Get Updates
Get notified of breaking news, exclusive insights, and must-see stories!

ರಾಮನಗರದಲ್ಲಿ ಜೆಡಿಎಸ್ ವಿರುದ್ಧ ‘ಇದೇನ್ ಕರ್ಮ’ ಅಭಿಯಾನ..!

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಮನಗರದಲ್ಲಿ ಜೆಡಿಎಸ್ ಚುನಾವಣಾ ಸಿದ್ಧತೆ ಆರಂಭಿಸಿದ್ದರೆ, ಕಾಂಗ್ರೆಸ್ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ವಿರುದ್ಧ "ಇದೇನ್ ಕರ್ಮ" ಎಂಬ ಅಭಿಯಾನ ಶುರುಮಾಡಿದೆ.

ರಾಮನಗರ, ಫೆಬ್ರವರಿ 13: ರಾಮನನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಮತ್ತು ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಹೀಗೆ ತಂದೆ ಮಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಬೀರಿ ಜೆಡಿಎಸ್ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ತೀರ್ಮಾನ ಮಾಡಿದ್ದು, ಅದಕ್ಕೆ ಬೇಕಾದ ರಾಜಕೀಯ ತಂತ್ರಗಳನ್ನು ಶುರುಮಾಡಿದ್ದಾರೆ. ಆದರೆ ಎದುರಾಳಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಸಮರ ಸಾರಿದ್ದು, "ಇದೇನ್ ಕರ್ಮ" ಎಂಬ ಅಭಿಯಾನ ಆರಂಭಿಸಿದೆ.

ಎಚ್.ಡಿ.ಕುಮಾರಸ್ವಾಮಿ ಮತ್ತು ಕುಟುಂಬಕ್ಕೆ ರಾಮನಗರ ಜಿಲ್ಲೆ ರಾಜಕೀಯವಾಗಿ ಕೈಹಿಡಿದ ಜಿಲ್ಲೆ. ಇಲ್ಲಿಂದಲೇ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ರಾಜಕೀಯ ಅಸ್ತಿತ್ವಕಂಡು ಕೊಂಡಿದ್ದು, ಈ ಬಾರಿ ಅನಿತಾ ಕುಮಾರಸ್ವಾಮಿ ಬದಲಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯ ಅಗ್ನಿಪರೀಕ್ಷೆಗೆ ಸಜ್ಜಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರು ರಾಜ್ಯ ರಾಜಕೀಯದಲ್ಲಿ ಭವಿಷ್ಯ ಕಂಡು ಕೊಳ್ಳುವ ಪ್ರಯತ್ನಕ್ಕಿಳಿದಿದ್ದಾರೆ.

ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದರೆ ಜೆಡಿಎಸ್ ಭದ್ರವಾಗಿದೆ. ಹೀಗಾಗಿಯೇ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಪುತ್ರನ ರಾಜಕೀಯ ಭವಿಷ್ಯ ಬರೆಯುವ ನಿರ್ಧಾರ ಮಾಡಿದ್ದಾರೆ. ಆದರೆ ಈ ಬಾರಿ ಜೆಡಿಎಸ್‌ಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಎದುರಾಳಿಗಳಾಗಿರುವುದರಿಂದ ಭಾರೀ ಪೈಪೋಟಿ ನಡೆಯುವುದಂತು ಸಹಜ. ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರಕ್ಕೆ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಹೀಗಾಗಿ ಜೆಡಿಎಸ್ ಇಲ್ಲಿ ಗೆದ್ದೇ ಗೆಲ್ಲುತ್ತದೆ ಎನ್ನುವುದು ಜೆಡಿಎಸ್ ನಾಯಕರ ಅಭಿಪ್ರಾಯವಾಗಿದೆ. ಆದರೆ ಕುಮಾರಸ್ವಾಮಿ ಮತ್ತು ಅನಿತಾಕುಮಾರಸ್ವಾಮಿ ರಾಮನಗರಕ್ಕೆ ಏನು ಮಾಡಿಲ್ಲ ಎನ್ನುವುದು ಕಾಂಗ್ರೆಸ್‌ನ ಆರೋಪವಾಗಿದೆ.

