ನೂರಕ್ಕೆ ನೂರು ಬಿಎಸ್ವೈ ಸಿಎಂ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ
ರಾಮನಗರ, ಜೂನ್ 15: "ಇನ್ನೆರಡು ದಿನಗಳಲ್ಲಿ ಎಲ್ಲಾ ಗೊಂದಲಗಳು ಬಗೆಹರಿಯಲಿದ್ದು, ನೂರಕ್ಕೆ ನೂರು ಸಿಎಂ ಸ್ಥಾನದಲ್ಲಿ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ," ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಮಂಗಳವಾರ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೋಟೆ ಬಯಲಿನಲ್ಲಿ ಬಿಜೆಪಿ ಮುಖಂಡ ರಂಗಧಾಮಯ್ಯ ನೇತೃತ್ವದಲ್ಲಿ ನಡೆದ ದಿನಸಿ ಕಿಟ್ ವಿತರಣೆ ಸಮಾರಂಭ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, "ಮೂರು ದಿನಗಳ ಕಾಲ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದಲ್ಲಿದ್ದು ಮಾತುಕತೆ ನಡೆಸುತ್ತಾರೆ, ಎಲ್ಲವೂ ಸುಖಾಂತ್ಯವಾಗಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಬುಧವಾರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದು, ನಾಳೆಯಿಂದ 3 ದಿನಗಳ ಕಾಲ ರಾಜ್ಯದಲ್ಲೇ ಇದ್ದು ಎಲ್ಲ ಶಾಸಕರೊಂದಿಗೆ ಮಾತುಕತೆ ನಡೆಸುತ್ತಾರೆ. ಯಾರದೇ ಅಹವಾಲುಗಳಿದ್ದರೆ ಅರಣ್ ಸಿಂಗ್ ಅವರ ಬಳಿ ಹೇಳಿಕೊಳ್ಳುತ್ತಾರೆ. 100ಕ್ಕೆ 100 ರಷ್ಟು ಎಲ್ಲವೂ ಪರಿಹಾರ ಕಾಣುತ್ತದೆ. ಸಿಎಂ ಬದಲಾವಣೆ ವಿಚಾರವಾಗಿಯೂ ನಾಳೆ ಫೈನಲ್ ಆಗಲಿದೆ," ಎಂದು ಸಚಿವ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯೆ ನೀಡಿದರು.

ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಎಂ. ರುದ್ರೇಶ್
"ಸಿಎಂ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯಕರು. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಪರಿಶ್ರಮ ಇದೆ," ಎಂದು ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ. ರುದ್ರೇಶ್ ತಿಳಿಸಿದರು.

ಮಾಗಡಿಯಲ್ಲಿ ದಿನಸಿ ಕಿಟ್ ವಿತರಣಾ ಸಮಾರಂಭದ ನಂತರ ಮಾತನಾಡಿದ ಸಿಎಂ ಆಪ್ತ ಹಾಗೂ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ. ರುದ್ರೇಶ್, "ಸಿಎಂ ಬದಲಾವಣೆ ಮಾಡುವ ಸಂದರ್ಭ ಬರಲ್ಲ, ಯಡಿಯೂರಪ್ಪ ಅವರು ಅಂತಹ ತಪ್ಪುಗಳನ್ನು ಮಾಡಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ಸಿಎಂ ಬದಲಾವಣೆ ಮಾಡುತ್ತೇವೆ ಅಂತಾನೂ ಹೇಳಿಲ್ಲ. ಹಾಗಾಗಿ ಸಿಎಂ ಬದಲಾವಣೆ ವಿಷಯ ಅಪ್ರಸ್ತುತ," ಎಂದರು.












Click it and Unblock the Notifications