Bengaluru Mysuru Expressway: ಟೋಲ್ ದರ ಮತ್ತೆ ಏರಿಕೆ, ಸಾರ್ವಜನಿಕರ ಆಕ್ರೋಶ
ರಾಮನಗರ, ಏಪ್ರಿಲ್ 1: ಲೋಕಾರ್ಪಣೆಗೊಂಡ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನ ಟೋಲ್ ದರ ಮತ್ತೆ ಏರಿಕೆಗೊಂಡಿದೆ. ಏಪ್ರಿಲ್1ರಿಂದ ಪರಿಷ್ಕೃತ ದರ ಅನ್ವಯವಾಗಲಿದ್ದು ದಶಪಥ ಹೆದ್ದಾರಿ ಸಂಚಾರ ಮತ್ತಷ್ಟು ದುಬಾರಿ ಆಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ಹಾಗೂ ಮೂಲಭೂತ ಸೌಕರ್ಯ ನೀಡದೇ ಟೋಲ್ ವಸೂಲಿ ವಿರುದ್ಧ ಸಾಕಷ್ಟು ಹೋರಾಟ ನಡೆದಿದ್ದವು. ಟೋಲ್ ಸಂಗ್ರಹ ಪ್ರಾರಂಭವಾದ ದಿನದಿಂದಲೂ ದುಬಾರಿ ಶುಲ್ಕ ಎಂದು ಎಕ್ಸ್ಪ್ರೆಸ್ ವೇ ಟೋಲ್ ಬಳಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು.

ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಆದರೆ ಇದೀಗ ಟೋಲ್ ಆರಂಭವಾದ 17 ದಿನಕ್ಕೆ ಮತ್ತೆ ದರ ಏರಿಕೆ ಮಾಡಿರುವುದು ವಾಹನ ಸವಾರರ ಮೇಲೆ ಬರೆ ಎಳೆದಂತಾಗಿದೆ. ಶೇ.22 ರಷ್ಟು ಟೋಲ್ ದರ ಹೆಚ್ಚಳಕ್ಕೆ ಸಾರ್ವಜನಿಕದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೆದ್ದಾರಿ ಪ್ರಾಧಿಕಾರದ ನಿರ್ಧಾರಕ್ಕೆ ಕಿಡಿಕಾರಿದ್ದಾರೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜನಸಾಮಾನ್ಯರ ಬಳಿ ಲೂಟಿ ಮಾಡುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದ ಕೊಡುಗೆ. ದಶಪಥ ಹೆದ್ದಾರಿ ಬಡವರ ಉಪಯೋಗಕ್ಕಲ್ಲ, ಕೇವಲ ಹಣವಂತರು ಮಾತ್ರ ಉಪಯೋಗಿಸುವಂತೆ ಪರಿಸ್ಥಿತಿ ಇದೆ. ಈ ಬಗ್ಗೆ ಹಿಂದೆ ಕೂಡಾ ಪ್ರತಿಭಟನೆ ಮಾಡಿದ್ದೇವು. ಈಗಲೂ ಹೋರಾಟ ಮುಂದುವರೆಯಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇನ್ನು ಕನ್ನಡ ಪರ ಹೋರಾಟಗಾರ ನಿಲೇಶ್ ಗೌಡ ಪ್ರತಿಕ್ರಿಯೆ ನೀಡಿ, 'ಹೆದ್ದಾರಿ ಪ್ರಾಧಿಕಾರ ಎಲ್ಲಾ ನಿಯಮಗಳನ್ನು ಗಾಳಿ ತೂರಿ ಅಪೂರ್ಣಗೊಂಡಿರುವ ಹೆದ್ದಾರಿಗೆ ಬಲವಂತವಾಗಿ ವಾಹನ ಸವಾರರಿಂದ ಹಣ ಸಂಗ್ರಹವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದೇವೆ. ಅದರೆ ಹೆದ್ದಾರಿ ಪ್ರಾಧಿಕಾರ ಪೋಲಿಸ್ ಬಲ ಪ್ರಯೋಗಿಸಿ ಪ್ರತಿಭಟನೆಗಳನ್ನು ಹತ್ತಿಕ್ಕಿ, ಮತ್ತೆ ಹೆದ್ದಾರಿ ಪ್ರಾಧಿಕಾರ ಕೇವಲ 17 ದಿನಕ್ಕೆ ಟೋಲ್ ದರ ಎರಿಕೆ ಮಾಡಿ ಉದ್ಘಟತನ ತೋರಿದೆ' ಎಂದು ಆರೋಪಿಸಿದರು.

ಕನ್ನಡ ಪರ ಹೋರಾಟಗಾರ ನರಸಿಂಹಮೂರ್ತಿ ಮಾತನಾಡಿ, 'ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಟೋಲ್ ಹೆಸರಿನಲ್ಲಿ ಬಡವರನ್ನು ಸುಲಿಗೆ ಮಾಡುತಿವೆ. ಅದರಲ್ಲೂ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ ಮಾಡಿದ ಸಮಯದಲ್ಲಿ ಟೋಲ್ ದರಗಳನ್ನು ಹೆಚ್ಚಿಸಿದಲ್ಲಿ ಯಾರು ಪ್ರತಿಭಟನೆ ನಡೆಸುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರ ಟೋಲ್ ದರ ಹೆಚ್ಚಿಸಿದೆ. ಕನ್ನಡಿಗರ ಸಹನೆಯನ್ನು ಹೆದ್ದಾರಿ ಪ್ರಾಧಿಕಾರ ಪರಿಕ್ಷೀಸಿದರೆ ಮುಂದೆ ಸಾರ್ವಜನಿಕರೆ ಟೋಲ್ಗಳಿಗೆ ನುಗ್ಗಿ ಟೋಲ್ ಕೇಂದ್ರಗಳನ್ನು ಧ್ವಂಸ ಮಾಡುತ್ತಾರೆ' ಎಂದು ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದರು.
ಕೇಂದ್ರ ಹೆದ್ದಾರಿ ಪ್ರಾಧಿಕಾರದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ, ಹಳೆ ದರಕ್ಕಿಂದ ಶೇ.22ರಷ್ಟು ಟೋಲ್ ದರ ಏರಿಕೆಯಾಗಲಿದೆ. ಕಾರು/ವ್ಯಾನ್/ಜೀಪ್ ಗೆ ಏಕಮುಖ ಸಂಚಾರ 165 ರೂ ನಿಗದಿ ಮಾಡಿದ್ದು(30ರೂ ಹೆಚ್ಚಳ) ಮಾಡಲಾಗಿದೆ.
ಅದೇ ರೀತಿ ದ್ವಿಮುಖ ಸಂಚಾರ - 250 ರೂ(45ರೂ ಹೆಚ್ಚಳ), ಲಘು ವಾಹನಗಳು/ಮಿನಿಬಸ್: 270 ರೂ.(50ರೂ ಹೆಚ್ಚಳ) ದ್ವಿಮುಖ ಸಂಚಾರ -405 ರೂ.(75 ರೂ. ಹೆಚ್ಚಳ), ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನ - 565 ರೂ(165 ರೂ ಹೆಚ್ಚಳ), ದ್ವಿಮುಖ ಸಂಚಾರ - 850 ರೂ(160 ರೂ.ಹೆಚ್ಚಳ), ಮೂರು ಆಕ್ಸೆಲ್ ವಾಣಿಜ್ಯ ವಾಹನಗಳು: ಏಕಮುಖ ಸಂಚಾರ 615 ರೂ.(115ರೂ ಹೆಚ್ಚಳ), ದ್ವಿ ಮುಖಸಂಚಾರ - 925 ರೂ.( 225 ರೂ.ಹೆಚ್ಚಳ) ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್/4-6 ಆಕ್ಸೆಲ್ ವಾಹನಗಳು: 885 ರೂ.(165ರೂ ಹೆಚ್ಚಳ) ದ್ವಿಮುಖ ಸಂಚಾರ - 1,330 ರೂ. ಹೆಚ್ಚಳ(250ರೂ ಹೆಚ್ಚಳ). 7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು: 1,080 ರೂ.(200ರೂ ಹೆಚ್ಚಳ) ದ್ವಿಮುಖ ಸಂಚಾರ - 1,620 ರೂ.( 305 ರೂ.ಹೆಚ್ಚಳ) ಮಾಡಲಾಗಿದೆ. ಈ ನೂತನ ದರಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ.












Click it and Unblock the Notifications