"ಇದೇನ್ ಕರ್ಮ" ಅಭಿಯಾನ ಆರಂಭಿಸಿದ ಕಾಂಗ್ರೆಸ್‌

ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದರೆ ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ವಿರುದ್ಧ "ಇದೇನ್ ಕರ್ಮ" ಎಂಬ ಅಭಿಯಾನ ಶುರುಮಾಡಿದ್ದು, ಆ ಮೂಲಕ ರಾಮನಗರ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಜೆಡಿಎಸ್‌ಅನ್ನು ಕಟ್ಟಿಹಾಕುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇಷ್ಟಕ್ಕೂ ಏನಿದು "ಇದೇನ್ ಕರ್ಮ" ಅಭಿಯಾನ.? ಎಂಬ ಪ್ರಶ್ನೆ ಮೂಡುವುದು ಸಹಜ. ನಗರಸಭೆ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಕೆ.ಶೇಷಾದ್ರಿ (ಶಶಿ) ಸೇರಿದಂತೆ ಒಂದಷ್ಟು ಕಾಂಗ್ರೆಸ್ ಮುಖಂಡರು ಸೇರಿಕೊಂಡು ಈ ಅಭಿಯಾನ ಆರಂಭಿಸಿದ್ದಾರೆ. ಆ ಮೂಲಕ ಜೆಡಿಎಸ್ ವೈಫಲ್ಯವನ್ನು ಜನರ ಮುಂದಿಟ್ಟು ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿ ಪರ ಪ್ರಚಾರ ನಡೆಸುವುದು ಉದ್ದೇಶವಾಗಿದೆ.

‘ಇದೇನ್ ಕರ್ಮ ‘ ಅಭಿಯಾನ ಆರಂಭಿಸಿದ್ದೇಕೆ ಎಂಬುದರ ಬಗ್ಗೆ ಮಾಹಿತಿ ನೀಡಿರುವ ನಗರಸಭೆ ಸದಸ್ಯ ಕೆ.ಶೇಷಾದ್ರಿ(ಶಶಿ) ಅವರು, ಇಡೀ ರಾಮನಗರವೇ ಸಮಸ್ಯೆಗಳ ಆಗರವಾಗಿದ್ದು, ಪರಿಹಾರಕ್ಕೆ ಕ್ಷೇತ್ರದ ಶಾಸಕರು ಸ್ಪಂದಿಸುತ್ತಿಲ್ಲ. ಮೂರು ದಶಕಗಳಿಂದ ಅಧಿಕಾರದಲ್ಲಿರುವ ಎಚ್.ಡಿ.ದೇವೇಗೌಡರ ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿಲ್ಲ. ಕ್ಷೇತ್ರದ ಜನರು ಅನುಭವಿಸುತ್ತಿರುವ ನೋವು, ಸಂಕಷ್ಟದ ಭಾಗವಾಗಿ ಅಭಿಯಾನ ಆರಂಭಿಸಿರುವುದಾಗಿ ಹೇಳಿದ್ದಾರೆ.

ವಿಶೇಷ ಅನುದಾನ ತಂದು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿಲ್ಲ

ವಿಶೇಷ ಅನುದಾನ ತಂದು ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿಲ್ಲ

ಈಗಾಗಲೇ ರಾಮನಗರದ ಟ್ರೂಪ್‌ ಲೇನ್ ಬಡಾವಣೆಯಲ್ಲಿ ಅಭಿಯಾನ ನಡೆಸಿದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು, ಕುಮಾರಸ್ವಾಮಿ ಮತ್ತು ಕುಟುಂಬದ ವಿರುದ್ಧ ಆರೋಪಗಳ ಪಟ್ಟಿಯನ್ನೇ ತೆಗೆದಿಟ್ಟಿದ್ದಾರೆ. ರಾಮನಗರ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಎಚ್.ಡಿ.ದೇವೇಗೌಡರು ನಂತರ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ, ಸೊಸೆ ಅನಿತಾ ಕುಮಾರಸ್ವಾಮಿ ಈ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಆದರೆ ರಾಮನಗರದ ಅಭಿವೃದ್ಧಿಗೆ ಅವರು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ.

