ಖತರ್ನಾಕ್ ದರೋಡೆಕೋರರನ್ನು ಬಂಧಿಸಿದ ಬಿಡದಿ ಪೊಲೀಸರು
ರಾಮನಗರ, ಡಿಸೆಂಬರ್ 27: ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್ ಗಳಲ್ಲಿ ಸುಲಿಗೆ ಮಾಡುತ್ತಿದ್ದ ಎಂಟು ಮಂದಿ ಖತರ್ನಾಕ್ ದರೋಡೆಕೋರರ ತಂಡವನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೊಪ್ಪ ಹೋಬಳಿ ಮರಸನಹಳ್ಳಿಯ ಯೋಗಾನಂದ, ಬೆಂಗಳೂರಿನ ಬ್ಯಾಟರಾಯನಪುರ ವಾಸಿ ಅಭಿಷೇಕ್, ತಲಘಟ್ಟಪುರದ ಬಾಲಾಜಿ ಲೇಔಟ್ನ ರಮೇಶ ಅಲಿಯಾಸ್ ಗಾರ್ಡನ್ರಮೇಶ್, ಬಾಪೂಜಿನಗರದ ಕೆ.ಚೇತನ, ಬಿ.ಎನ್.ತೇಜಸ್, ಮಾರುತಿನಗರ ವಾಸಿ ಎಂ.ಸುನೀಲ್ಕುಮಾರ್, ಆರುಂಧತಿನಗರದ ವಾಸಿ ಆರ್.ಸಂಜಯ್ಕುಮಾರ್ ಹಾಗೂ ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ದೊಡ್ಡಬಸ್ತಿ ಗ್ರಾಮದ ಉದಯ್ ಎಂಬುವರು ಬಂಧಿತ ಆರೋಪಿಗಳು.
ಇವರು ಕುಖ್ಯಾತ ದರೋಡೆಕೋರರಾಗಿದ್ದು, ಮಧ್ಯರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ನಿರ್ಜನ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್ ಗಳನ್ನು ಗುರುತು ಮಾಡಿಕೊಂಡು ದಾಳಿ ಮಾಡಿ ಹಣ ದೋಚುವುದು ಹಾಗೂ ಕಳ್ಳತನ ಮಾಡಿದ ಸ್ಥಳಗಳಲ್ಲಿ ಪೊಲೀಸರಿಗೆ ಯಾವ ಕುರುಹುಗಳು ಸಿಗದ ರೀತಿಯಲ್ಲಿ ಚಾಲಾಕಿತನ ತೋರುತ್ತಿದ್ದರು.

ಇವರು ಇದುವರೆಗೆ ರಾಮನಗರ ಸೇರಿದಂತೆ ಸುಮಾರು 8 ಜಿಲ್ಲೆಗಳಲ್ಲಿ ತಮ್ಮ ಕೈಚಳಕ ತೋರುತ್ತಿದ್ದರು. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇಷಗಿರಿಹಳ್ಳಿ ಸಮೀಪದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ಕಳೆದ ಡಿಸೆಂಬರ್ ೩ ರಂದು ಬೆಳಗಿನ ಜಾವ 3.30ರ ಸಮಯದಲ್ಲಿ ಮುಖಕ್ಕೆ ಮಂಕಿ ಕ್ಯಾಪ್ಗಳನ್ನು ಧರಿಸಿ ದಾಳಿ ನಡೆಸಿ ಸಿಬ್ಬಂದಿಯಿಂದ 82 ಸಾವಿರ ನಗದು ಮತ್ತು4 ಮೊಬೈಲ್ ಫೋನ್ಗಳನ್ನು ದೋಚಿ ಬಂಕ್ ನಲ್ಲಿದ್ದವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಕ್ ನ ಕ್ಯಾಷಿಯರ್ ನವೀನ್ ಬಿಡದಿ ಪೋಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಡಿವೈಎಸ್ಪಿ ಪುರುಷೋತ್ತಮ್ ಮಾರ್ಗದರ್ಶನದಲ್ಲಿ ವೃತ್ತ ಆರಕ್ಷಕ ನಿರೀಕ್ಷಕ ಜೀವನ್ ಮತ್ತು ಬಿಡದಿ ಸಬ್ಇನ್ಸ್ಪೆಕ್ಟರ್ ಹರೀಶ್ ಮತ್ತು ತಂಡ ಬೆರಳಚ್ಚುಗಳ ಆಧಾರದ ಮೇಲೆ ಡಿಸೆಂಬರ್ 21ರಂದು ತಲಘಟ್ಟಪುರ ಬಾಲಾಜಿ ಲೇಔಟ್ನ ರಮೇಶ ಅಲಿಯಾಸ್ ಗಾರ್ಡನ್ ರಮೇಶ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ನಂತರ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸರ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದಾಗ ಗ್ಯಾಂಗ್ ನ ಇತರೆ ಸಹಚರರಾದ ಕೆ.ಚೇತನ, ಬಿ.ಎನ್.ತೇಜಸ್, ಎಂ.ಸುನೀಲ್ಕುಮಾರ್, ಆರ್.ಸಂಜಯ್ಕುಮಾರ್ ಹಾಗೂ ಉದಯ್ ಎಂಬುವರನ್ನು ಬಂಧಿಸಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ್ದ ಟಯೋಟಾ ಇಟಯಾಸ್ ಕಾರು, ಹುಂಡೈ ಅಸೆಂಟ್ ಕಾರು, ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಪಲ್ಸರ್ ಬೈಕ್ ಹಾಗೂ ಮಾರಕಾಯುಧಗಳಾದ ಲಾಂಗ್ಗಳು, ಮಚ್ಚು, ಡ್ರಾಗರ್, ಪೆಪ್ಪರ್ ಸ್ಪ್ರೇ, ಮಂಕಿ ಕ್ಯಾಂಪ್ಗಳು, ದರೋಡೆ ಮಾಡಿದ್ದ ಮಾನಿಟರ್, ಮೊಬೈಲ್ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.












Click it and Unblock the Notifications