ಕಾಂಗ್ರೆಸ್ನವರು "ಕೈ" ಕೊಡ್ತಾರೆ, ಆದ್ದರಿಂದ ಮೋದಿಯವರನ್ನು ನೋಡಿ ಬಿಜೆಪಿಗೆ ವೋಟ್ ಹಾಕಿ: ಆರ್.ಆಶೋಕ್ ಮನವಿ
ಕೈಗೆ ವೋಟ್ ಹಾಕಿದರೆ "ಕೈ" ಕೊಡುತ್ತಾರೆ. ಅಭ್ಯರ್ಥಿಯನ್ನು ನೋಡಬಾರದು. ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಬೇಕು ಎಂದು ಆರ್. ಅಶೋಕ್ ಕನಕಪುರದ ಜನರಿಗೆ ಮನವಿ ಮಾಡಿದರು.
ರಾಮನಗರ, ಮಾರ್ಚ್, 06: ಕೈಗೆ ವೋಟ್ ಹಾಕಿದರೆ "ಕೈ" ಕೊಡುತ್ತಾರೆ. ನೀವು ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನೋಡಬಾರದು. ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಬೇಕು. ಮತ ಪತ್ರದಲ್ಲಿ ಕಮಲದ ಗುರುತ್ತನ್ನು ನೋಡಬೇಕು. ನೀವು ಬಿಜೆಪಿಗೆ ಮತ ಹಾಕಿದರೆ ದೇಶಕ್ಕೆ ಸುಭದ್ರ ಸರ್ಕಾರ ನೀಡುತ್ತೇವೆ ಎಂದು ಕಂದಾಯ ಸಚಿವ ಆರ್.ಆಶೋಕ್ ಕನಕಪುರದ ಜನರಲ್ಲಿ ಮನವಿ ಮಾಡಿದರು.
ಕನಕಪುರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಆಶೋಕ್, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ನಿಮ್ಮ "ಕೈ" ಬಿಡುತ್ತಾರೆ. ಕಾಂಗ್ರೆಸ್ನವರು ಈಗ ಗ್ಯಾರೆಂಟಿ ಅಂತಾ ಓಡಾಡುತ್ತಿದ್ದಾರೆ. 50 ವರ್ಷ ದೇಶ ಆಳಿದ್ದಾರಲ್ಲ ಅವಾಗ ಏನು ಗ್ಯಾರೆಂಟಿ ಕೊಟ್ಟರು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವಿರುದ್ಧ ಅಶೋಕ್ ಆಕ್ರೋಶ
ದೇಶದಲ್ಲಿ ಬಿಜೆಪಿ ಸರ್ಕಾರ ಸುಭದ್ರ ಇದೆ. ಮೋದಿಯವರು ಆಡಳಿತ ಮಾಡಿರುವುದು ಕೇವಲ 9 ವರ್ಷ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಪಾಕಿಸ್ತಾನದ ಸ್ಥಿತಿ ಏನಾಗಿದೆ. ಪಾಕಿಸ್ತಾನವನ್ನು ಚೈನ್ ಹಾಕಿ ಕಟ್ಟಿಹಾಕಿದ್ದಾರೆ. ಅದೇ ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಇದ್ದಾಗ ಹುಲಿಗಳ ತರ ಬರುತ್ತಿದ್ದರು. ನಮ್ಮ ನೆಲದಲ್ಲಿ ಭಯೋತ್ಪಾದನೆ ಕೃತ್ಯವನ್ನು ಮಾಡುತ್ತಿದ್ದರು. ಈಗ ಮೋದಿ ಬಂದಮೇಲೆ ಪಾಕಿಸ್ತಾನದ ಸ್ಥಿತಿ ಏನಾಗಿದೆ ನೀವೆ ನೋಡಿ ಎಂದರು.
