ಸಿಎಂ ಸ್ಥಾನ ಭದ್ರಪಡಿಸಿಕೊಳ್ಳಲು ಕುಮಾರಸ್ವಾಮಿ ನಿರಂತರ ತಂತ್ರ!
Recommended Video

ಮೈಸೂರು, ಅಕ್ಟೋಬರ್.04: ರಾಮನಗರವನ್ನು ಜೆಡಿಎಸ್ ತೆಕ್ಕೆಯಲ್ಲೇ ಉಳಿಸಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಈ ಸಂಬಂಧ ಮುಂದೆ ಮಾಡಬೇಕಾದ ಕಾರ್ಯತಂತ್ರಗಳ ಕುರಿತು ಮುಖಂಡರೊಂದಿಗೆ ಚರ್ಚಿಸಿದ್ದಾರೆ.
ತಮ್ಮ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ಅವರು ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಕಾರ್ಯಕರ್ತರ ಸಭೆ ನಡೆಸಿ ಮುಂದಿನ ಕಾರ್ಯ ಯೋಜನೆಯ ಕುರಿತು ಹೆಜ್ಜೆಗಳನ್ನಿಡಲಿದ್ದಾರೆ ಎನ್ನಲಾಗುತ್ತಿದೆ.
ಹಾಗೆ ನೋಡಿದರೆ ಅವರಿಗೆ ಸಿಎಂ ಕುರ್ಚಿ ಮುಳ್ಳಾಗಿ ಚುಚ್ಚುತ್ತಿದೆಯಾ ಎಂಬ ಪ್ರಶ್ನೆಗೆ ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ಘಟನಾವಳಿಗಳು, ಅವರು ತೆಗೆದುಕೊಳ್ಳುತ್ತಿರುವ ತೀರ್ಮಾನಗಳು, ನಡೆದುಕೊಳ್ಳುತ್ತಿರುವ ರೀತಿ, ನೀತಿಗಳೆಲ್ಲವೂ ಹೌದು ಎಂಬುದನ್ನು ಸಾಕ್ಷೀಕರಿಸುತ್ತಿದೆ.
ಒಂದೆಡೆ ಸಚಿವ ಸ್ಥಾನಕ್ಕೆ ಹಾತೊರೆಯುತ್ತಿರುವ ಶಾಸಕರು, ಮತ್ತೊಂದೆಡೆ ಸಚಿವ ಸ್ಥಾನ ಸಿಕ್ಕರೂ ಅದರಿಂದ ತೃಪ್ತರಾಗದೆ ಬದಲಿ ಖಾತೆಗೆ ಬೇಡಿಕೆಯಿಡುತ್ತಿರುವ ಸಚಿವರು. ಇದೆಲ್ಲದರ ಮಧ್ಯೆ ಸರ್ಕಾರ ಉರುಳಿಸಲು ತಂತ್ರ ರೂಪಿಸುತ್ತಿರುವ ಬಿಜೆಪಿ ನಾಯಕರು.
ಮುಜುಗರ ಮತ್ತು ಆತಂಕಕ್ಕೀಡು ಮಾಡುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳು, ಅತಿವೃಷ್ಠಿ, ಅನಾವೃಷ್ಠಿಯಾಂದಾದ ಅನಾಹುತಗಳು ಅದಕ್ಕೆ ಪರಿಹಾರ ನೀಡಲೇಬೇಕಾದ ಅನಿವಾರ್ಯತೆಗಳು..
ಹೀಗೆ ಒಂದೇ ಎರಡೇ ನೂರಾರು ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಸದ್ಯಕ್ಕೆ ಸಿಎಂ ಖುರ್ಚಿ ಹೂವಿನ ಹಾಸಿಗೆಯಲ್ಲ ಎಂಬುದು ಮನದಟ್ಟಾಗುತ್ತಿದೆ. ಮುಂದೆ ಓದಿ...

ಖಜಾನೆಯಲ್ಲಿ ಹಣವೇ ಇಲ್ಲ
ಚುನಾವಣಾ ಪೂರ್ವ ರೈತರ ಸಾಲ ಮನ್ನಾ ಮಾಡುವುದಾಗಿ ವಾಗ್ದಾನ ಮಾಡಿ ಸಿಎಂ ಆಗಿರುವ ಎಚ್ ಡಿಕೆ ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಜ್ಯದಲ್ಲಿ 45 ಸಾವಿರ ಕೋಟಿ ರೈತರ ಸಾಲಮನ್ನಾದ ಘೋಷಣೆ ಮಾಡಿದ್ದಾರೆ. ಆದರೆ ಈ ಹಣವನ್ನು ಬೇರೆ ಮೂಲಗಳಿಂದ ಸಂಗ್ರಹಿಸಲು ಸಾಧ್ಯವಿಲ್ಲ.
ಸಾಲಮನ್ನಾ ಮಾಡಿದ ಪರಿಣಾಮ ಇತರೆ ಕಾಮಗಾರಿ ನಡೆಸಲು ಸರ್ಕಾರದ ಖಜಾನೆಯಲ್ಲಿ ಹಣವೇ ಇಲ್ಲದಾಗಿದೆ. ಅದು ಆಡಳಿತದ ಮೇಲೆ ಪರಿಣಾಮ ಬೀರಿದೆ.

