ಮಾಗಡಿ ಕಾಂಗ್ರೆಸ್‌ನಲ್ಲಿ ಭಿನ್ನಮತ; ಡಿಕೆಶಿಗೆ ಬಾಲಕೃಷ್ಣ ಪತ್ರ

ರಾಮನಗರ, ಮೇ20: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್‌ ಸಂಘಟಿಸಿ ಅಧಿಕಾರಕ್ಕೆ ತರುತ್ತೇನೆ ಎಂದು ರಾಜ್ಯಾದ್ಯಂತ ಪಕ್ಷ‌ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಆದರೆ ಅಧ್ಯಕ್ಷರ ತವರು ಜಿಲ್ಲೆಯ ಕಾಂಗ್ರೆಸ್‌ ಅಂಗಳದಲ್ಲಿ ಭಿನ್ನಮತ ಉಂಟಾಗಿದೆ.

ಮುಂದಿನ ಚುನಾವಣೆಗೆ ಮಾಗಡಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಮಾಜಿ ಸಚಿವ‌ ಎಚ್. ಎಂ. ರೇವಣ್ಣಗೆ ನೀಡುವಂತೆ ಮಾಜಿ‌ ಶಾಸಕ ಹೆಚ್. ಸಿ. ಬಾಲಕೃಷ್ಣ ಡಿ. ಕೆ. ಶಿವಕುಮಾರ್‌ಗೆ ಪತ್ರ ಬರೆಯುವ ಮೂಲಕ ತಮ್ಮ ಹಾಗೂ ರೇವಣ್ಣನವರ ನಡುವಿನ ಶೀತಲ ಸಮರ ಬಹಿರಂಗಪಡಿಸಿದ್ದಾರೆ.

ಪತ್ರದಲ್ಲಿ ನಾನು ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ಮಾಜಿ ಸಚಿವ ಹೆಚ್. ಎಂ.ರೇವಣ್ಣಗೆ ಮುಜುಗರ ತಂದಿದೆ. ಅವರಿಗೆ ನನ್ನ ಮೇಲಿರುವ ರಾಜಕೀಯ ದ್ವೇಷ ಕಡಿಮೆಯಾಗಿಲ್ಲ. ಹಾಗಾಗಿ ಜೆಡಿಎಸ್ ಶಾಸಕ ಎ. ಮಂಜುನಾಥರನ್ನು ಬಹಿರಂಗವಾಗಿ ಹೊಗಳುತ್ತಿದ್ದಾರೆ ಎಂದು ಹೇಳಿದ್ದಾರೆ.

balakrishna

ಅಲ್ಲದೇ ಕಳೆದ ಚುನಾವಣೆಯಲ್ಲಿ ತಮ್ಮ ಹಿಂಬಾಲಕರಿಗೆ ಎ. ಮುಂಜುನಾಥ್‌ರನ್ನು ಬೆಂಬಲಿಸುವಂತೆ ಹೆಚ್. ಎಂ. ರೇವಣ್ಣ ಹೇಳಿದ್ದರು ಎಂದು ಪತ್ರದಲ್ಲಿ ಆರೋಪ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ಎದುರಾಗುತ್ತಿರುವಾಗ ಮಾಜಿ ಶಾಸಕ ಬಾಲಕೃಷ್ಣ ಬರೆದ ಪತ್ರ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ‌ ಎಂಬುದಕ್ಕೆ ಸಾಕ್ಷಿಯಾಗಿದೆ.

ಪತ್ರದ ಸಾರಾಂಶ; ಮಾಗಡಿ ಕ್ಷೇತ್ರದಿಂದ ನಾನು 25 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲೇ ಹಾದಿಯನ್ನು ಸವೆಸಿರುತ್ತೇನೆ. ನನಗೆ ವಿರುದ್ಧವಾಗಿ ಹೆಚ್. ಎಂ. ರೇವಣ್ಣ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಪ್ರತಿ ಬಾರಿಯೂ ಚುನಾವಣೆಯಲ್ಲಿ ಪೈಪೋಟಿ ನೀಡಿರುತ್ತಾರೆ. ಅವರು ಕ್ಷೇತ್ರ ಮರು ವಿಂಗಡಣೆ ನಂತರ ಬೆಂಗಳೂರಿನಲ್ಲಿ ಸ್ಪರ್ಧಿಸಲು ಅವಕಾಶವನ್ನು ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಕೇಳಿದ್ದರೂ ಸಹ ಅವರಿಗೆ ಸೂಕ್ತವಾದ ಕ್ಷೇತ್ರ ಲಭಿಸಿರುವುದಿಲ್ಲ.

