ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕಣಕ್ಕಿಳಿಯಲ್ಲ : ದೇವೇಗೌಡ
ರಾಮನಗರ, ಅಕ್ಟೋಬರ್ 22: ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಬಿಡದಿ ಸಮೀಪದ ಮ್ಯಾಗ್ನೋಲಿಯಾದಲ್ಲಿ ನಡೆದ ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
"ಚನ್ನಪಟ್ಟಣದಲ್ಲಿ ಕಣಕ್ಕಿಳಿಸಲು ಬೇರೆ ಯಾರನ್ನಾದರೂ ಗುರುತಿಸಿ ಎಂದು ಸ್ಥಳೀಯ ಮುಖಂಡರಿಗೆ ತಿಳಿಸಲಾಗಿದೆ," ಎನ್ನುವ ಮೂಲಕ ಅನಿತಾ ಕುಮಾರಸ್ವಾಮಿಯವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸುವುದಿಲ್ಲ ಎಂದು ದೇವೇಗೌಡರು ಹೇಳಿಕೆ ನೀಡಿದ್ದಾರೆ.
ಇನ್ನು ಆಗಾಗ ಅಪಸ್ವರ ಎತ್ತುತ್ತಿರುವ ಪ್ರಜ್ವಲ್ ರೇವಣ್ಣ ಬಗ್ಗೆ ಮಾತ
ನಾಡಿದ ದೇವೇಗೌಡರು, "ಪ್ರಜ್ವಲ್ ರಾಜಕೀಯದಲ್ಲಿ ಬೆಳೆಯುವುದು ನಿಶ್ಚಿತ. ಆತನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುವುದು," ಎಂದು ಹೇಳಿ, "ನನಗೆ ಬೆಳೆಸುವುದೂ ಗೊತ್ತಿದೆ. ತೀರಾ ಚೇಷ್ಠೆ ಮಾಡಿದರೆ ಹೊರಹಾಕೋದೂ ಗೊತ್ತಿದೆ," ಎಂದು ಎಚ್ಚರಿಕೆ ನೀಡಿದ್ದಾರೆ.

ಟಿಕೇಟನ್ನು ಅಪ್ಪ-ಮಕ್ಕಳು ತೀರ್ಮಾನ ಮಾಡಲ್ಲ
"ಪ್ರಜ್ವಲ್ ರೇವಣ್ಣ ಮಾಧ್ಯಮಗಳಲ್ಲಿ ಮಾತನಾಡೋದನ್ನು ಕೆಲವರು ಮನರಂಜನೆ ಅಂದುಕೊಂಡಿದ್ದಾರೆ. ಮನರಂಜನೆಗೆ ನಾನು ಅವಕಾಶ ನೀಡಲ್ಲ. ಪಕ್ಷಕ್ಕಾಗಿ ಪ್ರಜ್ವಲ್ ರೇವಣ್ಣ ಒಬ್ಬರೇ ದುಡಿಯುತ್ತಿಲ್ಲ. ಸಾಕಷ್ಟು ಜನ ಯೂತ್ಸ್ ಇದ್ದಾರೆ. ರೇವಣ್ಣನ ಮಗ ಒಬ್ನೇನಾ ಇರೋದು? ನಿಖಿಲ್ ಆತನ ತಂದೆಗಾಗಿ ದುಡಿಯುತ್ತೇನೆ ಅಂದಿಲ್ವಾ?" ಎಂದು ಪ್ರಶ್ನಿಸಿದರು. ಅಲ್ಲದೆ ಯಾರದ್ದೋ ನಿದ್ರಾಕ್ಷಿಣ್ಯಕ್ಕೆ ಟಿಕೇಟನ್ನು ಅಪ್ಪ-ಮಕ್ಕಳು ತೀರ್ಮಾನ ಮಾಡಲ್ಲ. ಪ್ರತಿಯೊಂದು ಸೀಟ್ನ್ನು ಗೆಲ್ಲುವುದಕ್ಕಾಗಿ ಪಕ್ಷದಲ್ಲೇ ಲೆಕ್ಕಾಚಾರ ಹಾಕಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಮುಂದಿನ ಚುನಾವಣೆಗೆ ಟಿಕೆಟ್ ವಿಚಾರದಲ್ಲಿ ಹಲವಾರು ಅಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳಿಗೆ ಮನೆ ಮನೆಗೆ ತೆರಳಿ ಕುಮಾರಣ್ಣನ ಸರ್ಕಾರದ ಅವಧಿಯಲ್ಲಿ ಮಾಡಿದ ಯೋಜನೆಗಳು ಹಾಗೂ ಜೆಡಿಎಸ್ ಪಕ್ಷದ ನಿಲುವುಗಳನ್ನು ತಿಳಿಸುವಂತೆ ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹಿಂದೆ ಬೀಳದಂತೆ ಎಚ್ಚರ ವಹಿಸಬೇಕಾಗಿದೆ ಎಂದು ದೇವೇಗೌಡರು ಕಾರ್ಯಯೋಜನೆಗಳ ಬಗ್ಗೆ ವಿವರಣೆ ನೀಡದರು.

