ಮೃತ ಪತ್ರಕರ್ತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ ಡಿಸಿಎಂ
ರಾಮನಗರ, ಮೇ 11: ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಖಾಸಗಿ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರ ಹನುಮಂತು ಅವರ ಕುಟುಂಬದವರಿಗೆ ಉಪಮುಖ್ಯಮಂತ್ರಿ ಸಿ.ಎನ್ ಅಶ್ವಥ್ ನಾರಾಯಣ ಅವರು 5 ಲಕ್ಷ ರೂ.ಗಳ ವೈಯಕ್ತಿಕ ಚೆಕ್ ನ್ನು ಇಂದು ಹಾರೋಹಳ್ಳಿಯ ಪಡುವಣಗೆರೆಯಲ್ಲಿರುವ ಅವರ ನಿವಾಸಕ್ಕೆ ತೆರಳಿ ವಿತರಿಸಿದರು.
ಕಳೆದ ಏಪ್ರಿಲ್ 21 ರಂದು ರಾಮನಗರ ಜಿಲ್ಲೆಯಲ್ಲಿ ವರದಿಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಖಾಸಗಿ ಟಿವಿ ಜಿಲ್ಲಾ ವರದಿಗಾರ ಹನುಮಂತು.ಕೆ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಅಂದೇ ಉಪಮುಖ್ಯಮಂತ್ರಿಗಳು 5 ಲಕ್ಷ ರೂ.ಗಳ ವೈಯಕ್ತಿಕ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದರು.
ಇದರ ನಡುವೆ ಬೆಂಗಳೂರಿನ ಖಾಸಗಿ ವಾಹಿನಿಯ ಸಿಬ್ಬಂದಿಯವರಿಗೆ ಕೊರೊನಾ ವೈರಸ್ ಸೋಂಕಿರುವುದು ಖಚಿತವಾಗಿದ್ದರಿಂದ, ಉಪ ಮುಖ್ಯಮಂತ್ರಿಗಳು ಈ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಹೋಮ್ ಕ್ವಾರಂಟೈನ್ ಆಗಿದ್ದರು. ಹೀಗಾಗಿ ಉಪ ಮುಖ್ಯಮಂತ್ರಿಗಳು ರಾಮನಗರಕ್ಕೆ ಭೇಟಿ ನೀಡುವುದು ಅನಿವಾರ್ಯವಾಗಿ ಮುಂದೂಡಿಕೆಯಾಗಿತ್ತು.

ಕ್ವಾರಂಟೈನ್ ಅವಧಿ ಮುಕ್ತಾಯಗೊಂಡ ಬಳಿಕ ಉಪ ಮುಖ್ಯಮಂತ್ರಿ ಸಿ.ಎನ್ ಅಶ್ವಥ್ ನಾರಾಯಣ ಅವರು ತಮ್ಮ ಮಾತಿನಂತೆ ಇಂದು ಕ್ವಾರಂಟೈನ್ ಅವಧಿ ಮುಕ್ತಾಯದ ಬಳಿಕ ಜಿಲ್ಲೆಗೆ ಭೇಟಿ ನೀಡಿದ ಮೊದಲ ದಿನವೇ ಪಡುವಣಗೆರೆಗೆ ತೆರಳಿ ಪರಿಹಾರ ರೂಪದಲ್ಲಿ ವೈಯಕ್ತಿಕ 5 ಲಕ್ಷ ರೂ.ಗಳ ಚೆಕ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ಹನುಮಂತು ಕುಟುಂಬದವರಿಗೆ ಸಾಂತ್ವನ ಹೇಳಿದ ಉಪ ಮುಖ್ಯಮಂತ್ರಿಗಳು ಅವರ ಪತ್ನಿಗೆ ಕೆಎಂಎಫ್ ಜಿಲ್ಲಾ ಒಕ್ಕೂಟದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದರು.












Click it and Unblock the Notifications