25 ವರ್ಷಗಳ ಕಾಲ ನಾವು ಪರಸ್ಪರ ರಾಜಕೀಯ ವಿರೋಧಿಗಳಾಗಿ ಸೆಣಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾನು ಜನತಾದಳ ಜಾತ್ಯತೀತ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುತ್ತೇನೆ. ನಾನು ಜೆಡಿಎಸ್ ಪಕ್ಷದಲ್ಲಿ 20 ವರ್ಷಗಳ ಕಾಲ ರಾಜಕೀಯವಾಗಿ ಪಕ್ಷ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುತ್ತೇನೆ.

revanna

ಯಾವುದೇ ಸಂದರ್ಭದಲ್ಲಿ ನಾನು ಜೆಡಿಎಸ್ ಪಕ್ಷಕ್ಕೆ ಇರಿಸುಮುರಿಸು ಆಗುವಂತೆ ನಡೆದುಕೊಂಡಿರುವುದಿಲ್ಲ. ಆದರೆ ಜೆಡಿಎಸ್ ಮುಖಂಡರ ಜೊತೆ ಆಂತರಿಕ ಕಲಹ ಹೆಚ್ಚಾಗಿದ್ದರಿಂದ ನಾನು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದು ಎಲ್ಲರಿಗೂ ತಿಳಿದ ವಿಷಯವಾಗಿರುತ್ತದೆ.

ಮತ್ತೊಮ್ಮೆ ಸ್ಪರ್ಧಿಸುವ ಹಂಬಲ; ನಾನು ಕಾಂಗ್ರೆಸ್ ಸೇರ್ಪಡೆಯಾದ ಕಾರಣ ಹಲವಾರು ವರ್ಷಗಳಿಂದ ಮಾಗಡಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ರೇವಣ್ಣಗೆ ಇರಿಸುಮುರಿಸು ಉಂಟಾಗಿರುತ್ತದೆ. ಬಹುಶಃ ಹೆಚ್. ಎಂ. ರೇವಣ್ಣಗೆ ಮಾಗಡಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುವ ಹಂಬಲ ಇದೆ ಎಂಬುದು ಅವರ ನಡವಳಿಕೆಯಿಂದ ತಿಳಿದುಬಂದಿರುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಮತ್ತು ನನ್ನ ಬಯಕೆಯಾಗಿರುತ್ತದೆ. ಹಾಗಾಗಿ ಒಂದೊಂದು ಶಾಸಕ ಸ್ಥಾನವು ಕೂಡ ಅತ್ಯಮೂಲ್ಯ.

ಇಂತಹ ಪರಿಸ್ಥಿತಿಯಲ್ಲಿ ಸನ್ಮಾನ್ಯ ಹೆಚ್. ಎಂ. ರೇವಣ್ಣ ಹಾಲಿ ಜೆಡಿಎಸ್ ಶಾಸಕರಾದ ಮಂಜುನಾಥ್‌ ಅವರನ್ನು ಮಾಧ್ಯಮಗಳ ಮುಂದೆ ಹಾಗೂ ಸಾರ್ವಜನಿಕವಾಗಿ ಹೊಗಳುವುದು ಮತ್ತು ಅವರ ಹಿತೈಷಿಗಳೊಂದಿಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಹಾಲಿ ಶಾಸಕರನ್ನು ಪ್ರಶಂಸಿಸುವುದು ಪಕ್ಷದ ಸಂಘಟನೆ ದೃಷ್ಟಿಯಿಂದ ಎಷ್ಟು ಸಮಂಜಸ. ಮಾಗಡಿ ಜನತೆ ರೇವಣ್ಣ ಬಳಿ ಹೋದಾಗ ಪರೋಕ್ಷವಾಗಿ ಕ್ಷೇತ್ರದ ಜನರ ಮುಂದೆ ಹಾಲಿ ಶಾಸಕರನ್ನು ಹೊಗಳುವ ರೀತಿ ಮತ್ತು ವಿಶ್ಲೇಷಣೆ ಮಾಡುವುದನ್ನು ನೋಡಿದರೆ ಅವರಿಗೆ ಇನ್ನೂ ನನ್ನ ಮೇಲಿರುವ ರಾಜಕೀಯ ದ್ವೇಷ ಕಡಿಮೆಯಾಗಿಲ್ಲ ಎಂಬುದು ಸ್ಪಷ್ಟವಾಗಿರುತ್ತದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಹೆಚ್. ಎಂ. ರೇವಣ್ಣ ತಮ್ಮ ಕೆಲವು ಹಿಂಬಾಲಕರಿಗೆ ಎ. ಮಂಜನಾಥ್‌ಗೆ ಸಹಾಯ ಮಾಡಿ ಎಂದು ಸೂಚಿಸಿರುವುದು ಜಗಜ್ಜಾಹೀರಾಗಿರುತ್ತದೆ. ಈ ವಿಷಯವನ್ನು ನಾನು ಯಾವುದೇ ಮುಖಂಡರ ಬಳಿಯಾಗಲಿ, ಯಾವುದೇ ವೇದಿಕೆಯಲ್ಲಾಗಲಿ ಚರ್ಚಿಸಿರುವುದಿಲ್ಲವೆಂಬುದನ್ನು ತಮ್ಮ ಗಮನಕ್ಕೆ ತರ ಬಯಸುತ್ತೇನೆ. ಶಾಸಕರಾದ ಎ. ಮಂಜುನಾಥ್‌ ಕಾಂಗ್ರೆಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ತಮ್ಮ ಪಕ್ಷದ ಕಚೇರಿಯಲ್ಲಿ ಹಾಕಿದ್ದ ಮುಖಂಡರ ಫೋಟೋಗಳಲ್ಲಿ ಹೆಚ್. ಎಂ. ರೇವಣ್ಣ ಫೋಟೋವನ್ನು ಹೊರತುಪಡಿಸಿ ಉಳಿದ ಕಾಂಗ್ರೆಸ್ ಪಕ್ಷದ ಮುಖಂಡರ ಫೋಟೋಗಳನ್ನು ತೆಗೆದು ಹಾಕಿರುತ್ತಾರೆ. ಇಂದಿಗೂ ರೇವಣ್ಣ ಫೋಟೋವನ್ನು ಅವರ ಕಚೇರಿಯಲ್ಲಿ ಇಟ್ಟುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

