ನಾನು ಸ್ವಾರ್ಥಿಯಾಗುವುದಿಲ್ಲ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ: ನಿಖಿಲ್ ಕುಮಾರಸ್ವಾಮಿ
ರಾಮನಗರ, ಡಿಸೆಂಬರ್, 14: ನಾನು ಸ್ವಾರ್ಥಿ ಆಗುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸ್ವತಂತ್ರ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ನನ್ನ ಮೂದಲ ಅದ್ಯತೆ ಆಗಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ಪಕ್ಷಕ್ಕೆ ಬಿಟ್ಟಿದ್ದು ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ತಿಳಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಡಿಸೆಂಬರ್ 16ರಂದು ಜಿಲ್ಲಾ ಕೇಂದ್ರದಲ್ಲಿ ಶ್ರೀನಿವಾಸ ಕಲ್ಯಾಣ ದಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹಾಗೂ ಡಿಸೆಂಬರ್ 15 ರಿಂದ ಪಂಚರತ್ನ ರಥ ಯಾತ್ರೆ ಜಿಲ್ಲೆ ಪ್ರವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಪೂರ್ವಬಾವಿ ಸಭೆ ನಡೆಸಿದರು. ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಮಾಧ್ಯಮಗಳಲ್ಲಿ ಪದೇಪದೇ ನಿಖಿಲ್ ಕುಮಾರಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಯಾವ ಕ್ಷೇತ್ರದಲ್ಲಿ ಸ್ವರ್ಧೆ ಮಾಡುತ್ತಾರೆ ಎಂಬ ವಿಚಾರಗಳು ಪ್ರಸ್ತಾಪವಾಗುತ್ತಿದೆ. ನನ್ನ ಪ್ರಥಮ ಆದ್ಯತೆ ಪಕ್ಷ ಸಂಘಟನೆಯಾಗಿದೆ ಎಂದರು.
ಜನವರಿ ತಿಂಗಳಿನಲ್ಲಿ ಹಲವು ಕ್ಷೇತ್ರಗಳ ಪ್ರವಾಸ ಹಮ್ಮಿಕೊಂಡಿದ್ದೇನೆ. ಕ್ಷೇತ್ರದಲ್ಲಿನ ಯುವ ಶಕ್ತಿಯನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡುತ್ತೇನೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವನ್ನು ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದರು.

ಮುಳಬಾಗಿಲಿನಿಂದ ರಥಯಾತ್ರೆ ಪ್ರಾರಂಭ
ನವೆಂಬರ್ 18 ರಂದು ಮುಳಬಾಗಿಲುನಿಂದ ಪ್ರಾರಂಭವಾದ ಪಂಚರತ್ನ ರಥಯಾತ್ರೆ ಅಭೂತಪೂರ್ವ ಅಪಾರ ಜನಸ್ಪಂದನೆಯೊಂದಿಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ವಿವಿಧೆಡೆ ಅತ್ಯಂತ ಯಶಸ್ವಿಯಾಗಿದೆ. ಜೆಡಿಎಸ್ ಪಕ್ಷಕ್ಕೆ ಜನತೆ ಅಧಿಕಾರ ನೀಡಿದರೆ, ಯಾವ ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎಂಬುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜನತೆಗೆ ಮನದಟ್ಟು ಮಾಡುತ್ತಿದ್ದಾರೆ.

ಪಂಚರತ್ನ ರಥಯಾತ್ರೆಗೆ ಜನರಿಂದ ಬೆಂಬಲ
ಪಂಚರತ್ನ ರಥಯಾತ್ರೆ ಡಿಸೆಂಬರ್ 15 ರಂದು ರಾಮನಗರ ಜಿಲ್ಲೆಯನ್ನು ಪವೇಶ ಮಾಡಲಿದೆ. ಇದುವರೆಗೂ ಪಂಚರತ್ನ ರಥ ಹೋದ ಕಡೆಯಲ್ಲ ಜನರು ಬೆಂಬಲ ವ್ಯಕ್ತಪಡಿಸಿದರೆ. ಅಲ್ಲದೇ ಪಂಚರತ್ನ ರಥಯಾತ್ರೆಯನ್ನು ರಾಮನಗರ ಜಿಲ್ಲೆಯಲ್ಲಿ ಜನರು ಯಾವ ರೀತಿ ಬೆಂಬಲಿಸುತ್ತಾರೆ ಎಂದು ರಾಜ್ಯವೇ ಇತ್ತ ನೋಡುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಪಂಚರಥಯಾತ್ರೆಗೆ ರೂಪರೇಷೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿ ಸಭೆ ನಡೆಸಿದ್ದೇನೆ ಎಂದರು.