ರಾಮನಗರದ ರೈಲ್ವೆ ನಿಲ್ದಾಣದ ಕೆಳಗೆ ಬರುವ ಟಿಪ್ಪುನಗರ, ಗೌಸಿಯಾನಗರ, ರಹಮಾನಿಯನಗರ, ಕೊತ್ತಿಪುರ, ಅರ್ಕೇಶ್ವರ ಕಾಲೋನಿ, ಯಾರಬ್ ನಗರ, ಟ್ರೂಪ್ ಲೇನ್, ಜಿಯಾವುಲ್ಲಾ ಬ್ಲಾಕ್, ಮೆಹಬೂಬ ನಗರ, ಫೂಲ್ ಬಾಗ್, ಈ ಭಾಗದಲ್ಲಿ ಎಸ್ಸಿ, ಎಸ್ಟಿ ಸಮುದಾಯ, ಅಲ್ಪಸಂಖ್ಯಾತರು ಹೆಚ್ಚಿನದಾಗಿ ವಾಸಿಸುತ್ತಿದ್ದಾರೆ. ಸುಮಾರು 90 ರಿಂದ 1 ಲಕ್ಷದವರೆಗೆ ಜನಸಂಖ್ಯೆಯುಳ್ಳ ಅತೀ ಹಿಂದುಳಿದ ಪ್ರದೇಶಗಳಾಗಿವೆ. ಇಂತಹ ಪ್ರದೇಶಗಳಲ್ಲಿ ಯುಜಿಡಿ, ರಸ್ತೆ, ಚರಂಡಿ, ಉದ್ಯಾನವನ, ಆಟದ ಮೈದಾನ ಸೇರಿದಂತೆ ಯಾವುದೇ ಸರಿಯಾದ ಸೌಲಭ್ಯ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ವಿಶೇಷ ಅನುದಾನ ತಂದು ಈ ಭಾಗದ ಅಭಿವೃದ್ದಿ ಮಾಡುವ ಕಾಳಜಿಯನ್ನು ತೋರಿಲ್ಲ.

ಜೆಡಿಎಸ್‌ ಹೆಸರಿಗಷ್ಟೇ ಕರ್ಮಭೂಮಿಯಾದ ರಾಮನಗರ

ಜೆಡಿಎಸ್‌ ಹೆಸರಿಗಷ್ಟೇ ಕರ್ಮಭೂಮಿಯಾದ ರಾಮನಗರ

ಟ್ರೂಪ್‌ ಲೇನ್ ಭಾಗದಲ್ಲಿ ವಾಸಿಸುತ್ತಿರುವ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ ಬಡವರು. ಒಂದು ಚಿಕ್ಕ ಮನೆಯಲ್ಲಿ 10-12 ಮಂದಿ ವಾಸಿಸುತ್ತಿದ್ದಾರೆ. ಇವರಿಗೆ ಮನೆ ಕಟ್ಟಿಸಿಕೊಡುವ ಔದಾರ್ಯವನ್ನು ಶಾಸಕರು ಮಾಡಿಲ್ಲ. ಈ ಭಾಗಕ್ಕೆ ಸಂಪರ್ಕ ಕಲ್ಪಿಸಲು ರೈಲ್ವೆ ಅಂಡರ್ ಪಾಸ್ ಅಗತ್ಯವಿದೆ. ಕೆಲವು ತಿಂಗಳುಗಳ ಹಿಂದೆ ಈ ಭಾಗದಲ್ಲಿ ನೀರಿನ ಪ್ರವಾಹ ಬಂದು ರೈಲ್ವೆ ಅಂಡರ್ ಪಾಸ್ ಮುಚ್ಚಿ ಹೋಗಿ ಈ ಭಾಗಕ್ಕೆ ಸಂಪರ್ಕವೇ ಕಡಿದು ಹೋಗಿತ್ತು. ಎಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿದ್ದ ವೇಳೆ ರೈಲು ನಿಲ್ದಾಣದ ಬಳಿ ಫ್ಲೈ ಓವರ್ ನಿರ್ಮಾಣಕ್ಕೆ ಒತ್ತಾಯಿಸಲಾಗಿತ್ತು. ಆದರೆ ಪ್ರಯೋಜನವಾಗಿಲ್ಲ.

ಹಾಸನದ ಅಭಿವೃದ್ಧಿಯ ವಿಚಾರವಾಗಿ ಪದೇ ಪದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವ ದೇವೇಗೌಡರು, ರಾಮನಗರ ನಮ್ಮ ಕುಟುಂಬಕ್ಕೆ ಕರ್ಮಭೂಮಿ ಎಂದು ಡಂಗೂರ ಸಾರುವ ಕುಮಾರಸ್ವಾಮಿರವರು ಕೇಂದ್ರ ರೈಲ್ವೆ ಸಚಿವರನ್ನು ಮನವೊಲಿಸಿ ಈ ಕೆಲಸ ಮಾಡಿಸಬಹುದಿತ್ತು. ಆದರೆ ಮಾಡಿಲ್ಲ. ಜೊತೆಗೆ 2005ರಲ್ಲಿ ಒಮ್ಮೆ ಸೀರಹಳ್ಳದಲ್ಲಿ ಬಂದ ಪ್ರವಾಹ ಪರಿಸ್ಥಿತಿಯಿಂದ ಈ ಭಾಗಕ್ಕೆ ಸಮಸ್ಯೆ ಆಗಿತ್ತು. 2022ರಲ್ಲಿ ಈ ಪರಿಸ್ಥಿತಿ ಮರುಕಳಿಸಿದೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಸಮಸ್ಯೆ ನೀಗಿಸಲು 17 ವರ್ಷ ಬೇಕಾ..? ಹೀಗೆ ಅಭಿಯಾನದ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಎದುರು ಹಲವು ಸಮಸ್ಯೆಗಳನ್ನು ಇಟ್ಟಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಅವರು ಉತ್ತರಗಳನ್ನು ನೀಡುತ್ತಾರಾ..? ಕಾದುನೋಡಬೇಕಿದೆ.

ಜೆಡಿಎಸ್‌ ವಿರುದ್ಧ ಇದೇನ್‌ ಕರ್ಮ ಅಭಿಯಾನ

ಜೆಡಿಎಸ್‌ ವಿರುದ್ಧ ಇದೇನ್‌ ಕರ್ಮ ಅಭಿಯಾನ

ಒಟ್ಟಾರೆ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ತಯಾರಿ ನಡೆಸಿದೆ. ಈ ಬಾರಿ ರಾಮನಗರದಿಂದ ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತ ಅಭ್ಯರ್ಥಿ ಇಕ್ಬಾಲ್ ಹುಸೇನ್ ಕಣಕ್ಕಿಳಿಯುತ್ತಾರೆ ಎನ್ನಲಾಗುತ್ತಿದೆ. ಅವರ ಪರವಾಗಿಯೇ ಇದೇನ್ ಕರ್ಮ ಅಭಿಯಾನ ನಡೆಯುತ್ತಿದೆ. ಈಗಾಗಲೇ ಇಕ್ಬಾಲ್ ಹುಸೇನ್ ಅವರು ಒಂದಷ್ಟು ಮಂದಿಯನ್ನು ತೀರ್ಥಯಾತ್ರೆಗೂ ಕಳುಹಿಸಿಕೊಡುವ ಮೂಲಕ ಮತದಾರರ ಸೆಳೆಯುವ ಯತ್ನ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಅಧಿಕೃತ ಘೋಷಣೆ ಬಳಿಕ ಕ್ಷೇತ್ರದಲ್ಲಿ ಇನ್ನಷ್ಟು ರಾಜಕೀಯ ಜಟಾಪಟಿ ಶುರುವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+