ಭಾರತ್ ಜೋಡೋ ಯಾತ್ರೆ ಮಾಡಿದ ರಾಹುಲ್ ಗಾಂಧಿ ಇದೀಗ ಲಂಡನ್ಗೆ ಓಡಿಹೋಗಿದ್ದಾರೆ. ಗಡ್ಡ ಬಿಟ್ಟುಕೊಂಡು ಲಂಡನ್ ಸೇರಿಕೊಂಡಿದ್ದಾರೆ. ಇಂತಹ ಕಾಂಗ್ರೆಸ್ ಸರ್ಕಾರ ನಮಗೆ ಬೇಕಾ? ಕಾಂಗ್ರೆಸ್ನವರು ಪಾಕಿಸ್ತಾನದ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು. ಆದರೆ ಈಗ ದೇಶದ ಜನ ಮೀಸೆ ತಿರುವಿಕೊಂಡು ಓಡಾಡುತ್ತಿದ್ದಾರೆ. ಹಾಗಾಗಿ ಬಿಜೆಪಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಎಚ್.ಡಿ.ಕೆ ಮತ್ತು ಡಿ.ಕೆ.ಶಿ ವಿರುದ್ಧ ವಾಗ್ದಾಳಿ
ಕಳೆದ ಬಾರಿ 2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಪಡೆದಿತ್ತು. ಸರ್ಕಾರ ರಚನೆ ಮಾಡಲು ಇನ್ನೂ ಕೇವಲ 14 ಸ್ಥಾನ ಮಾತ್ರ ಕೊರತೆ ಇತ್ತು. ಕಾಂಗ್ರೆಸ್ ಪಕ್ಷಕ್ಕೆ ಬರಿ 70 ಸ್ಥಾನ ಬಂತು. ಆಗ ಮೈತ್ರಿ ಮಾಡಿಕೊಂಡು ಜೋಡೆತ್ತು ಅಂತಾ ಓಡಾಡಿದರು. ಆದರೆ ಅವರ ಸರ್ಕಾರ ಎಷ್ಟು ದಿನ ಇತ್ತು. ಕೇವಲ 10 ತಿಂಗಳಲ್ಲೇ ಸರ್ಕಾರ ಬಿದ್ದು ಹೋಯಿತು. ನೀವು ಹಾಕಿದ ವೋಟು ಸಾರ್ಥಕ ಆಯ್ತಾ? ಎಂದು ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಕನಕಪುರದಲ್ಲಿ ಬದಲಾವಣೆ ತರಬೇಕಿದೆ
ಈ ಬಾರಿ ಕನಕಪುರದಲ್ಲಿ ಬದಲಾವಣೆ ತರಬೇಕಿದೆ. ಕನಕಪುರದಲ್ಲಿ ಕಾಂಗ್ರೆಸ್ ಬೇಕಾ? ಇವರಿಗೆ ಅಧಿಕಾರ ಕೊಟ್ಟಾಗ ಏನು ಮಾಡಿದರು? ಇವರ ಜೊತೆ ಇದ್ದವರು ಬಾಂಬೆಗೆ ಓಡಿಹೋದರು. ಇವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ. ಇವತ್ತು ನೀವು ಭಯ ಬೀಳದೆ ಬಂದು ಮತ ಹಾಕಿ. ನಾವು ಸೂಕ್ತ ಅಭ್ಯರ್ಥಿ ಹಾಕುತ್ತೇವೆ. ಅಭ್ಯರ್ಥಿ ನೋಡಿ ವೋಟ್ ಹಾಕಬೇಡಿ. ಮೋದಿ ನೋಡಿ ವೋಟ್ ಹಾಕಿ ಎಂದು ಮತದಾರರಿಗೆ ಕಂದಾಯ ಸಚಿವ ಆರ್.ಆಶೋಕ್ ಕರೆ ನೀಡಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ
ಬಿಜೆಪಿ ಅಭಿವೃದ್ಧಿ ಪರವಾದ ಸರ್ಕಾರವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ವಾಸ್ತವ್ಯ ಮಾಡಿದ ಪ್ರತಿ ಗ್ರಾಮಗಳು ಅಭಿವೃದ್ಧಿ ಆಗುತ್ತಿವೆ. ಬಿಜೆಪಿ ಅವಧಿಯಲ್ಲಿ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪುತ್ತಿವೆ. ಇಂತಹ ಬಿಜೆಪಿ ಸರ್ಕಾರಕ್ಕೆ ಮತ್ತೊಮ್ಮೆ ನಿಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು.
ದೇಶದ ಮತದಾರರು ಸ್ವತಂತ್ರವಾಗಿ ಮತ ಹಾಕಬೇಕು. ಸ್ವಾಭಿಮಾನದ ಮತವನ್ನು ಬದಲಾವಣೆಗಾಗಿ ಹಾಕಿ. ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಬಲ್ ಇಂಜಿನ್ ಸರ್ಕಾರಕ್ಕೆ ನೀಡಿ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಕನಕಪುರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮನವಿ ಮಾಡಿದರು.












Click it and Unblock the Notifications