ಮಾರ್ಗಗಳ ವಿವರಗಳನ್ನು ತಿಳಿಸಿದ ನಿಖಿಲ್
ಡಿಸೆಂಬರ್ 15 ಪಂಚರತ್ನ ರಥ ಮಾಗಡಿ ಬೃಹತ್ ಸಮಾವೇಶ ನಡೆಸುವ ಮೂಲಕ ಜಿಲ್ಲೆ ಪ್ರವೇಶ ಮಾಡಲಿದೆ. ಡಿಸೆಂಬರ್ 16 ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಂಚರತ್ನ ರಥಯಾತ್ರೆ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ತಿರುಪತಿ ಮೂಲ ವಿಗ್ರಹದೊಂದಿಗೆ ಐತಿಹಾಸಿಕ ಶ್ರೀನಿವಾಸ ಕಲ್ಯಾಣ ದಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 17ರಂದು ನೂತನ ತಾಲೂಕು ಹರೋಹಳ್ಳಿ ವ್ಯಾಪ್ತಿಯಲ್ಲಿ ರಥ ಯಾತ್ರೆ ನಡೆಯಲಿದೆ. ಡಿಸೆಂಬರ್ 18ಕ್ಕೆ ಕನಕಪುರ ತಾಲೂಕಿನಲ್ಲಿ ಯಾತ್ರೆ ನಡೆಯಲಿದೆ. ಡಿಸೆಂಬರ್ 19 ರಂದು ಬೊಂಬೆನಾಡು ಚನ್ನಪಟ್ಟಣದಲ್ಲಿ ರಥಯಾತ್ರೆ ಜರುಗಲಿದೆ. ಸಮಯದ ಅಭಾವ ಕಾರಣ ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ದಿನಕ್ಕೆ ಸೀಮಿತ ರಥಯಾತ್ರೆಯನ್ನು ಮಾಡಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಎಚ್ಡಿಕೆ ಹುಟ್ಟುಹಬ್ಬ ಸಂಭ್ರಮಕ್ಕೆ ತಯಾರಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ಅವಿಸ್ಮರಣೀಯಗೊಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ತಿರುಪತಿಯ ಮೂಲ ವಿಗ್ರಹ ತಂದು ಅದ್ದೂರಿ ಶ್ರೀನಿವಾಸ ಕಲ್ಯಾಣ ದಾರ್ಮಿಕ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಪಾಲ್ಗೊಳ್ಳುವ ನಿರೀಕ್ಷೆಯೂ ಇದೆ. ತಿರುಪತಿ ತಿಮ್ಮಪ್ಪ ದೇಗುಲದ ಅರ್ಚಕರೇ ಪೂಜೆ ನೆರವೇರಿಸುತ್ತಾರೆ. ಮೂಲದೇವರ ವಿಗ್ರಹವನ್ನು 11 ಕಲಾತಂಡಗಳೊಂದಿಗೆ ರಾಮನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದರು.
ಪಕ್ಷಾತೀತವಾಗಿ ಶ್ರೀನಿವಾಸ ಕಲ್ಯಾಣ ದಾರ್ಮಿಕ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಅಲ್ಲದೆ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸುತ್ತೇವೆ. ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಅವರ ಧರ್ಮಪತ್ನಿ ಚನ್ನಮ್ಮನವರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಬೇರೆ ಯಾರು ವೇದಿಕೆಯಲ್ಲಿ ಇರುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications