ರಾಮನಗರ: ಮಳೆ, ನೆರೆ ಪರಿಹಾರ ವಿತರಿಸಿದ ಅಶ್ವಥ್ ನಾರಾಯಣ
ರಾಮನಗರ, ಆಗಸ್ಟ್ 8: ಭಾರೀ ಮಳೆಗೆ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾಗಿದ್ದ ರಾಮನಗರ ಜಿಲ್ಲೆಯ ನಾನಾ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಸೋಮವಾರ ಭೇಟಿ ನೀಡಿದರು.
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಕೆರೆಯ ನೀರು ನುಗ್ಗಿ ಮನೆ ಮಠ ಕಳೆದುಕೊಂಡಿರುವ 36 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರದ ಚೆಕ್ ಗಳನ್ನು ಡಾ. ಸಿ. ಎನ್.ಅಶ್ವಥ್ ನಾರಾಯಣ ವಿತರಣೆ ಮಾಡಿ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕ್ಷೇತ್ರದ ಶಾಸಕ ಎ. ಮಂಜುನಾಥ್ ಜೊತೆಗಿದ್ದರು.
ನಂತರ ಕೆಲವು ವರ್ಷಗಳ ನಂತರ ತುಂಬಿರುವ ಮಾಯಸಂದ್ರ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬಾಗಿನ ಅರ್ಪಿಸಿದರು. ಅಂತೆಯೇ ಗ್ರಾಮಸ್ಥರು, ಗ್ರಾಮದ ಪ್ರಮುಖರು ಸೇರಿದಂತೆ ಅಪಾರ ಅಭಿಮಾನಿಗಳೊಂದಿಗೆ ಸಂಕೀಘಟ್ಟ ಕೆರೆಗೂ ಭೇಟಿ ನೀಡಿ ತುಂಬಿದ ಕೆರೆಗೆ ಬಾಗಿನ ಅರ್ಪಿಸಿದರು.

ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ
ಮಾಯಸಂದ್ರ ಕೆರೆಗೆ ಬಾಗಿನ ಸಮರ್ಪಿಸಿದ ನಂತರ ಭಾರೀ ಮಳೆಗೆ ಮನೆ ಕಳೆದುಕೊಂಡಿರುವ ಯಲ್ಲಾಪುರ, ಮುತ್ತು ಗದಹಳ್ಳಿ, ಕೆಂಚನಪಾಳ್ಯಗಳ ಒಟ್ಟು 7 ಮಂದಿಗೆ ಒಟ್ಟು 5 ಲಕ್ಷ ರೂ. ಪರಿಹಾರ ವಿತರಿಸಿದರು. ಈ ಪೈಕಿ ಮನೆ ವಿಪರೀತ ಹಾನಿಗೊಳಗಾಗಿರುವ ಮೂರು ಮಂದಿಗೆ ತಲಾ 95 ಸಾವಿರ ರೂಪಾಯಿ ಪರಿಹಾರದ ಚೆಕ್ಗಳನ್ನು ಅಶ್ವಥ್ ನಾರಾಯಣ್ ವಿತರಿಸಿದರು.
ಈಡಿಗರ ಪಾಳ್ಯಕ್ಕೂ ಭೇಟಿ ನೀಡಿದ ಸಚಿವರು, ಉಕ್ಕಿ ಹರಿಯುತ್ತಿರುವ ಕಾಲುವೆಯನ್ನು ವೀಕ್ಷಿಸಿದರು. ಈ ವೇಳೆ ಸಚಿವರಿಗೆ ಗ್ರಾಮಸ್ಥರು ಸರಿಯಾದ ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಆದಷ್ಟು ಬೇಗ ಸುಸಜ್ಜಿತ ಸೇತುವೆ ನೀರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದರು.

ನೇಪಾಳ ಮೂಲದ ಮಕ್ಕಳಿಗೂ ಪರಿಹಾರ
ಭಾನುವಾರ ಬೆಳಗಿನ ಜಾವ ತಾಲ್ಲೂಕಿನ ಸೋಲೂರುನಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದ ಪರಿಣಾಮ ಶೆಡ್ ನಲ್ಲಿ ಮಲಗಿದ್ದ ನೇಪಾಳ ಮೂಲದ ಪರ್ಭಿನ್ (4), ಇಷಿಕಾ (3) ಇಬ್ಬರು ಮಕ್ಕಳು ಅಸುನೀಗಿದ್ದರು. ಘಟನೆ ನಡೆದ ಸ್ಥಳಕ್ಕೆ ಸಚಿವ ಅಶ್ವಥ್ ನಾರಾಯಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
"ಈ ಮಕ್ಕಳು ನೇಪಾಳಿ ಕುಟುಂಬಕ್ಕೆ ಸೇರಿದವರಾದ್ದರಿಂದ ಪರಿಹಾರ ಕೊಡಲು ತಾಂತ್ರಿಕ ಅಡಚಣೆಗಳಿವೆ. ಆದರೂ ಪರಿಹಾರದ ಚೆಕ್ ಸಿದ್ಧಪಡಿಸಿ ಇಡಲಾಗಿದೆ. ಇರುವ ತೊಡಕುಗಳನ್ನು ನಿವಾರಿಸಿ 2-3 ದಿನಗಳಲ್ಲಿ ಚೆಕ್ ವಿತರಿಸಲಾಗುವುದು" ಎಂದು ಅಶ್ವಥ್ ನಾರಾಯಣ ನೊಂದ ಕುಟುಂಬಗಳಿಗೆ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ
"ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇದಕ್ಕೆ ಸಂಬಂಧಿಸಿದ ಸರಕಾರದ ಖಾತೆಯಲ್ಲಿ 16 ಕೋಟಿ ರೂ. ಇದೆ. ತಹಶೀಲ್ದಾರ್ ಅವರ ಖಾತೆಗಳಲ್ಲಿ 2.5 ಕೋಟಿ ರೂ. ಹಣ ಇದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಯಾವುದೇ ಹಣದ ಕೊರತೆಯಂತಹ ಸಮಸ್ಯೆ ಇಲ್ಲ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಆದ್ದರಿಂದ ಯಾರೂ ತಪ್ಪು ಮಾಹಿತಿಯನ್ನು ನಂಬಬಾರದು. ಜಿಲ್ಲಾಡಳಿತ ನೆರೆ ಪರಿಸ್ಥಿತಿಯನ್ನು ಎದುರಿಸಲು ಸಮರ್ಥವಾಗಿದೆ" ಎಂದು ಅಶ್ವಥ್ ನಾರಾಯಣ ಸ್ಪಷ್ಟ ಪಡಿಸಿದರು.

ಕೇಂದ್ರ ಸರಕಾರದ ಸಹಾಯ
"ನೆರೆಯಿಂದ ಸಂತ್ರಸ್ತರಾಗಿರುವ ಎಲ್ಲರಿಗೂ ತಕ್ಷಣವೇ ಪರಿಹಾರ ಕೊಡಲಾಗುವುದು. ನೆರೆ ಸಂಬಂಧದ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ರಾಜ್ಯ ಸರಕಾರ ನೆರೆ ಪರಿಸ್ಥಿತಿ ಎದುರಿಸಲು ಹಾಗೂ ತುರ್ತಾಗಿ ನೊಂದವರ ನೆರವಿಗೆ ಧಾವಿಸಲು ಕೇಂದ್ರ ಸರಕಾರದ ಸಹಾಯವೂ ಇದೆ" ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.












Click it and Unblock the Notifications