ಒತ್ತಡ ಎದುರಿಸುತ್ತಿರುವ ಸಿಎಂ
ರೈತರ ಸಾಲ ಮನ್ನಾ ಮಾಡಿದ ಹಣವನ್ನು ಇತರೆ ತೆರಿಗೆಯ ಮೂಲಕ ಪಡೆಯುವ ಆಲೋಚನೆ ಸರ್ಕಾರದ್ದಾಗಿದೆ. ಹೀಗಾಗಿ ಎಲ್ಲ ರೀತಿಯಲ್ಲೂ ದರ ಹೆಚ್ಚಳ ಮಾಡುವುದು, ತೆರಿಗೆ ಹೆಚ್ಚಿಸುವುದು ಹೀಗೆ ಯಾವುದಾದರೊಂದು ರೀತಿಯಲ್ಲಿ ಸರ್ಕಾರಕ್ಕೆ ಹಣ ಬರುವಂತೆ ಮಾಡುವುದು. ಆ ಮೂಲಕ ಬ್ಯಾಲೆನ್ಸ್ ಮಾಡುತ್ತಾ ಸರ್ಕಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಒಂದು ಕಡೆ ಕಾರ್ಯಭಾರ ಮತ್ತೊಂದು ಕಡೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ಮುನ್ನೆಡೆಸುವ ಒತ್ತಡ ಎರಡು ಕೂಡ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮತ್ತೆ ನೆನಪಾದ ಕ್ಷೇತ್ರ, ಕಾರ್ಯಕರ್ತರು
ಸಾಲಮನ್ನಾ ಘೋಷಣೆ ಮಾಡಿದ ಬಳಿಕವೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲುತ್ತಿಲ್ಲ. ಇದರ ಜತೆಗೆ ಈ ಬಾರಿ ಮಹಾಮಳೆಯಿಂದಾಗಿ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಇದೆಲ್ಲವನ್ನು ತಡೆದುಕೊಳ್ಳಬೇಕಿದೆ. ಅಗತ್ಯ ಸೌಲಭ್ಯ ಪರಿಹಾರ ಎಲ್ಲವನ್ನೂ ಮಾಡಲೇಬೇಕಾಗಿದೆ.
ಇದ್ಯಾವುದೂ ಅಷ್ಟು ಸುಲಭದ ಕೆಲಸವಾಗಿ ಉಳಿದಿಲ್ಲ. ಸಂಪನ್ಮೂಲ ಕ್ರೋಢೀಕರಣದ ಜತೆಜತೆಯಲ್ಲೇ ಭಿನ್ನಮತೀಯರನ್ನು ಓಲೈಸಿಕೊಳ್ಳುವ ಕೆಲಸವೂ ಆಗಬೇಕಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಬರೀ ರಾಜಕೀಯ ಚಟುವಟಿಕೆಯಲ್ಲೇ ಇದ್ದ ಅವರಿಗೆ ತಮ್ಮ ಕ್ಷೇತ್ರ ಮತ್ತು ಕಾರ್ಯಕರ್ತರು, ಮುಖಂಡರು ಎಲ್ಲರೂ ಮರೆತು ಹೋದಂತಾಗಿತ್ತು.
ಇದೀಗ ಮತ್ತೆ ನೆನಪಾದಂತಾಗಿದೆ. ಇದಕ್ಕೆ ಮುಂಬರುವ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾರಣ ಎಂದರೆ ತಪ್ಪಾಗಲಾರದು.

ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು ಚಿಂತನೆ
ರಾಮನಗರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಬದಿಗೊತ್ತಿ ಕಾರ್ಯಕರ್ತರ ಸಭೆ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ.
ಆದರೆ ಸಭೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಸಿಎಂ ವಿರುದ್ಧವೇ ಗರಂ ಆಗಿರುವುದು ಸ್ವಲ್ಪ ಮಟ್ಟಿಗೆ ಮುಜುಗರ ತಂದಿದೆ. ಆದರೂ ಕಾರ್ಯಕರ್ತರ ಮತ್ತು ನಾಯಕರ ವಿಶ್ವಾಸಕ್ಕೆ ತೆಗೆದುಕೊಂಡು ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications