ರಾಮನಗರ ಅರಣ್ಯ ಇಲಾಖೆ ಕಾರ್ಯಾಚರಣೆ: ಅಂತರ್ ರಾಜ್ಯ ದಂತಚೋರರ ಬಂಧನ
ರಾಮನಗರ ಅಕ್ಟೋಬರ್ 12: ಅಕ್ರಮವಾಗಿ ಮಾರಾಟ ಮಾಡಲು ಒಂಬತ್ತು ಆನೆ ದಂತ ಸಾಗಿಸುತ್ತಿದ್ದ ಅಂತರ್ರಾಜ್ಯ 8 ಆರೋಪಿಗಳನ್ನು ಬಂಧಿಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದ ಹುಣಸನಹಳ್ಳಿಯಲ್ಲಿ ನಡೆದಿದೆ.
ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ-ಕನಕಪುರ ರಸ್ತೆಯ ಮರಿದೇವರದೊಡ್ಡಿ ಕ್ರಾಸ್ ಬಳಿ ಅಕ್ರಮವಾಗಿ ಆನೆ ದಂತ ಸಾಗಿಸುತ್ತಿದ್ದ ಕಾರಿನ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅರಣ್ಯ ವಲಯ ಸಂಚಾರಿ ದಳ ಹಾಗೂ ಅರಣ್ಯ ಅಪರಾಧ ನಿಯಂತ್ರಣ ಘಟಕದ ಸಿಬ್ಬಂದಿ 8 ಜನ ಆರೋಪಿಗಳನ್ನು ಬಂಧಿಸಿ ಅವರಿಂದ 9 ಆನೆ ದಂತದ ತುಂಡುಗಳು, ಮೊಬೈಲ್ ಪೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿ ಕೊಂಡಿದ್ದಾರೆ.

ಹುಣಸನಹಳ್ಳಿ ವ್ಯಾಪ್ತಿಯಲ್ಲಿ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಉಲ್ಲಂಘಿಸಿ, ಅಕ್ರಮವಾಗಿ ಆನೆದಂತ ಮಾರಾಟ ಯತ್ನ ನಡೆಯುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಅರಣ್ಯ ತನಿಖಾ ದಳ ಹುಣಸನಹಳ್ಳಿ- ಕನಕಪುರ ರಸ್ತೆಯ ಮರಿದೇವರದೊಡ್ಡಿ ಕ್ರಾಸ್ ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.
ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಸೆಕ್ಷನ್ 2 (16)(32), 9, 39, 44, 49B r/w 50, 51, 52, 55, 56 & 57 ಮತ್ತು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 2(6)(7)(b)(iii) r/w 62,71A ರ ಉಲ್ಲಂಘನೆ ಮಾಡಿ, ಹಳದಿ ಬಣ್ಣದ ನಾಮಫಲಕವುಳ್ಳ ಬಿಳಿ ಬಣ್ಣದ ಮಹೀಂದ್ರ ಜೈಲೋ ಕಾರು ನೋಂದಣಿ ಸಂಖ್ಯೆ KA-03 AG-9560ರಲ್ಲಿ ಆರೋಪಿಗಳು ದಂತ ಸಾಗಾಣಿಕೆ ಮಾಡುತ್ತಿದ್ದರು.

ತಮಿಳುನಾಡು ಮೂಲದ ಐಯ್ಯನ್ಕುಟ್ಟಿ ಕುಜಂತಾಯ್ (53). ಕೃಷ್ಣಮೂರ್ತಿ ಗೋಪಾಲ್ (35) ರವಿ.ಎಂ(44). ಅಂದ್ರಪ್ರದೇಶ ಮೂಲದ ಎಂ.ವೆಂಕಟೇಶ (51), ರಾಜ್ಯದ ರತ್ನ.ಯು (46) , ನಾರಾಯಣಸ್ವಾಮಿ.ಎ(50) ಎ.ದಿನೇಶ್ (42) ಹಾಗೂ ಎಸ್.ಮನೋಹರ್ ಪಾಂಡೆ (61) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ವಿರುದ್ಧ ರಾಜ್ಯ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಶೆಡ್ಯೂಲ್-1 ಪಾರ್ಟ್-1 (12ಬಿ), ಆನೆಯ Indian elephant (Elephas maximus) ದಂತವಾಗಿದ್ದು, ಸದರಿ ಕಾಯ್ದೆಯನ್ವಯ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದ್ದು, ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಸೆಕ್ಷನ್ 55ರಡಿ ದೂರನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications