ತಲೆ ಮರೆಸಿಕೊಂಡ ಶಾಸಕ ಗಣೇಶ್, ಪೊಲೀಸರಿಂದ ಹುಡುಕಾಟ
ರಾಮನಗರ, ಜನವರಿ 23: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕಾಗಿ ರಾಮನಗರ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಆನಂದ್ ಸಿಂಗ್ ಮೇಲೆ ಹಲ್ಲೆ, ಜ.23ರಂದು ಹೊಸಪೇಟೆ ಬಂದ್
ಕಳೆದ ಶನಿವಾರ ರಾತ್ರಿ ಈಗಲ್ಟನ್ ರೆಸಾರ್ಟ್ನಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಪ್ರಸ್ತುತ ಅಪೊಲೋ ಆಸ್ಪತ್ರೆಯಲ್ಲಿರುವ ಆನಂದ್ ಸಿಂಗ್ ಅವರು ಪೊಲೀಸರಿಗೆ ಈ ಸಂಬಂಧ ಗಣೇಶ್ ವಿರುದ್ಧ ಹೇಳಿಕೆ ಸಹ ನೀಡಿದ್ದರು.
ಆನಂದ್ ಸಿಂಗ್ ಮೇಲೆ ಹಲ್ಲೆ, ಶಾಸಕ ಗಣೇಶ್ ಬಂಧನ ಸಾಧ್ಯತೆ
ಆನಂದ್ ಸಿಂಗ್ ಹೇಳಿಕೆ ಪಡೆದ ನಂತರ ರಾಮನಗರ ಪೊಲೀಸರು ಶಾಸಕ ಗಣೇಶ್ ಅವರನ್ನು ಬಂಧಿಸುವ ನಿರ್ಣಯ ತಳೆದರು ಇದರ ಮಾಹಿತಿ ಅರಿತ ಶಾಸಕ ಗಣೇಶ್ ತಲೆಮರೆಸಿಕೊಂಡಿದ್ದಾರೆ. ಅವರನ್ನು ಹುಡುಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು ಕಾರ್ಯಾಚರಣೆ ನಡೆಯುತ್ತಿದೆ.
ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಪೆಟ್ಟು ತಿಂದಿರುವ ಶಾಸಕ ಆನಂದ್ ಅವರಿಗೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಅವರ ಕಣ್ಣು ಮತ್ತು ಕಿಬ್ಬೊಟ್ಟೆಗೆ ಗಾಯಗಳಾಗಿವೆ. ಅವರು ಪೂರ್ಣವಾಗಿ ಗುಣವಾಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಶಾಸಕರು ಹೊಡೆದಾಡಿ ರಂಪಾಟ ಮಾಡಿಕೊಳ್ಳಲು ಕಾರಣಗಳೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಪ್ರತಿಭಟನೆ ನಡೆಸಲು ಸಿದ್ಧತೆ ಆರಂಭವಾಗಿದೆ. ಆನಂದ್ ಸಿಂಗ್ ಬೆಂಬಲಿಗರು ತಮ್ಮ ಶಾಸಕರ ಮೇಲೆ ಹಲ್ಲೆ ಖಂಡಿಸಿ ಹೊಸಪೇಟೆ ಬಂದ್ಗೆ ಕರೆ ನೀಡಿದ್ದಾರೆ. ಆದರೆ ಬಂದ್ ಮಾಡದಂತೆ ಆನಂದ್ ಸಿಂಗ್ ಮನವಿ ಮಾಡಿದ್ದಾರೆ.
ಇತ್ತ ಕಂಪ್ಲಿಯಲ್ಲಿ ತಮ್ಮ ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗಣೇಶ್ ಬೆಂಬಲಿಗರು ಪ್ರತಿಭಟನೆ ಮಾಡಲಿದ್ದಾರೆ.