ರಾಜಕೀಯ ಗುರು ಹೆಚ್. ಎಂ. ರೇವಣ್ಣ; ಹಾಗೆಯೇ ಜೆಡಿಎಸ್ ಶಾಸಕ ಮಂಜುನಾಥ್‌ರ ಕೂಡ ನನ್ನ ರಾಜಕೀಯ ಗುರುಗಳಾದ ಹೆಚ್. ಎಂ. ರೇವಣ್ಣಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕರೆ ನಾನೂ ಕೂಡ ಸಹಾಯ ಮಾಡುತ್ತೇನೆಂದು ಅವರ ಹಿಂಬಾಲಕರೊಂದಿಗೆ ಚರ್ಚೆ ಮಾಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಪರಸ್ಪರ ಇವರ ಸ್ನೇಹ ಹೊಗಳುವಿಕೆಯಿಂದ ನನ್ನ ಅಭಿಮಾನಿಗಳು ಮತ್ತು ಕಾಂಗ್ರೆಸ್‌ನಲ್ಲಿ ಗೊಂದಲವುಂಟಾಗಿರುತ್ತದೆ.

ಈ ವಿಚಾರವಾಗಿ ನನ್ನ ಬೆಂಬಲಿಗರು ನನ್ನೊಂದಿಗೆ ಚರ್ಚಿಸಿ ಮುಂಬರುವ ಚುನಾವಣೆಯಲ್ಲಿ ರೇವಣ್ಣರವರಿಗೆ ನೀವು ಸಹಾಯ ಮಾಡುವುದು ಸೂಕ್ತ ಸಲಹೆ ನೀಡಿದ್ದಾರೆ. ಆದ್ದರಿಂದ ಪಕ್ಷದ ವರಿಷ್ಠರು ಮುಂಬರುವ ಚುನಾವಣೆಯಲ್ಲಿ ಹೆಚ್. ಎಂ. ರೇವಣ್ಣಗೆ ಮಾಗಡಿ ಕ್ಷೇತ್ರದಿಂದ ಟಿಕೆಟ್ ಕೊಟ್ಟು ಅವರಲ್ಲಿರುವ ಆತಂಕವನ್ನು ದೂರ ಮಾಡಬೇಕೆಂದು ಕೋರುತ್ತೇನೆ.

ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗಿನಿಂದ ಪ್ರತಿ ಸಂದರ್ಭದಲ್ಲಿಯೂ ಕೂಡ ಕಾಯ, ವಾಚ, ಮನಸಾ ಪಕ್ಷಕ್ಕೆ ಸೇವೆ ಸಲ್ಲಿಸಿರುತ್ತೇನೆ. ಆದ್ದರಿಂದ ಹೆಚ್.ಎಂ. ರೇವಣ್ಣಗೆ ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಲ್ಲಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೆಚ್. ಸಿ. ಬಾಲಕೃಷ್ಣ ಪತ್ರದಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+