗ್ರಾಮಕ್ಕೆ ಹರಿದು ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಉಡಾಫೆ ಹೇಳಿಕೆ ನೀಡಿದ್ದಾರೆಂದು ಕೆಲಕಾಲ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾಮಸ್ಥರು ಬೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಮಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.












Click it and Unblock the Notifications