ತಂದೆಯ ಜನ್ಮದಿನದ ಸ್ಮರಣೆಗಾಗಿ ಉಚಿತ ಮಾಸ್ಕ್ ವಿತರಿಸಿದ ವೈದ್ಯ
ರಾಮನಗರ, ಮಾರ್ಚ್ 15: ತನ್ನ ತಂದೆಯ ಜನ್ಮದಿನದ ಸ್ಮರಣೆಗಾಗಿ ಜನರಲ್ಲಿ ಕೊರೊನಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಈ ವೈದ್ಯ ಮಾದರಿಯಾಗಿದ್ದಾರೆ.
ಡಾ.ಲೋಕಾನಂದ ತನ್ನ ತಂದೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಉತ್ತಮ ಹೆಸರು ಗಳಿಸಿದ್ದ ವೈದ್ಯ ದಿ.ಗುರುವಪ್ಪ ರವರ ಜನ್ಮದಿನಾಚರಣೆಯನ್ನು ಪಟ್ಟಣದ ಗುರುವಪ್ಪ ವೃತ್ತದಲ್ಲಿ ಸಾರ್ವಜನಿಕರಿಗೆ ಉಚಿತ ಮಾಸ್ಕ್, ಸೋಪ್ ಗಳ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ತಂದೆ ಸಾವು; ಫೇಸ್ಬುಕ್ ಮೂಲಕ ಅಂತಿಮ ದರ್ಶನ ಪಡೆದ ಕೊರೊನಾ ರೋಗಿ!
ವೈದ್ಯರಾಗಿ ಉತ್ತಮ ಹೆಸರು ಗಳಿಸಿದ ತನ್ನ ತಂದೆಯ ಹುಟ್ಟುಹಬ್ಬವನ್ನು ಅರ್ಥಪೂರ್ಣ ಆಚರಿಸಬೇಕೆಂದು ಯೋಚಿಸಿದ ವೈದ್ಯ ಲೋಕಾನಂದ, ದೇಶವನ್ನು ಭೀತಿಗೆ ತಳ್ಳಿರುವ ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ನಗರದಲ್ಲಿ ಸಾರ್ವಜನಿಕರಿಗೆ ಮಾಸ್ಕ್, ಸೋಪ್ ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಮೂಲಕ ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿದರು.
ವೈದ್ಯ ಲೋಕಾನಂದ ಕಾರ್ಯಕ್ಕೆ ಕುಟುಂಬದವರು, ಸ್ನೇಹಿತರು, ಸಾಹಿತಿಗಳು ಮತ್ತು ಹಲವು ಸಂಘಟನೆಯ ಕಾರ್ಯಕರ್ತರು ಕೈಜೋಡಿಸಿ, ನಮ್ಮ ಹಾಗೂ ನಮ್ಮ ಸುತ್ತಲಿನ ಸ್ವಚ್ಛತೆ ಕಾಪಾಡಿದರೆ ಕೊರೊನಾ ಮಹಾಮಾರಿಯನ್ನು ತಡಗಟ್ಟಬಹುದು ಎಂಬ ಸಂದೇಶ ಸಾರಿದರು.
ಮದುವೆ, ಹುಟ್ಟುಹಬ್ಬ, ನಾಮಕರಣ ಸೇರಿದಂತೆ ಹೆಚ್ಚು ಜನರು ಸೇರುವ ಕಾರ್ಯಕ್ರಮ ಬೇಡ ಎಂಬ ಸರ್ಕಾರ ಅದೇಶದ ನಡುವೆ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ತಂದೆಯ ಹುಟ್ಟಹಬ್ಬದ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡ ವೈದ್ಯ ಲೋಕಾನಂದ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.