ರಾಮನಗರ: ನಾಪತ್ತೆಯಾಗಿದ್ದ ಮಗು ಅರ್ಕಾವತಿ ನದಿಯಲ್ಲಿ ಶವವಾಗಿ ಪತ್ತೆ, ಸಂಬಂಧಿಯಿಂದಲೇ ಕೊಲೆ
ರಾಮನಗರ, ಸೆಪ್ಟೆಂಬರ್ 22: ಕಳೆದ ಒಂದು ವಾರದ ಹಿಂದೆ ಮನೆಯ ಸಮೀಪದ ಅಂಗಡಿಯಿಂದ ಬಲೂನ್ ತರಲು ತೆರಳಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ರಾಮನಗರದ ಅರ್ಕಾವತಿ ನದಿಯಲ್ಲಿ ಪತ್ತೆಯಾಗಿದ್ದು, ಮೃತ ಮಗುವಿನ ಹತ್ತಿರ ಸಂಬಂಧಿಯೇ ಕೊಂದಿದ್ದಾನೆ ಎನ್ನಲಾಗಿದೆ.
ರಾಮನಗರದ ಮೆಹಬೂಬ್ ನಗರದ ಸುಮೇರ್ ಖಾನ್ ಹಾಗೂ ಅಲ್ಮಜ್ ಬೇಗಂ ಅವರ 4 ವರ್ಷದ ಸಾಕು ಮಗ ದಯಾನ್ ಖಾನ್ ಹತ್ತಿರ ಸಂಬಂಧಿ ಮುಜಾಮಿಲ್ ನಿಂದ ಹತ್ಯೆಗೀಡಾದ ಬಾಲಕ. ಮೃತ ದಯಾನ್ ಖಾನ್ ಸಾಕು ತಾಯಿ ಅಲ್ಮಜ್ ಬೇಗಂರ ಸಹೋದರಿಯ ಗಂಡ ಮುಜಾಮಿಲ್ ಮಗುವನ್ನು ಕೊಂದ ಆರೋಪಿಯಾಗಿದ್ದಾನೆ.
ಮಗು ಕಾಣೆಯಾಗಿರುವ ಬಗ್ಗೆ ನಗರದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಂಶಯದ ಮೇಲೆ ಆರೋಪಿ ಮುಜಾಮಿಲ್ ನನ್ನು ವಿಚಾರಣೆಗೆ ಒಳಪಡಿಸಿದಾಗ, ತಾನೆ ಮಗುವಿನ ಶವವನ್ನು ಚೀಲದಲ್ಲಿ ಕಟ್ಟಿ ಅರ್ಕಾವತಿ ಹೊಳೆಯಲ್ಲಿ ಎಸೆದಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್, ಆರೋಪಿ ಮುಜಾಮಿಲ್ ಮನೆಯ ಮುಂದಿನ ನೀರಿನ ಸಂಪಿಗೆ ಬಾಲಕ ದಯಾನ್ ಖಾನ್ ಬಿದ್ದು ಮೃತಪಟ್ಟಿದ್ದು, ಇದರಿಂದ ಭಯಗೊಂಡು ಮಗುವಿನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಅರ್ಕಾವತಿ ಹೊಳೆಗೆ ಎಸೆದಿರುವುದಾಗಿ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ, ಮಗುವಿನ ಸಾವಿಗೆ ನಿಖರ ಕಾರಣ ಶವದ ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಿದೆ ಎಂದರು.
ನಾಪತ್ತೆಯಾಗಿದ್ದ ಮೃತ ದಯಾನ್ ಖಾನ್ ಪತ್ತೆಗಾಗಿ ಪೋಷಕರು 1 ಲಕ್ಷ ರೂ. ಬಹುಮಾನ ಘೋಷಿಸಿ, ಪೊಲೀಸರೊಂದಿಗೆ ಮಗುವಿನ ಪತ್ತೆಗಾಗಿ ಹಗಲು ರಾತ್ರಿ ಎನ್ನದೇ ಹುಡುಕಾಟದಲ್ಲಿ ತೊಡಗಿದ್ದಾಗ, ಆರೋಪಿ ಮುಜಾಮಿಲ್ ಕೂಡ ಸಂಬಂಧಿಕರೊಂದಿಗೆ ಮಗುವನ್ನು ಹುಡುಕುವ ನಾಟಕ ಮಾಡಿದ್ದಾನೆ.
ಪೊಲೀಸರು ಮತ್ತು ಬಾಲಕನ ಪೋಷಕರ ಹಾದಿ ತಪ್ಪಿಸಲು ಯತ್ನ ನಡೆಸಿದ್ದನು. ಕೊನೆಗೂ ಪೊಲೀಸರ ಚಾಣಾಕ್ಷ ನಡೆ, ಆರೋಪಿ ಮುಜಾಮಿಲ್ ನನ್ನು ಬಲೆಗೆ ಕೆಡವಿದ್ದಾರೆ.












Click it and Unblock the Notifications