ಬಿಡದಿ ನಿತ್ಯಾನಂದ ಸ್ವಾಮಿ ವಿರುದ್ಧ ರಾಮನಗರ ಜಿಲ್ಲಾ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್
ರಾಮನಗರ, ಫೆಬ್ರವರಿ 19: ಬಿಡದಿಯ ನಿತ್ಯಾನಂದ ಸ್ವಾಮಿ ವಿರುದ್ಧ ರಾಮನಗರದ ಜಿಲ್ಲಾ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ. ಹೈಕೋರ್ಟ್ ನಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಅವರು ಆದೇಶ ಹೊರಡಿಸಿದ್ದಾರೆ.
ನಿತ್ಯಾನಂದ ಸ್ವಾಮಿ ಪದೇ ಪದೇ ನ್ಯಾಯಾಲಯದ ವಿಚಾರಣೆಗೆ ಗೈರಾಗುತ್ತಿದ್ದು, ಅವರ ಪರ ವಕೀಲರು ವಿವಿಧ ಕಾರಣ ನೀಡಿ ವಿಚಾರಣೆ ವಿನಾಯಿತಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಕೂಡ ಹಲವು ಬಾರಿ ನಿತ್ಯಾನಂದ ಪರ ವಕೀಲರ ಅರ್ಜಿ ಮಾನ್ಯ ಮಾಡಿತ್ತು.
ನಿತ್ಯಾನಂದ ಸ್ವಾಮಿ ಪದೇ ಪದೇ ವಿಚಾರಣೆಗೆ ಗೈರಾಗುತ್ತಿರುವುದನ್ನು ಪ್ರಶ್ನಿಸಿ ದೂರುದಾರ ಕೆ.ಲೆನಿನ್ ಹೈಕೋರ್ಟ್ ಕದತಟ್ಟಿದ್ದರು. ಕೆ.ಲೆನಿನ್ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್, ನಿತ್ಯಾನಂದ ಸ್ವಾಮಿ ನೀಡಿದ್ದ ಜಾಮೀನು ರದ್ದುಮಾಡಿ ಹಾಗೂ ಜಾಮೀನಿಗೆ ನೀಡಿದ್ದ ಭದ್ರತೆ ನಗದನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕಳೆದ 5 ರಂದು ಹೈಕೋರ್ಟ್ನಲ್ಲಿ ಸಿಓಡಿ ಅಧಿಕಾರಿಗಳಿಗೆ ಆದೇಶ ಹೊರಡಿಸಿತ್ತು.

ಹೈಕೋರ್ಟ್ ಹೊರಡಿಸಿದ ಆದೇಶದ ಮೇರೆಗೆ ಇಂದು ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯ ನಿತ್ಯಾನಂದನ ಬಂಧನಕ್ಕೆ ಆದೇಶ ನೀಡಿ, ಜಾಮೀನು ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸಿಓಡಿ ಅಧಿಕಾರಿಗಳಿಗೆ ಸೂಚಿಸಿದೆ ಎಂದು ನಿತ್ಯಾನಂದನ ವಿರುದ್ಧ ವಾದ ಮಂಡಿಸಿದ್ದ ಸರ್ಕಾರಿ ಪರ ವಕೀಲ ರಘು ತಿಳಿಸಿದ್ದಾರೆ.












Click it and Unblock the Notifications