ನಂಬಿದ ಜನರಿಗೆ ಮೂರು ನಾಮ; ಸರ್ಕಾರದ ಬಗ್ಗೆ ಡಿ.ಕೆ.ಸುರೇಶ್ ಟೀಕೆ
ರಾಮನಗರ, ಆಗಸ್ಟ್ 20: ಕೊರೊನಾ ಸೋಂಕು ಮತ್ತು ಪ್ರವಾಹದ ಸಂಕಷ್ಟದಲ್ಲಿ ಜನರ ನೆರವಿಗೆ ಧಾವಿಸದ ಸರ್ಕಾರ, ನಂಬಿದ ಜನರಿಗೆ ಮೂರು ನಾಮ ಹಾಕುತ್ತದೆ ಅಷ್ಟೇ ಎಂದು ಸರ್ಕಾರದ ಕಾರ್ಯ ವೈಖರಿಯನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಟೀಕಿಸಿದ್ದಾರೆ.
ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿದ್ದ ಜನಧ್ವನಿ ಹೋರಾಟದ ಭಾಗವಾಗಿ ನಗರದ ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಡಿ.ಕೆ.ಸುರೇಶ್, ರಾಜ್ಯ ಸರ್ಕಾರದ ಸಚಿವರು ಏನಿದ್ದರೂ ಹಣ ಎಲ್ಲಿ ಸಿಗುತ್ತೆ ಅಂತ ನೋಡಿಕೊಂಡು ಕಾಲ ಕಳೆಯುವುದರಲ್ಲೇ ಮುಳುಗಿದ್ದಾರೆ. ಎಲ್ಲೆಲ್ಲಿ ರಾಜಕಾರಣ ಮಾಡಬಹುದು, ಜನರ ದಾರಿ ತಪ್ಪಿಸುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

"ಸರ್ಕಾರದಿಂದ ಜನರಿಗೆ ಮೂರು ನಾಮ"
ಸರ್ಕಾರದಲ್ಲಿ ಜನ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಸಚಿವರ ಸಂಖ್ಯೆ ಕಡಿಮೆ ಇದೆ. ರಾಜ್ಯದ ಜನ ಈ ಸರ್ಕಾರದಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪ್ರವಾಹದಿಂದ ಕೊಚ್ಚಿ ಹೋದವರಿಗೆ ಹಾಗೂ ಕೊರೊನಾದಿಂದ ಸತ್ತವರಿಗೆ, ಅದರಿಂದ ನರಳುತ್ತಿರುವ ರೋಗಿಗಳಿಗೆ ರಾಜ್ಯ ಸರಕಾರದಿಂದ ಮೂರು ನಾಮ ಅಷ್ಟೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

"ಕೇಂದ್ರದ ವಿರುದ್ಧ ಸಮರಕ್ಕೆ ಸಿದ್ಧ"
ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಲು ಈಗಾಗಲೇ ವಿರೋಧ ಪಕ್ಷಗಳು ಸಜ್ಜಾಗಿವೆ. ಲೋಕಸಭಾ ಅಧಿವೇಶನ ಕರೆಯಿರಿ ಅಂತಾ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದ್ದೇವೆ. ಸದನದಲ್ಲಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಲಾಗುವುದು. ಈಗಾಗಲೇ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ಆದರೆ ದೇಶದಲ್ಲಿ ನಮ್ಮ ಕೂಗನ್ನು ಕೇಳಿಸಿಕೊಳ್ಳುವವರು ಕಡಿಮೆಯಾಗಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.

ಕೇಂದ್ರ ಸರ್ಕಾರದ ಮೇಲೆ ಟೀಕಾಪ್ರಹಾರ
ದೇಶದಲ್ಲಿ ಜನರು ಭ್ರಮೆಯಲ್ಲಿದ್ದಾರೆ, ಜನತೆಯ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಜನರನ್ನು ತಮ್ಮತ್ತ ಸೆಳೆದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಬಿಜೆಪಿಯವರಿಗೆ ಇನ್ನು 5-10 ವರ್ಷ ಅಧಿಕಾರ ಕೊಟ್ಟರೆ ಎಲ್ಲವನ್ನೂ ಖಾಸಗೀಕರಣ ಮಾಡುತ್ತಾರೆ. ಹಾಗೆಯೇ ಬಿಟ್ಟರೆ ಡಿಸಿ ಕಚೇರಿಯನ್ನು ಖಾಸಗೀಕರಣ ಮಾಡಿ ಮಾರಿ ಬಿಡುತ್ತಾರೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ತನಿಖೆಗೆ ಸಂಸದರ ಒತ್ತಾಯ
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಾಟೆ ವಿಚಾರದಲ್ಲಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ನೈತಿಕತೆ ಇದ್ದರೆ ಗೃಹ ಸಚಿವರು ರಾಜೀನಾಮೆ ನೀಡಬೇಕಿತ್ತು. ಅವರ ವೈಫಲ್ಯ ಮುಚ್ಚಿಕೊಳ್ಳಲು ಎಸ್.ಡಿ.ಪಿ.ಐ , ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯವರೇ ಪೊಲೀಸರಾಗಿದ್ದಾರೆ, ಅವರೇ ಎಲ್ಲಾ ತನಿಖೆ ಮಾಡಿ ರಿಪೋರ್ಟ್ ಕೊಡುತ್ತಿದ್ದಾರೆ. ಅವರು ಹೇಳಿದಂತೆ ಎಲ್ಲವೂ ನಡೆಯುತ್ತಿದೆ. ಅದಕ್ಕೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿ ಅಂತಾ ನಾವು ಒತ್ತಾಯ ಮಾಡುತ್ತಿದ್ದೇವೆ ಎಂದು ಸಂಸದ ಡಿ.ಕೆ.ಸುರೇಶ್ ತಮ್ಮ ನಿಲವು ಸ್ಪಷ್ಟಪಡಿಸಿದರು.












Click it and Unblock the Notifications