ಬಿಡದಿ ಟೊಯೋಟಾ ಘಟಕ ಬಂದ್; ಕಾರ್ಮಿಕರ ನೆರವಿಗೆ ಬಂದ ಸಿಎಂ
ಬೆಂಗಳೂರು, ನವೆಂಬರ್ 17: ಟೊಯೋಟಾ ಕಿರ್ಲೋಸ್ಕರ್ ಕಂಪನಿ ರಾಮನಗರದ ಬಿಡದಿಯಲ್ಲಿರುವ ತನ್ನ ಘಟಕವನ್ನು ಮುಚ್ಚುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಂಗಳವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ. 'ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯಲ್ಲಿ ಉಂಟಾಗಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ' ಎಂದು ಹೇಳಿದ್ದಾರೆ.

'ಸಂಸ್ಥೆಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಜೊತೆ ಚರ್ಚಿಸಿ, ಆದಷ್ಟು ಶ್ರೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ' ಎಂದು ಮುಖ್ಯಮಂತ್ರಿಗಳು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಟೊಯೋಟಾ ಕಿರ್ಲೋಸ್ಕರ್ ಬಿಡದಿ ಘಟಕದಲ್ಲಿ 6,500ಕ್ಕೂ ಅಧಿಕ ಉದ್ಯೋಗಿಗಳು ಇದ್ದಾರೆ. ಘಟಕವನ್ನು ಮುಚ್ಚಿದರೆ ಕಾರ್ಮಿಕರು ಅತಂತ್ರವಾಗಲಿದ್ದಾರೆ. ಆದ್ದರಿಂದ, ಸರ್ಕಾರ ಕಾರ್ಮಿಕರು, ಆಡಳಿತ ಮಂಡಳಿ ನಡುವಿನ ಬಿಕ್ಕಟ್ಟು ಪರಿಹಾರ ಮಾಡಲಿದೆ.
432 ಎಕರೆ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಘಟಕ ವಾರ್ಷಿಕ 3.1 ಲಕ್ಷ ವಾಹನಗಳನ್ನು ತಯಾರು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜಪಾನ್ ಮೂಲದ ಟೊಯೋಟಾ ಘಟಕದಲ್ಲಿ ಇನ್ನೋವಾ, ಫಾರ್ಚುನರ್, ಕ್ಯಾಂಬ್ರಿ ಸೇರಿದಂತೆ ವಿವಿಧ ಮಾದರಿಯ ಕಾರುಗಳು ಉತ್ಪಾದನೆಯಾಗುತ್ತವೆ.
'ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯಲ್ಲಿ ಉಂಟಾಗಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಸಂಸ್ಥೆಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಜೊತೆ ಚರ್ಚಿಸಿ, ಆದಷ್ಟು ಶ್ರೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ' : ಮುಖ್ಯಮಂತ್ರಿ @BSYBJP.
— CM of Karnataka (@CMofKarnataka) November 17, 2020
ಕೆಲವು ಕಾರ್ಮಿಕರು ಕಂಪನಿಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಅಮಾನತು ಮಾಡಲಾಗಿತ್ತು. ಬಳಿಕ ಉಳಿದ ಕಾರ್ಮಿಕರು ಧರಣಿ ಆರಂಭಿಸಿದ್ದರು. ಆಗ ಕಂಪನಿ ಘಟಕವನ್ನು ಬಂದ್ ಮಾಡುವುದಾಗಿ ಹೇಳಿತ್ತು.












Click it and Unblock the Notifications