40% ಕಮಿಷನ್ ಲೂಟಿಯೇ ಬಿಜೆಪಿ ವಿಜಯ ಯಾತ್ರೆಯ ಸಂಕಲ್ಪವಾಗಿದೆ: ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ
ಬಿಜೆಪಿ ನಾಯಕರು 40% ನಿಂದ 100%ಗೆ ಕಮಿಷನ್ ಹೆಚ್ಚಿಸಿಕೊಳ್ಳುವ ಸಂಕಲ್ಪದ ಯಾತ್ರೆ ಮಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ರಾಮನಗರ, ಮಾರ್ಚ್, 06: ಸರ್ಕಾರ 40% ಕಮಿಷನ್ ಲೂಟಿ ಮಾಡಿದೆ. ಮುಂದೆ ಅಧಿಕಾರ ನೀಡಿದರೆ ಮತ್ತಷ್ಟು ಲೂಟಿ ಮಾಡುತ್ತೇವೆ ಎನ್ನುವ ಸಂಕಲ್ಪವೇ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ರಾಮನಗರ ನಿಯೋಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ನೂತನ ಕಚೇರಿ ವೀಕ್ಷಿಸಿದ ನಂತರ, ಪಕ್ಷದ ಸಾಧನೆ ಹಾಗೂ ಪಂಚರತ್ನ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬಿಜೆಪಿ ನಾಯಕರು 40% ನಿಂದ 100% ಗೆ ಕಮಿಷನ್ ಹೆಚ್ಚಿಸಿಕೊಳ್ಳುವ ಸಂಕಲ್ಪದ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ಲೂಟಿಕೋರ ಸರ್ಕಾರವೆಂದು ಮಾಡಾಳು ವಿರೂಪಾಕ್ಷಪ್ಪರ ಪ್ರಕರಣದಿಂದ ಸಾಭೀತಾಗಿದೆ. ಒಬ್ಬ ಶಾಸಕರಿಗೆ ಕೋಟಿ ಕೋಟಿ ಹಣ ಎಲ್ಲಿಂದ ಬಂತ್ತು ಎಂಬುದನ್ನು ಅಧಿಕಾರಿಗಳಿಗೆ ಉತ್ತರ ನೀಡಬೇಕಲ್ಲ. ಅಲ್ಲದೇ ಈ ಬಗ್ಗೆ ಬಿಜೆಪಿ ನಾಯಕರು ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ಅಶ್ವತ್ಥ್ ನಾರಾಯಣ್ಗೆ ಟಾಂಗ್ ಕೊಟ್ಟ ನಿಖಿಲ್
ಸತ್ತೇಗಾಲ ನೀರಾವರಿ ಯೋಜನೆ ಹಾಗೂ ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಾಣದ ಬಗ್ಗೆ ಯಾರು ಏನಾದರೂ ಹೇಳಿಕೊಂಡು ಕ್ರೆಡಿಟ್ ಪಡೆಯಲು ಮುಂದಾದರೂ ಕೂಡ ಸಾರ್ವಜನಿಕರಿಗೆ ಅನುಕೂಲ ಆಗವುದಷ್ಡೇ ನಮಗೆ ಮುಖ್ಯವಾಗಿದೆ. ಇಲ್ಲಿ ನಾವು ಮಾಡಿದ್ದೀವಿ, ಅವರು ಮಾಡಿದ್ದು ಎಂದು ಇಲ್ಲ. ಅಂತಿಮವಾಗಿ ಅದು ಜನತೆಗೆ ಉಪಯೋಗವಾದರೆ ಸಾಕು. ಎಲ್ಲವನ್ನು ನಾವೇ ಮಾಡಿದ್ದು ಎಂದು ಕರ್ಚಿಫ್ ಹಾಕುವುದಿಲ್ಲ ಎಂದು ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ಪ್ರಚಾರ ವಾಹನಕ್ಕೆ ಚಾಲನೆ
ತಾಲೂಕಿನಾದ್ಯಂತ ಪ್ರಚಾರ ವಾಹನ ಸಂಚರಿಸಲಿದೆ. ಪಂಚರತ್ನ ಹಾಗೂ ರಾಮನಗರ ಕ್ಷೇತ್ರದ ಅಭಿವೃದ್ಧಿ ಕುರಿತು ನನ್ನದೇ ಆದ ಚಿಂತನೆಗಳ ಬಗ್ಗೆಯೂ ಈ ಪ್ರಚಾರ ವಾಹನ ಜನರಲ್ಲಿ ಅರಿವು ಮೂಡಿಸಲಿದೆ. ಅಲ್ಲದೇ ರಾಮನಗರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು, ಮತ್ತಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಲ್ಲಿ ಸವಾಲು ಸ್ವೀಕರಿಸಿ ಸಂಕಲ್ಪ ತೊಟ್ಟಿದ್ದೇನೆ ಎಂದರು.
ರಾಜ್ಯದ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನಪರ ಕಾಳಜಿ ಇಲ್ಲ. ಅವರ ವರ್ತನೆಗಳಿಂದ ಜನ ಬೇಸತ್ತಿದ್ದಾರೆ. ಜನಪರ ಆಡಳಿತ ನೀಡಿದ್ದು ಕುಮಾರಣ್ಣನವರ ಸರ್ಕಾರವೆಂದು ಜನಸಾಮಾನ್ಯರು ಚರ್ಚೆ ಮಾಡುತ್ತಿದ್ದಾರೆ. ಈ ಬಾರಿ ಜೆಡಿಎಸ್ ಪಕ್ಷವನ್ನು ರಾಜ್ಯದ ಜನತೆ ಬೆಂಬಲಿಸುವ ವಿಶ್ವಾಸವಿದೆ ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications