ಕ್ಷೇತ್ರದ ಜನರಿಗೆ ಉಡುಗೊರೆ ಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್
ರಾಮನಗರ, ಫೆಬ್ರವರಿ 14: ಪುತ್ರಿಯ ವಿವಾಹದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕನಕಪುರ ಕ್ಷೇತ್ರದ ಜನರಿಗೆ ಉಡುಗೊರೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಮನೆಗೆ ಉಡುಗೊರೆ ಕಳಿಸಿದ್ದಾರೆ.
ಭಾನುವಾರ ಕಾಫಿ ಡೇ ಮಾಲೀಕ ದಿ. ಸಿದ್ದಾರ್ಥ ಹೆಗಡೆ ಪುತ್ರ ಅಮರ್ತ್ಯ ಹೆಗಡೆ ಹಾಗೂ ಡಿ. ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ವಿವಾಹ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿದೆ.
ಡಿಕೆ ಶಿವಕುಮಾರ್ ಪುತ್ರಿ ವಿವಾಹ: ದೆಹಲಿಯಿಂದ ಹಲವು ಗಣ್ಯರ ಆಗಮನ ಸಾಧ್ಯತೆ
ಈ ಹಿನ್ನಲೆಯಲ್ಲಿ ಡಿಕೆಶಿ ಸಹೋದರರು ರಾಮನಗರದ ಕನಕಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಪ್ರತಿ ಮನೆ ಮನೆಗೂ ಉಡುಗೊರೆಯನ್ನು ತಲುಪಿಸಿದ್ದಾರೆ.

ಪುರುಷರಿಗೆ ರೇಡ್ ಅಂಡ್ ಟೇಲರ್ ಕಂಪನಿಯ ಪ್ಯಾಂಟ್, ಶರ್ಟ್. ಮಹಿಳೆಯರಿಗೆ ಬನ್ನಾರಸ್ ಕಂಪನಿಯ ದುಬಾರಿ ಸೀರೆ ಹಾಗೂ ಹಿರಿಯರಿಗೆ ಪಂಚೆ, ಶರ್ಟ್ ಉಡುಗೊರೆ ನೀಡಲಾಗಿದೆ.
ಕ್ಷೇತ್ರದ ಪ್ರತಿ ಗ್ರಾಮದ ಜನರಿಗೂ ತಮ್ಮ ಮಗಳ ಮದುವೆಯ ಉಡುಗೊರೆ ನೀಡಿರುವ ಡಿಕೆಶಿ ಸಹೋದರರು ಸುಮಾರು 2.50 ಲಕ್ಷಕ್ಕೂ ಹೆಚ್ಚು ಜನರಿಗೆ ಮದುವೆ ಉಡುಗೊರೆಗಳನ್ನು ತಲುಪಿಸಿದ್ದಾರೆ.
ಪ್ರತಿ ಸೀರೆಯ ಬೆಲೆ 3,500 ರಿಂದ 5000 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಇನ್ನೂ ಪ್ಯಾಂಟ್, ಶರ್ಟ್ಗೆ 3000 ದಿಂದ 4,500 ಸಾವಿರ ರೂ. ಎಂದು ಜನರು ಹೇಳುತ್ತಿದ್ದಾರೆ.
ಪ್ರತಿ ಗ್ರಾಮದಲ್ಲೂ ಡಿ. ಕೆ. ಶಿವಕುಮಾರ್ ಬೆಂಬಲಿಗರು ಮನೆ ಮನೆಗೂ ತೆರಳಿ ಉಡುಗೊರೆ ಹಂಚಿಕೆ ಮಾಡಿದ್ದಾರೆ. ಕೋವಿಡ್ ಕಾರಣದಿಂದಾಗಿ ಕ್ಷೇತ್ರದ ಜನರು ವಿವಾಹದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.
ಕೋವಿಡ್ ನಿಯಮಗಳು ಇಲ್ಲದಿದ್ದರೆ ಕನಕಪುರದಲ್ಲಿಯೇ ಅದ್ದೂರಿ ವಿವಾಹವನ್ನು ನಡೆಸುವ ಯೋಜನೆಯನ್ನು ಡಿ. ಕೆ. ಶಿವಕುಮಾರ್ ಹಾಕಿಕೊಂಡಿದ್ದರು. ಆದರೆ, ಇಂದು ಸರಳವಾಗಿ ಬೆಂಗಳೂರಿನಲ್ಲಿ ವಿವಾಹ ನಡೆಯುತ್ತಿದೆ.












Click it and Unblock the Notifications