ರಾಮನಗರ : ಉರುಳಿನಲ್ಲಿ ಸಿಕ್ಕಿಬಿದ್ದಿದ್ದ ಕರಡಿ ರಕ್ಷಣೆ
ರಾಮನಗರ, ಫೆಬ್ರವರಿ 16 : ಕಾಡು ಹಂದಿಯ ಬೇಟೆಗಾಗಿ ಹಾಕಿದ್ದ ಉರುಳಿಗೆ ಕರಡಿಯೊಂದು ಸಿಕ್ಕಿಬಿದ್ದು ಸಂಕಷ್ಟ ಅನುಭವಿಸಿದ ಘಟನೆ ರಾಮನಗರದಲ್ಲಿ ನಡೆದಿದೆ. ಅರವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನು ರಕ್ಷಣೆ ಮಾಡಲಾಗಿದೆ.
ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರಮೇಶ್ ಎಂಬುವವರ ಗಂಧ ಹಾಗೂ ಮಾವಿನ ಮರದ ತೋಪಿನಲ್ಲಿ ಕಿಡಿಗೇಡಿಗಳು ರಾತ್ರಿ ಹಂದಿ ಬೇಟೆಗಾಗಿ ಬೈಕ್ನ ಕ್ಲಚ್ ವೈರ್ಗಳ ಉರುಳನ್ನು ಹಾಕಿದ್ದರು.

ಮುಂಜಾನೆ ಆಹಾರ ಆರಸಿ ಬಂದ ಸುಮಾರು ಒಂದೂರವರೆ ವರ್ಷದ ಹೆಣ್ಣು ಕರಡಿ ಉರುಳಿನಲ್ಲಿ ಸಿಕ್ಕಿಬಿದ್ದಿದೆ. ತಪ್ಪಿಸಿಕೊಳ್ಳಲು ಸಾಕಷ್ಟು ಹರಸಾಹಸ ಮಾಡಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಈ ವೇಳೆ ತೋಟದ ಕಡೆಗೆ ಬಂದಿದ್ದ ಗ್ರಾಮದ ಜನರು ಅರಣ್ಯ ಇಲಾಖೆಗೆ ಕರಡಿ ಸಿಕ್ಕಿಬಿದ್ದಿರುವ ಕುರಿತು ಮಾಹಿತಿ ನೀಡಿದ್ದಾರೆ. ರಾಮನಗರದ ಅರಣ್ಯ ಇಲಾಖೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲನೆ ನಡೆಸಿದರು.

ನಂತರ ಬನ್ನೇರುಘಟ್ಟದ ವನ್ಯಜೀವಿ ಧಾಮದ ವೈದ್ಯರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನು ಉರುಳಿನಿಂದ ಬಿಡಿಸಿದರು.
ಉರುಳಿನಿಂದ ಬಿಡಿಸಿಕೊಳ್ಳಲು ಹೋರಾಡಿದ ಕರಡಿ ಗಾಯಗೊಂಡಿತ್ತು. ಕರಡಿಗೆ ಚಿಕಿತ್ಸೆಗೆ ನೀಡಿ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲು ತೆಗೆದುಕೊಂಡು ಹೋಗಲಾಯಿತು.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಆತಂಕದಲ್ಲೇ ಕಾಲ ಕಳೆಯುತ್ತಿರುವುದಾಗಿ ಗ್ರಾಮಸ್ಥರು ಅಳಲು ತೋಡಿಕೊಂಡರು.












Click it and Unblock the Notifications