ಸಿದ್ದರಾಮಯ್ಯರನ್ನು ಬೆಳೆಸಿದ್ದು ನಮ್ಮ ಪಕ್ಷ
ಹೆಚ್.ಡಿ.ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನೇಕ ತೊಂದರೆಗಳು ಎದುರಾದರೂ ಅತ್ಯುತ್ತಮವಾದ ಆಡಳಿತ ನೀಡಿದರು. ನಮ್ಮ ಪಕ್ಷದಲ್ಲಿ ಎಲ್ಲಾ ಜಾತಿ, ವರ್ಗ, ಸಮುದಾಯವರಿಗೆ ಅಧಿಕಾರ ಹಂಚಿಕೆ ಮಾಡಿದೆ. ನಾವು ಅಧಿಕಾರಕ್ಕೆ ಬರಬೇಕಾದರೆ ಹಿಂದುಳಿದ, ಅಲ್ಪಸಂಖ್ಯಾತ, ದಲಿತರ ಹಾಗೂ ಎಲ್ಲಾ ವರ್ಗದವರ ಬೆಂಬಲ ಅತ್ಯಗತ್ಯವಾಗಿ ಬೇಕಾಗಿದೆ. ನಮ್ಮ ಪಕ್ಷ ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ, ಮಿರಾಜುದ್ದೀನ್ ಪಾಟೀಲರಂತಹ ಹಲವು ನಾಯಕರನ್ನ ಬೆಳೆಸಿದೆ ಎಂದು ಅವರು ಮಾಹಿತಿ ನೀಡಿದರು.

ಕರ್ನಾಟಕಕ್ಕೆ ಕುಮಾರಣ್ಣ
ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನ ಬೂತ್ ಮಟ್ಟದಲ್ಲಿ ಯುವ ಘಟಕದಿಂದ ಆಯೋಜನೆ ಮಾಡಲಾಗುವುದು. ಒನ್ ಬೂತ್ ಟೆನ್ ಯೂಥ್ ಕಾರ್ಯಕ್ರಮದ ಅಡಿಯಲ್ಲಿ ಜೆಡಿಎಸ್ ಯುವ ಘಟಕ ಬಲ ಪಡಿಸಲಾಗುವುದು.
ಇವೆಲ್ಲದರ ಜತೆಗೆ ರಾಷ್ಟ್ರೀಯ ಪಕ್ಷಗಳ ವೈಫಲ್ಯ ಹಾಗೂ ಕುಮಾರಣ್ಣ ಹಾಗೂ ದೇವೇಗೌಡರ ಜನಪರ ಕಾರ್ಯಕ್ರಮಗಳನ್ನ ತಿಳಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿದ್ದೇವೆ. ಪ್ರಾದೇಶಿಕ ಪಕ್ಷ ಅನಿವಾರ್ಯ ಎಂಬ ಸಂದೇಶ ರವಾನೆ ಮಾಡುವ ಉದ್ದೇಶದಿಂದ 'ಕರ್ನಾಟಕಕ್ಕೆ ಕುಮಾರಣ್ಣ' ಕಾರ್ಯಕ್ರಮ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜೆಡಿಎಸ್ ಯುವ ಘಟಕದ ಮುಖಂಡರಿಗೆ ತಮ್ಮ ಅನುಭವದ ಮಾರ್ಗದರ್ಶನ ನೀಡಿದ ದೇವೇಗೌಡರು, ನಮಗೆ 120 ಸ್ಥಾನಗಳನ್ನು ದಾಟಬೇಕು ಎಂಬ ಹಠವಿದೆ ಎಂದು ದೇವೇಗೌಡರು ಒತ್ತಿ ಹೇಳಿದರು.

ಶಿವಮೊಗ್ಗದಲ್ಲಿ ಯುವ ಘಟಕದ ಸಮಾವೇಶ
ನವೆಂಬರ್ ತಿಂಗಳಲ್ಲಿ ಕುಮಾರಸ್ವಾಮಿಯವರ ಉಪಸ್ಥಿತಿಯಲ್ಲಿ ಯುವ ಘಟಕದ ಬೃಹತ್ ಸಮಾವೇಶವನ್ನ ಶಿವಮೊಗ್ಗದಲ್ಲಿ ಆಯೋಜಿಸಲಾಗುವುದು. ದೇವೇಗೌಡರ ಆದರ್ಶ ತತ್ವ ಸಿದ್ಧಾಂತಗಳನ್ನು ನಾನೂ ಕೂಡ ಅಳವಡಿಸಿಕೊಂಡಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು












Click it and Unblock the Notifications