ಡಿಕೆಶಿಯವರಿಗೆ 'ಗಿಫ್ಟ್' ನ ಅರ್ಥ ಚೆನ್ನಾಗಿ ಗೊತ್ತಿದೆ: ಯೋಗೇಶ್ವರ್!
ರಾಮನಗರ, ನವೆಂಬರ್ 02: 'ಸಚಿವ ಡಿ.ಕೆ ಶಿವಕುಮಾರ್ ಬಹಳಷ್ಟು ಗಿಫ್ಟ್ ಡೀಡ್ ಮಾಡಿಕೊಂಡಿದ್ದಾರೆ. ಅಲ್ಲದೇ ಗಿಫ್ಟ್ ಅನ್ನೋ ಪದದ ಅರ್ಥ ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆಂದೇ ಬೇರೆ ಬೇರೆ ಆಸ್ತಿಗಳನ್ನು ತಮ್ಮ ಹೆಸರಿಗೆ ಗಿಫ್ಟ್ ಮಾಡಿಕೊಂಡಿದ್ದಾರೆ' ಎಂದು ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಡಿಕೆಶಿ ಅವರ ವಿರುದ್ಧ ವ್ಯಂಗ್ಯೋಕ್ತಿ ಪ್ರಯೋಗಿಸಿದ್ದಾರೆ.
ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿರುವ ಶಾಸಕ ಸಿ.ಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಇಂದು(ನ.2) ಬೆಳಿಗ್ಗೆ ನಡೆದ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು. ಸುಮಾರು 2 ಸಾವಿರಕ್ಕೂ ಅಧಿಕಾರ ಬೈಕ್ ಗಳು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದವು.
ಇದೇ ವೇಳೆ ಮಾತನಾಡಿದ ಶಾಸಕ ಸಿ.ಪಿ ಯೋಗೇಶ್ವರ್, ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. 'ಸಚಿವ ಡಿಕೆಶಿಯವರು ಬಲವಂತಕ್ಕೆ ಸ್ಥಳೀಯ ಮುಖಂಡರ ಮನೆಗೆ ಬಂದು ಡ್ರಾಮಾ ಮಾಡಿ ಹೋಗ್ತಾರೆ. ಅದನ್ನ ತಾಲ್ಲೂಕಿನ ಜನ ನಂಬುವುದಿಲ್ಲ ಎಂದರು. ಅಲ್ಲದೇ ಬಿಜೆಪಿಗೆ ತಾವು ಸೇರ್ಪಡೆಯಾಗುತ್ತಿರುವುದು ಅವರ ಹತಾಶೆಗೆ ಕಾರಣವಾಗಿದೆ' ಎಂದರು.
'ಬೇನಾಮಿ ಆಸ್ತಿಯ ಗಿಫ್ಟ್ ನೀಡುವ ವಿಚಾರವಾಗಿ ಮಾತನಾಡಿದ ಅವರು ಈಗಾಗಲೇ ಬಹಳಷ್ಟು ಗಿಫ್ಟ್ ಡೀಡ್ ಮಾಡ್ಕೊಂಡಿದ್ದಾರೆ. ಅದನ್ನೆಲ್ಲಾ ಮುಂದಿನ ದಿನಗಳಲ್ಲಿ ಅನಾವರಣ ಮಾಡುತ್ತೇನೆ' ಎಂದು ತಿಳಿಸಿದರು.